
ಕಳೆದ ಒಂದು ವಾರದ ಬಳಿಕ ಬೆಂಗಳೂರಿನಲ್ಲಿ ಇಂದು ಮತ್ತೆ ಜೋರು ಮಳೆ ಆಗಿದೆ. ನೆತ್ತಿ ಸುಡುತ್ತಿದ್ದ ಬಿಸಿಲಿಗೆ ಮಳೆ ಸುರಿದು ತಂಪೆರೆದಿದೆ. ವೀಕೆಂಡ್ ಮೂಡ್ನಲ್ಲಿ ಜನರು ಮಳೆಯ ಆಗಮನದಿಂದ ಶಾಕ್ ಆಗಿದ್ದಾರೆ. ಆದರೆ ಮಳೆ ಹೊಡೆತ್ತಕ್ಕೆ ಸಿಲಿಕಾನ್ ಸಿಟಿ ನಲುಗಿಹೋಗ್ತಿದೆ. ಮಳೆ ಬಂದ್ರೂ ಕಷ್ಟ, ಬಾರದಿದ್ರೂ ಕಷ್ಟ ಎಂಬಂತಾಗಿದೆ ಸ್ಮಾರ್ಟ್ ಸಿಟಿ ಪರಿಸ್ಥಿತಿ.

ವಾರದ ಬಳಿಕ ಮತ್ತೆ ಎಂಟ್ರಿಕೊಟ್ಟ ಮಳೆರಾಯ, ಸಿಟಿ ಮಂದಿಯನ್ನೇ ಥರಗುಟ್ಟುವಂತೆ ಮಾಡಿದ್ದಾನೆ. ವಾಹನ ಸವಾರರಂತೂ ಮಳೆ ನಡುವೆ ಸಿಲುಕಿ ಪರದಾಡಿ ಹೋಗಿದ್ದಾರೆ.

ಮಳೆಯ ಆರ್ಭಟಕ್ಕೆ ನಗರದ ವಿವಿಧೆಡೆ 32 ಮರಗಳು ಧರೆಗುರುಳಿದ್ದು, ಬಿಬಿಎಂಪಿ ಕಂಟ್ರೋಲ್ ರೂಮ್ನ ಹೆಲ್ಪ್ ಲೈನ್ಗೆ ದೂರು ಬಂದಿವೆ. ದೂರು ಬಂದ ಬೆನ್ನಲ್ಲೇ ಬಿಬಿಎಂಪಿ ಸಿಬ್ಬಂದಿಗಳು 18 ಕಡೆ ಮರ ತೆರವು ಮಾಡಿದ್ದಾರೆ.

ಧಾರಾಕಾರ ಮಳೆಯಿಂದಾಗಿ ಗೊರಗುಂಟೆಪಾಳ್ಯ ಸಮೀಪ ಇರುವ ರಾಘವೇಂದ್ರ ಲೇಔಟ್ನಲ್ಲಿ ರಸ್ತೆ ಕೆರೆಯಂತಾಗಿದೆ. ರಸ್ತೆ ಜಲಾವೃತವಾದ ಹಿನ್ನೆಲೆ ವಾಹನ ಸವಾರರು ಪರದಾಡಿದ್ದಾರೆ.

ಇಂದು ಸಂಜೆಯಿಂದಲೇ ಬೆಂಗಳೂರಲ್ಲಿ ಮಳೆ ಅಬ್ಬರಿಸಿದೆ. ಗಾಳಿ ಸಹಿತ ಭಾರಿ ಮಳೆಗೆ ನಗರದೆಲ್ಲೆಡೆ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಜೋರು ಮಳೆ ಹಿನ್ನೆಲೆ ಫ್ಲೈಓವರ್ ಕೆಳಗೆ ಆಶ್ರಯ ಪಡೆದಿದ್ದರು.

ನಗರದಲ್ಲಿ ಇನ್ನೂ 4ದಿನ ಗುಡುಗು ಸಹಿತ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಅಂತ ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂಗಾರು ಪ್ರವೇಶವಾಗುತ್ತಿದೆ.
Published On - 9:23 pm, Sat, 1 June 24