
ಸಾಮಾನ್ಯವಾಗಿ ತಹಶೀಲ್ದಾರ್ ಅಂದರೆ ಕಚೇರಿ ಬಿಟ್ಟು ಹೊರಗೆ ಬರುವುದಿಲ್ಲ, ಜನರ ಕೈಗೆ ಸಿಗಲ್ಲ, ಸಮಸ್ಯೆಗಳಿಗೆ ಸ್ಪಂದಿಸಲ್ಲ ಎಂಬ ಮಾತಿದೆ. ಆದರೆ ಅದಕ್ಕೆ ತದ್ವಿರುದ್ಧವೆಂಬಂತೆ ತಹಶೀಲ್ದಾರ್ ಒಬ್ಬರು ರಜೆ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ಪೇಂಟಿಂಗ್ ಮಾಡಲು ಮುಂದಾಗಿದ್ದಾರೆ. ಸದ್ಯ ಅವರ ಈ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣದ ತಹಶೀಲ್ದಾರ್ ಗಿರೀಶ್ ಅವರ ಕಾರ್ಯಕ್ಕೆ ಇದೀಗ ತಾಲೂಕಿನ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ. ಅಂದಹಾಗೆ ಸರ್ಕಾರಿ ಶಾಲೆಗಳು ಉಳಿಯಬೇಕು, ಬೆಳೆಯಬೇಕು, ಹೆಚ್ಚು ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾಗಬೇಕು ಎಂಬ ಉದ್ದೇಶದಿಂದ ಸ್ವತಃ ಅವರೇ ಸರ್ಕಾರಿ ರಜೆ ದಿನಗಳಲ್ಲಿ ದಾನಿಗಳ ಸಹಾಯ ಪಡೆದು ತಾಲೂಕಿನ ಸರ್ಕಾರಿ ಶಾಲೆಗಳಿಗೆ ಸುಣ್ಣಬಣ್ಣ ಹೊಡೆಯುತ್ತಿದ್ದಾರೆ.

ತಹಶೀಲ್ದಾರ್ ಗಿರೀಶ್ ಅವರು ಸುಣ್ಣಬಣ್ಣ ಹೊಡೆಯುವ ಮೂಲಕ ಸರ್ಕಾರಿ ಶಾಲೆಗಳನ್ನ ಸುಂದರವಾಗಿಸುವ ಮೂಲಕ ಶಾಲೆಯತ್ತ ಮಕ್ಕಳನ್ನ ಸೆಳೆಯುವಂತಹ ಕೆಲಸ ಮಾಡುತ್ತಿದ್ದಾರೆ. ಪ್ರಾರಂಭದಲ್ಲಿ ಗಿರೀಶ್ ಒಬ್ಬರೇ ಕಾರ್ಯ ಆರಂಭಿಸಿದ್ದರು. ಆದರೆ ಇದೀಗ ಅವರ ಕಾರ್ಯವನ್ನು ಮೆಚ್ಚಿ ಜನರು ಕೂಡ ಕೈಜೋಡಿಸುತ್ತಿದ್ದಾರೆ. ಇದುವರೆಗೂ ನಾಲ್ಕು ಶಾಲೆಗಳಿಗೆ ಬಣ್ಣ ಬಳಿದು ಸರ್ಕಾರಿ ಶಾಲೆಯ ಸೌಂದರ್ಯವನ್ನು ಹೆಚ್ಚಿಸಿದ್ದಾರೆ.

7 ತಿಂಗಳ ಹಿಂದೆ ಚನ್ನಪಟ್ಟಣ ತಹಶೀಲ್ದಾರ್ ಆಗಿ ಬಂದಂತಹ ಗಿರೀಶ್ ಅವರು ಶಾಲೆಗಳಿಗೆ ಸುಣ್ಣಬಣ್ಣ ಬಳೆಯುವ ಜೊತೆಗೆ ಚನ್ನಪಟ್ಟಣ ತಾಲ್ಲೂಕಿನಲ್ಲಿ ಹೆಚ್ಚು ಫಲಿತಾಂಶ ತರಲು ಕೂಡ ಪಣತೊಟ್ಟಿದ್ದಾರೆ. ಹಾಗಾಗಿ ಎಸ್ಎಸ್ಎಲ್ಸಿ ಫಲಿತಾಂಶಕ್ಕೆ ವಿನೂತನ ಅಭಿಯಾನಕ್ಕೆ ಮುಂದಾಗಿದ್ದಾರೆ.

ಈ ಕುರಿತಾಗಿ ಬಿಇಒರಿಂದ ಮಾಹಿತಿ ತರಿಸಿಕೊಂಡು ನಂತರ ಶಿಕ್ಷಕರ ಜೊತೆ ಸಭೆ ಮಾಡಿ, SSLC ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ ಅದರಲ್ಲಿ ಕಡಿಮೆ ಅಂಕಗಳನ್ನ ಪಡೆದ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಗಮನಹರಿಸಲಾಗಿದೆ. ಜೊತೆಗೆ ಪ್ರತಿ ರಾತ್ರಿ ವಿದ್ಯಾರ್ಥಿಗಳ ಮನೆಗೆ ತೆರಳಿ ಮಕ್ಕಳ ಅಭ್ಯಾಸದ ಬಗ್ಗೆ ಪೋಷಕರಿಂದ ಮಾಹಿತಿ ಸಂಗ್ರಹಿಸಿ ಮೊಬೈಲ್ ನೀಡದಂತೆ, ಟಿವಿ ನೋಡದಂತೆ, ಒತ್ತಡ ಹೇರದಂತೆ ಮನವಿ ಮಾಡಲಾಗಿದೆ.