
ಚಿಕ್ಕಬಳ್ಳಾಪುರ ಈಶ ಫೌಂಡೇಶನ್ ವತಿಯಿಂದ ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಗ್ರಾಮದ ಬಳಿ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಅನಾವರಣ ಮಾಡಿದ್ದೇ ತಡ, ಪ್ರತಿನಿತ್ಯ ಸಾವಿರಾರು ಜನ ಪ್ರವಾಸಿಗರು, ಈಶ್ವರನ ಭಕ್ತರು ಹಾಗೂ ಸದ್ಗುರು ಜಗ್ಗಿ ವಾಸುದೇವ್ ಅನುಯಾಯಿಗಳು ಆಗಮಿಸಿ ಆದಿಯೋಗಿ ಮೂರ್ತಿಯ ದಿವ್ಯದರ್ಶನ ಹಾಗೂ ಸಂಜೆ ದಿವ್ಯದರ್ಶನ ಪಡೆಯುತ್ತಿದ್ದಾರೆ.

ಈ ಮಧ್ಯೆ, ಶಿವರಾತ್ರಿ ಪ್ರಯುಕ್ತ ಫೆಬ್ರವರಿ 7 ರಿಂದ ಫೆಬ್ರವರಿ 10 ರವರೆಗೆ ನಿರ್ವಹಣಾ ಚಟುವಟಿಕೆ ಇರುವ ಕಾರಣ ಆದಿಯೋಗಿಯ ದಿವ್ಯ ದರ್ಶನ ಭಾಗ್ಯ ಅಂದರೆ ಸಂಜೆ ನಡೆಯುವ ಧ್ವನಿ ಮತ್ತು ಬೆಳಕು ಲೇಸರ್ ಶೋ ಇರುವುದಿಲ್ಲ.

ಸ್ವತಃ ಈಶ ಫೌಂಡೇಶನ್ ಪ್ರಕಟಣೆ ಹೊರಡಿಸಿದ್ದು ಆದಿಯೋಗಿ ಪ್ರತಿಮೆ ಬಳಿ ಪ್ರಕಟಣೆ ಹೊರಡಿಸಿ ಬ್ಯಾನರ್ ಅಳವಡಿಸಲಾಗಿದೆ.


ಈ ಮೂರು ದಿನಗಳ ಕಾಲ ಆದಿಯೋಗಿಯ ದಿವ್ಯದರ್ಶನಕ್ಕೆ ಭಕ್ತರು ಬಾರದಂತೆ ಮನವಿ ಮಾಡಲಾಗಿದೆ.

ಇನ್ನು ಫೆಬ್ರವರಿ 11 ರಿಂದ ಎಂದಿನಂತೆ ದಿವ್ಯದರ್ಶನ ಅವಕಾಶ ಸಿಗಲಿದೆ. (ವರದಿ: ಭೀಮಪ್ಪ ಪಾಟೀಲ್, ಟಿವಿ9, ಚಿಕ್ಕಬಳ್ಳಾಪುರ)

ಜನವರಿ 15 ರಂದು ಆದಿಯೋಗಿ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದರು. ಪ್ರತಿಮೆ ಲೋಕಾರ್ಪಣೆ ನಂತರ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಮೂಲೆಗಳು ಹಾಗೂ ನೆರೆಯ ಆಂಧ್ರಪ್ರದೇಶದಿಂದ ಸಾವಿರಾರು ಜನ ಆಗಮಿಸಿ ಆದಿಯೋಗಿಯ ದರ್ಶನ ಹಾಗೂ ಆದಿಯೋಗಿಯ ದಿವ್ಯದರ್ಶನ ಪಡೆಯುತ್ತಿದ್ದಾರೆ.

ಆಶ್ರಮದಲ್ಲಿ ನಿರ್ವಹಣಾ ಚಟುವಟಿಕೆಗಳಿಗೆ ಪ್ರವಾಸಿಗರು ಸಹಕರಿಸುವಂತೆ ಸಂಸ್ಥೆಯ ಮಾಧ್ಯಮ ಮಾಹಿತಿದಾರರು ಮನವಿ ಮಾಡಿದ್ದಾರೆ.