Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋವಿನ ದೃಶ್ಯಗಳು, ಮೃತದೇಹಗಳನ್ನು ಕಂಡು ಕುಗ್ಗಿಹೋಗಿದ್ದೆ; ಪಾಡ್‌ಕ್ಯಾಸ್ಟ್‌ನಲ್ಲಿ ಗೋಧ್ರಾ ಗಲಭೆ ಬಗ್ಗೆ ಪ್ರಧಾನಿ ಮೋದಿ ಮಾತು

ಜೆರೋಧಾ ಮುಖ್ಯಸ್ಥ ನಿಖಿಲ್ ಕಾಮತ್ ಅವರ ಪಾಡ್​ಕಾಸ್ಟ್​ ಶೋನಲ್ಲಿ ಅತಿಥಿಯಾಗಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಗುಜರಾತ್​ ಮುಖ್ಯಮಂತ್ರಿಯಾಗಿದ್ದಾಗ ತಾವು ಎದುರಿಸಿದ ಸವಾಲುಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅವರ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕಿ ತಂದ ಗೋಧ್ರಾ ಗಲಭೆಯ ಬಗ್ಗೆ ಮೋದಿ ಮನಬಿಚ್ಚಿ ಮಾತನಾಡಿದ್ದಾರೆ. 2002ರಲ್ಲಿ ನಡೆದ ಗೋಧ್ರಾ ಗಲಭೆಯಲ್ಲಿ 59 ಜನರು ಮೃತಪಟ್ಟಿದ್ದರು.

ನೋವಿನ ದೃಶ್ಯಗಳು, ಮೃತದೇಹಗಳನ್ನು ಕಂಡು ಕುಗ್ಗಿಹೋಗಿದ್ದೆ; ಪಾಡ್‌ಕ್ಯಾಸ್ಟ್‌ನಲ್ಲಿ ಗೋಧ್ರಾ ಗಲಭೆ ಬಗ್ಗೆ ಪ್ರಧಾನಿ ಮೋದಿ ಮಾತು
Modi With Nikhil Kamath
Follow us
ಸುಷ್ಮಾ ಚಕ್ರೆ
|

Updated on: Jan 10, 2025 | 5:45 PM

ನವದೆಹಲಿ: ಜೆರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ನಡೆಸುವ ಪಾಡ್​ಕಾಸ್ಟ್​ ಶೋನಲ್ಲಿ ಅತಿಥಿಯಾಗಿ ಪಾಳ್ಗೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಪಾಡ್​ಕಾಸ್ಟ್​ ಜಗತ್ತಿಗೆ ಕಾಲಿಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಗುಜರಾತ್​ನಲ್ಲಿ ನಡೆದ ಭೀಕರವಾದ ಗೋಧ್ರಾ ಗಲಭೆಯ ಬಗ್ಗೆ ಮಾತನಾಡಿದ್ದಾರೆ. “2002ರ ಫೆಬ್ರವರಿ 24ರಂದು ನಾನು ಮೊದಲ ಬಾರಿಗೆ ಶಾಸಕನಾದೆ. ಫೆಬ್ರವರಿ 27ರಂದು ನಾನು ವಿಧಾನಸಭೆಗೆ ಹೋಗಿದ್ದೆ. ಗೋಧ್ರಾದಲ್ಲಿ ಅಂತಹ ಘಟನೆ ನಡೆದಾಗ ನಾನು ಕೇವಲ ಮೂರು ದಿನಗಳ ಶಾಸಕನಾಗಿದ್ದೆ. ಮೊದಲು ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ವರದಿಗಳು ನಮಗೆ ಬಂದವು, ನಂತರ ಕ್ರಮೇಣ ನಮಗೆ ಸಾವು-ನೋವುಗಳ ವರದಿಗಳು ಬಂದವು. ಆಗ ನಾನು ಸದನದಲ್ಲಿದ್ದೆ. ನನಗೆ ಬಹಳ ಕಳವಳವಾಯಿತು” ಎಂದು ಪ್ರಧಾನಿ ಮೋದಿ ನೆನಪಿಸಿಕೊಂಡಿದ್ದಾರೆ.

“ನಾನು ವಿಧಾನಸಭೆಯಿಂದ ಹೊರಗೆ ಬಂದ ತಕ್ಷಣ ನಾನು ಗೋಧ್ರಾಕ್ಕೆ ಭೇಟಿ ನೀಡಲು ಬಯಸುತ್ತೇನೆ ಎಂದು ಹೇಳಿದೆ. ಆಗ ಒಂದೇ ಒಂದು ಹೆಲಿಕಾಪ್ಟರ್ ಇತ್ತು. ಅದು ಒಎನ್‌ಜಿಸಿ ಎಂದು ನಾನು ಭಾವಿಸುತ್ತೇನೆ. ಆದರೆ ಅದು ಒಂದೇ ಎಂಜಿನ್ ಆಗಿರುವುದರಿಂದ ಅದರಲ್ಲಿ ವಿಐಪಿಗಳು ಪ್ರಯಾಣಿಸಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು. ಆದರೆ, ನಾನು ಅದೇ ಹೆಲಿಕಾಪ್ಟರ್​​ನಲ್ಲಿ ಆದಷ್ಟು ಬೇಗ ಗೋಧ್ರಾಕ್ಕೆ ಹೋಗಲು ನಿರ್ಧರಿಸಿದೆ. ನಾನು ಓರ್ವ ಕಾಮನ್ ಮ್ಯಾನ್, ನಾನೇನೂ ವಿಐಪಿ ಅಲ್ಲ. ಈ ಹೆಲಿಕಾಪ್ಟರ್​​ನಲ್ಲಿನ ಹೋಗಿ ಏನೇ ಆದರೂ ಅದಕ್ಕೆ ನಾನೇ ಜವಾಬ್ದಾರನಾಗಿರುತ್ತೇನೆ ಎಂದು ನಾನು ಹೇಳಿದೆ” ಎಂದು ಮೋದಿ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ನಾನೂ ಮನುಷ್ಯನೇ ವಿನಃ ದೇವರಲ್ಲ, ತಪ್ಪಾಗುವುದು ಸಹಜ; ಪ್ರಧಾನಿ ಮೋದಿ ಹೀಗಂದಿದ್ದೇಕೆ?

“ಅದೇ ಸಿಂಗಲ್ ಎಂಜಿನ್ ಹೆಲಿಕಾಪ್ಟರ್​​ನಲ್ಲಿ ನಾನು ಗೋಧ್ರಾ ತಲುಪಿದೆ. ಆ ನೋವಿನ ದೃಶ್ಯವನ್ನು, ಆ ಮೃತ ದೇಹಗಳನ್ನು ನಾನು ಕಣ್ಣಾರೆ ಕಂಡೆ. ಆ ದೃಶ್ಯ ನನ್ನನ್ನು ಬಹಳ ಕುಗ್ಗಿಸಿತು. ನಾನು ಮಾನಸಿಕವಾಗಿ ಬಹಳಷ್ಟು ಅನುಭವಿಸಿದೆ. ಆದರೆ ನಾನು ನನ್ನ ಭಾವನೆಗಳಿಂದ ದೂರವಿರಬೇಕಾದ ಸ್ಥಾನದಲ್ಲಿ ಕುಳಿತಿದ್ದೇನೆ ಎಂದು ನನಗೆ ತಿಳಿದಿತ್ತು. ನನ್ನನ್ನು ನಾನು ನಿಯಂತ್ರಿಸಿಕೊಳ್ಳಲು ನನ್ನಿಂದ ಸಾಧ್ಯವಾದಷ್ಟೂ ಪ್ರಯತ್ನ ಮಾಡಿದೆ” ಎಂದು ಪ್ರಧಾನಿ ಹೇಳಿದ್ದಾರೆ.

ಗೋಧ್ರಾದಲ್ಲಿ ನಡೆದ ಗಲಭೆಯಲ್ಲಿ 59 ಜನರು ಸಾವನ್ನಪ್ಪಿದ್ದರು. ಎರಡು ಗಂಟೆಗಳ ಕಾಲ ನಡೆದ ಪಾಡ್‌ಕ್ಯಾಸ್ಟ್‌ನಲ್ಲಿ ರಾಜಕೀಯದ ಕುರಿತು ಮಾತನಾಡಿದ ಮೋದಿ, “ರಾಜಕಾರಣಿಯಾಗುವುದು ಒಂದು ವಿಷಯ ಮತ್ತು ರಾಜಕೀಯದಲ್ಲಿ ಯಶಸ್ವಿಯಾಗುವುದು ಬೇರೆ ವಿಷಯ. ಅದಕ್ಕಾಗಿ ನಿಮಗೆ ಸಮರ್ಪಣೆ, ಬದ್ಧತೆ ಬೇಕು. ನೀವು ಜನರಿಗಾಗಿ ಕೆಲಸ ಮಾಡಬೇಕು ಮತ್ತು ನೀವು ಉತ್ತಮ ತಂಡದ ಆಟಗಾರರಾಗಿರಬೇಕು ಎಂದು ನಾನು ನಂಬುತ್ತೇನೆ” ಎಂದು ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ