
ಇಂದು (ಜ.14) ದೇಶದೆಲ್ಲೆಡೆ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಈ ಸಂಭ್ರಮಕ್ಕೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಡೇವಿಡ್ ವಾರ್ನರ್ ಶುಭಾಶಯ ತಿಳಿಸಿರುವುದು ವಿಶೇಷ. ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ವಾರ್ನರ್ ಸಂಕ್ರಾಂತಿ ಹಬ್ಬಕ್ಕೆ ವಿಶಸ್ ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಂಕ್ರಾಂತಿ ಹಬ್ಬದ ಶುಭಾಯಶದ ಫೋಟೋ ಹಂಚಿಕೊಂಡಿರುವ ವಾರ್ನರ್, ಸೂರ್ಯನ ಬೆಳಕು ದಾರಿದೀಪವಾಗಲಿ. ಈ ಹಬ್ಬದ ದಿನವು ನಿಮಗೆ ಶಾಂತಿ, ಸಂತೋಷ ಮತ್ತು ಮೆರಗನ್ನು ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಈ ಪೋಸ್ಟ್ ಅನ್ನು GMR ಸ್ಪೋರ್ಟ್ಸ್ ಹೆಚ್ಒ ವಿಕಾಶ್ ಕುಮಾರ್ ಹಾಗೂ ನಿರಂಜನ್ ಸರೀನ್ ಎಂಬುವರಿಗೆ ಟ್ಯಾಗ್ ಮಾಡಿದ್ದಾರೆ.

ಅಂದಹಾಗೆ ಡೇವಿಡ್ ವಾರ್ನರ್ ಭಾರತೀಯರ ಹಬ್ಬಗಳಿಗೆ ಶುಭಾಶಯ ತಿಳಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಗಣೇಶ ಚತುರ್ಥಿ ಸಂದರ್ಭದಲ್ಲಿ, ಘ್ನನಿವಾರಕ ಗಣಪನ ಫೋಟೋವನ್ನು ಹಂಚಿಕೊಂಡು ಸರ್ವರಿಗೂ ಶುಭಾಶಯ ತಿಳಿಸಿದ್ದರು.

ಅಷ್ಟೇ ಅಲ್ಲದೆ ಅಯೋಧ್ಯೆ ರಾಮಮಂದಿರದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಸಂದರ್ಭದಲ್ಲಿ ಭಗವಾನ್ ಶ್ರೀರಾಮನ ಅವತಾರದ ಫೋಟೋವೊಂದನ್ನು ಹಂಚಿಕೊಂಡು ಅಭಿನಂದನಾ ಸಂದೇಶವನ್ನು ತಿಳಿಸಿದ್ದರು. ಇದೀಗ ಮಕರ ಸಂಕ್ರಾಂತಿಗೆ ವಿಶಸ್ ತಿಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಅಂದಹಾಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿರುವ ಡೇವಿಡ್ ವಾರ್ನರ್ ಈ ಬಾರಿಯ ಐಪಿಎಲ್ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಮೆಗಾ ಹರಾಜಿನಲ್ಲಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ವಾರ್ನರ್ ಅವರನ್ನು ಈ ಬಾರಿ ಯಾವುದೇ ಫ್ರಾಂಚೈಸಿ ಖರೀದಿಸಿಲ್ಲ.

ಹೀಗಾಗಿ ಡೇವಿಡ್ ವಾರ್ನರ್ ಪಾಕಿಸ್ತಾನ್ ಸೂಪರ್ ಲೀಗ್ನತ್ತ ಮುಖ ಮಾಡಿದ್ದಾರೆ. ಅದರಂತೆ ಮುಂಬರುವ ಪಿಎಸ್ಎಲ್ ಟೂರ್ನಿಗಾಗಿ ವಾರ್ನರ್ ಆಯ್ಕೆಯಾಗಿದ್ದು, ಕರಾಚಿ ಕಿಂಗ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ.