ಇಂದು ಡಬ್ಲಿನ್ ನಲ್ಲಿ ಭಾರತ ಹಾಗೂ ಐರ್ಲೆಂಡ್ ನಡುವೆ ಎರಡನೇ ಟಿ20 ಪಂದ್ಯ ನಡೆಯಲಿದೆ. ಮೊದಲ ಟಿ20 ಪಂದ್ಯದಲ್ಲಿ 7 ವಿಕೆಟ್ ಗಳ ಗೆಲುವು ಸಾಧಿಸಿದ್ದ ಭಾರತ ಇದೀಗ ಎರಡನೇ ಕದನಕ್ಕೆ ಸಜ್ಜಾಗುತ್ತಿದೆ.
ಮೊದಲ ಪಂದ್ಯಕ್ಕೆ ಕೋಚ್ ವಿವಿಎಸ್ ಲಕ್ಷ್ಮಣ್ ಕೆಲ ಹೊಸ ಪ್ರಯೋಗ ನಡೆಸಿ ಅದರಲ್ಲಿ ಯಶಸ್ವಿಯಾಗಿದ್ದರು. ಓಪನರ್ ಆಗಿ ಇಶಾನ್ ಕಿಶನ್ ಜೊತೆ ರುತುರಾಜ್ ಬದಲು ಆಲ್ರೌಂಡರ್ ದೀಪಕ್ ಹೂಡ ಅವರನ್ನು ಕಣಕ್ಕಿಳಿಸಿ ಎದುರಾಳಿಯ ಯೋಜನೆಯನ್ನು ತಲೆಕೆಳಗಾಗಿಸಿದ್ದರು. ಇದೀಗ ದ್ವಿತೀಯ ಪಂದ್ಯಕ್ಕೆ ಒಂದು ಮುಖ್ಯ ಬದಲಾವಣೆ ನಿರೀಕ್ಷಿಸಲಾಗಿದೆ.
ಐರ್ಲೆಂಡ್ ಟಿ20 ಸರಣಿಗೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಎಲ್ಲ ಪಂದ್ಯಗಳಲ್ಲು ಆರಂಭಿಕರಾಗಿ ಆಡಿದ್ದ ಯುವ ರುತುರಾಜ್ ಗಾಯಕ್ವಾಡ್ ನಿರೀಕ್ಷೆ ಮೂಡಿಸಿಲ್ಲ. ಹೀಗಾಗಿ ಐರ್ಲೆಂಡ್ ಎದುರಿನ ಮೊದಲ ಪಂದ್ಯದಲ್ಲಿ ಮಧ್ಯಮ ಕ್ರಮಾಂಕಕ್ಕೆ ಜಾರಿದ್ದರು. ಅಲ್ಲದೆ ಗಾಯಕ್ವಾಡ್ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ.
ಗಾಯದ ಸಮಸ್ಯೆಯಿಂದ ರುತುರಾಜ್ ಚೇತರಿಸದೇ ಇದ್ದರೆ, ಅವರ ಜಾಗದಲ್ಲಿ ಸಂಜು ಸ್ಯಾಮ್ಸನ್ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಲವಾಗಿ ಸೇರಿಕೊಳ್ಳಲಿದ್ದಾರೆ. ಹೀಗೆ ತಂಡದಲ್ಲಿ ಒಂದು ಮುಖ್ಯ ಬದಲಾವಣೆ ನಿರೀಕ್ಷಿಸಲಾಗಿದೆ.
ಚಹಲ್ ಹಾಗೂ ಭುವಿ ಮತ್ತೆ ಮಾರಕ ಆಗುವುದರಲ್ಲಿ ಅನುಮಾನವಿಲ್ಲ.
ಉಳಿದಂತೆ ತಂಡದ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಅನುಮಾನ. ಉಮ್ರಾನ್ ಮಲಿಕ್ ಕಳೆದ ಪಂದ್ಯದಲ್ಲಿ ಕೇವಲ 1 ಓವರ್ ಬೌಲಿಂಗ್ ಮಾಡಿದ್ದರು. ಈ ಬಾರಿ ಸಂಪೂರ್ಣ 4 ಓವರ್ ಮಾಡುವ ನಿರೀಕ್ಷೆಯಿದೆ.
ಪಂದ್ಯ ರಾತ್ರಿ 9 ಗಂಟೆಗೆ ಆರಂಭಗೊಳ್ಳಲಿದೆ. ಇನ್ನು ಈ ಕ್ರೀಡಾಂಗಣದ ಮೊದಲ ಪಂದ್ಯದಂತೆಯೇ ಮೊದಲು ಬೌಲರ್ಗಳಿಗೆ ಸಹಕರಿಸಲಿದ್ದು, ಟಾಸ್ ಗೆಲ್ಲುವ ತಂಡದ ನಾಯಕ ಹೆಚ್ಚಾಗಿ ಚೇಸಿಂಗ್ ಆಯ್ಕೆ ಮಾಡಿಕೊಳ್ಳಲಿದ್ದಾರೆ.