
ಮುಂಬೈ, ಸೆಪ್ಟೆಂಬರ್ 25: ಯುವಕನೊಬ್ಬ ತಂದೆ, ಅಜ್ಜನನ್ನು ಕೊಂದು ಚಿಕ್ಕಪ್ಪನ ಮೇಲೂ ಹಲ್ಲೆ ನಡೆಸಿರುವ ಘಟನೆ ಮುಂಬೈನ ಅಂಧೇರಿಯಲ್ಲಿ ನಡೆದಿದೆ. ಆ ವ್ಯಕ್ತಿ ಕ್ಷುಲ್ಲಕ ಕಾರಣಕ್ಕೆ ಕೊಲೆ(Murder) ಮಾಡಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪೊಲೀಸರ ಪ್ರಕಾರ, ಆರೋಪಿ ಚೇತನ್ ಮನೋಜ್ ಭಟ್ರೆ ಮಾದಕ ವ್ಯಸನಿಯಾಗಿದ್ದು, ಆತನನ್ನು ಬಂಧಿಸಲಾಗಿದೆ.
ಮಂಗಳವಾರ ರಾತ್ರಿ ಸಂತೋಷಿಮಾತಾ ಚಾಲ್ನಲ್ಲಿರುವ ಅವರ ನಿವಾಸದಲ್ಲಿ ಈ ಘಟನೆ ನಡೆದಿದೆ. ಆರೋಪಿಯು ಆತನ ಕುಟುಂಬ ಸದಸ್ಯರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಆತನ ತಂದೆ ಮನೋಜ್ ಭಟ್ರೆ (57) ಮತ್ತು ಅಜ್ಜ ಬಾಬು ಭಟ್ರೆ (79) ಸ್ಥಳದಲ್ಲೇ ಸಾವನ್ನಪ್ಪಿದರು. ಅವರ ಚಿಕ್ಕಪ್ಪ ಅನಿಲ್ ಬಾಬು ಭಟ್ರೆ (54) ಗಂಭೀರ ಗಾಯಗೊಂಡಿದ್ದು, ಪ್ರಸ್ತುತ ನಾಯರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಯು ಮಾದಕ ವ್ಯಸನಿಯಾಗಿದ್ದು, ಅವನ ತಂದೆ ಮತ್ತು ಅಜ್ಜನಿಂದ ಆಗಾಗ ಕಿರುಕುಳ ಅನುಭವಿಸಿದ್ದ ಮತ್ತು ನಿಂದನೆಗೆ ಒಳಗಾಗಿದ್ದ ಎನ್ನಲಾಗಿದೆ. ನಿರಂತರ ದೌರ್ಜನ್ಯದಿಂದ ಹತಾಶೆಗೊಂಡು, ಅವನು ಕುಟುಂಬದ ಮೂವರು ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಅಧಿಕಾರಿ ಹೇಳಿದರು.
ಮತ್ತಷ್ಟು ಓದಿ: ಎರಡನೇ ಗರ್ಲ್ಫ್ರೆಂಡ್ ಮಾತು ಕೇಳಿ ಲಿವ್-ಇನ್ ಸಂಗಾತಿಯ ಕೊಂದ ಯುವಕ
ಮತ್ತೊಂದು ಘಟನೆ
ಹೆಂಡತಿ ಯಾರೊಂದಿಗೋ ಓಡಿ ಹೋಗಿದ್ದಕ್ಕೆ ವ್ಯಕ್ತಿಯೊಬ್ಬ ನಾದಿನಿಯನ್ನು ಹತ್ಯೆ(Murder) ಮಾಡಿ, ಆಕೆಯ ಮಗಳ ಬೆರಳು ಕತ್ತರಿಸಿರುವ ಭಯಾನಕ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಖ್ಯಾಲಾದಲ್ಲಿ ಘಟನೆ ನಡೆದಿದೆ. ತನ್ನ ಹೆಂಡತಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಓಡಿಹೋಗಲು ಅವರು ಸಹಾಯ ಮಾಡಿದ್ದಾರೆ ಎಂದು ಆರೋಪಿಸಿರುವ ಆತ ಈ ದುಷ್ಕೃತ್ಯವೆಸಗಿದ್ದಾನೆ. ಮೃತರನ್ನು ಬೌನ್ಸರ್ ಆಗಿ ಕೆಲಸ ಮಾಡುತ್ತಿದ್ದ ನುಸ್ರತ್ (39) ಎಂದು ಗುರುತಿಸಲಾಗಿದ್ದು, ಗಾಯಗೊಂಡ ಅಕ್ಬರಿ (42) ಮತ್ತು ನುಸ್ರತ್ ಅವರ ಪುತ್ರಿ ಸಾನಿಯಾ (20) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪ್ರಕರಣದ ದೂರುದಾರ ಉಸ್ಮಾನ್ (19) ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿ ಇಸ್ತೇಕರ್ ಅಹ್ಮದ್ ಅಲಿಯಾಸ್ ಬಬ್ಬು (49) ವೃತ್ತಿಯಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದು, ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಗಾಜಿಯಾಬಾದ್ನ ಲೋನಿ ನಿವಾಸಿ ಬಬ್ಬು ಬೆಳಗ್ಗೆ 7 ಗಂಟೆ ಸುಮಾರಿಗೆ ನುಸ್ರತ್ ನಿದ್ರಿಸುತ್ತಿದ್ದಾಗ ಆಕೆಯ ಮನೆಗೆ ಹೋಗಿದ್ದಾನೆ. ಅವನು ಹೊಸದಾಗಿ ಖರೀದಿಸಿದ ಕ್ಲೀವರ್ ಅನ್ನು ಟಿಫಿನ್ ಬಾಕ್ಸ್ ಒಳಗೆ ಬಚ್ಚಿಟ್ಟಿದ್ದ. ನುಸ್ರತ್ ಎಚ್ಚರಗೊಂಡು ಅವನಿಗೆ ಚಹಾ ಕೊಟ್ಟಾಗ, ಆತ ಆಯುಧವನ್ನು ಹೊರತೆಗೆದು ಆಕೆಯ ಎದೆ ಮತ್ತು ಕುತ್ತಿಗೆಯ ಮೇಲೆ ಹಲವು ಬಾರಿ ಹಲ್ಲೆ ಮಾಡಿ ಆಕೆಯನ್ನು ಕೊಂದಿದ್ದಾನೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ