- Kannada News Photo gallery Cricket photos ICC ODI World Cup Semi Final Team India Super Star Mohammed Shami's comeback story
Mohammed Shami: ತಂಡಕ್ಕೆ ಅಗತ್ಯವಿಲ್ಲ ಎಂದು ಕೈಬಿಟ್ಟದ್ದರು: ಮೊಹಮ್ಮದ್ ಶಮಿಯ ಕಮ್ಬ್ಯಾಕ್ ಕಥೆಯೇ ರೋಚಕ
India vs New Zealand, ICC ODI World Cup Semi Final 1: ಇಂದು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಾ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಭಾರತ ಫೈನಲ್ಗೇರಲು ಪ್ರಮುಖ ಕಾರಣರಾಗಿರುವ ಇದೇ ಮೊಹಮ್ಮದ್ ಶಮಿ ಶಮಿ ಕೆಲವೇ ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಅನೇಕ ಬಾರಿ ತಂಡದಿಂದ ಹೊರಗುಳಿದಿದ್ದರು. ಐಪಿಎಲ್ನಲ್ಲೂ ಇವರಿಗೆ ಘನತೆಗೆ ತಕ್ಕ ಗೌರವ ಸಿಗಲಿಲ್ಲ.
Updated on: Nov 16, 2023 | 12:18 PM

ಬುಧವಾರ ನಡೆದ ಐಸಿಸಿ ಏಕದಿನ ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ, ನ್ಯೂಝಿಲೆಂಡ್ ತಂಡವನ್ನು ಸೋಲಿಸಿ ಫೈನಲ್ಗೆ ಲಗ್ಗೆಯಿಟ್ಟಿತು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯವನ್ನು ರೋಹಿತ್ ಪಡೆ 70 ರನ್ಗಳ ಅಂತರದಿಂದ ಗೆದ್ದುಕೊಂಡಿತು.

ಭಾರತದ ಪರ ವೇಗಿ ಮೊಹಮ್ಮದ್ ಶಮಿ ಕಿವೀಸ್ ಪಡೆಗೆ ಕಂಟಕವಾಗಿ ಪರಿಣಮಿಸಿದರು. ಶಮಿ 9.5 ಓವರ್ಗಳಲ್ಲಿ 57 ರನ್ ನೀಡಿ 7 ವಿಕೆಟ್ಗಳನ್ನು ಪಡೆದರು. ಇದರೊಂದಿಗೆ ಏಕದಿನ ವಿಶ್ವಕಪ್ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಜೊತೆಗೆ ಅನೇಕ ದಾಖಲೆ ಬರೆದರು. ಇಂದು ಶಮಿ ವಿಶ್ವದ ಶ್ರೇಷ್ಠ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಆದರೆ, ಶಮಿಯ ಈ ಸಾಧನೆ ಹಿಂದೆ ನೋವಿನ ಕಥೆ ಇದೆ.

ಇಂದು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಾ ಭಾರತ ಫೈನಲ್ಗೇರಲು ಪ್ರಮುಖ ಕಾರಣರಾಗಿರುವ ಇದೇ ಶಮಿ ಕೆಲವೇ ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಅನೇಕ ಬಾರಿ ತಂಡದಿಂದ ಹೊರಗುಳಿದಿದ್ದರು. ಐಪಿಎಲ್ನಲ್ಲೂ ಇವರಿಗೆ ಘನತೆಗೆ ತಕ್ಕ ಗೌರವ ಸಿಗಲಿಲ್ಲ.

2013ರ ಜನವರಿಯಲ್ಲಿ ಪಾಕಿಸ್ತಾನ ವಿರುದ್ಧದ ಏಕದಿನ ಪಂದ್ಯದಲ್ಲಿ ಆಡುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ಶಮಿ ಮೊದಲ ಪಂದ್ಯದಲ್ಲಿ ಪಡೆದಿದ್ದು 1 ವಿಕೆಟ್. ನಂತರ ಎದುರಾಳಿಗರಿಗೆ ಕಂಟಕವಾಗುತ್ತಾ ಸಾಗಿದ ಶಮಿ ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಆಗಿ ಹೊರಹೊಮ್ಮಿದರು.

ಆದರೆ, ಮ್ಯಾನೇಜ್ಮೆಂಟ್ ಭಾರತ ತಂಡಕ್ಕೆ ಯುವ ಬೌಲರ್ಗಳನ್ನು ಪರಿಚಯಿಸಲು ಮುಂದಾಯಿತು. ಆಗ ಶಮಿಯನ್ನು ತಂಡದಿಂದ ಕೈಬಿಡಲಾಯಿತು. ಉತ್ತಮ ಲಯದಲ್ಲಿದ್ದರೂ ಶಮಿಗೆ ಅವಕಾಶ ಸಿಗಲಿಲ್ಲ. ಇದರ ನಡುವೆ 2015 ರ ವಿಶ್ವಕಪ್ ನಂತರ ಇಂಜುರಿಗೆ ಕೂಡ ಒಳಗಾದರು. ಇದರಿಂದ ಚೇತರಿಸಿಕೊಳ್ಳಲು 18 ತಿಂಗಳುಗಳನ್ನು ತೆಗೆದುಕೊಂಡರು.

ಆ ಸಮಯ ತಂಡಕ್ಕೆ ಆಯ್ಕೆಯಾದರೂ ಅವಕಾಶ ಸಿಕ್ಕಿದ್ದು ಬೆರಳಣಿಕೆಯಷ್ಟು ಮಾತ್ರ. ನಂತರವೂ ಸಾಕಷ್ಟು ದಿನಗಳವರೆಗೆ ಟೀಮ್ ಇಂಡಿಯಾದಿಂದ ಹೊರಗುಳಿಯಬೇಕಾಯಿತು. ಅಲ್ಲದೆ ಕೌಟುಂಬಿಕ ಜೀವನವೂ ಸರಿಯಾಗಿರಲಿಲ್ಲ.

ಇಂಜುರಿ, ತಂಡದಲ್ಲಿ ಸ್ಥಾನವಿಲ್ಲ, ಕುಟುಂಬದಲ್ಲಿ ಸಮಸ್ಯೆ ಇದರಿಂದ ಬೇಸತ್ತ ಶಮಿ ಒಂದಲ್ಲ, ಎರಡಲ್ಲ.. ಬರೋಬ್ಬರಿ ಮೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಕೂಡ ಚಿಂತಿಸಿದ್ದರು. ಕೋವಿಡ್ ಸಮಯದಲ್ಲಿ ಲಾಕ್ಡೌನ್ ವಿಧಿಸಿದ್ದಾಗ, ತಮ್ಮ ಇನ್ಸ್ಟಾಗ್ರಾಮ್ನಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಮಾತನಾಡಿದ್ದ ಶಮಿ, ಸ್ವತಃ ಈ ವಿಚಾರವನ್ನು ಬಹಿರಂಗಪಡಿಸಿದ್ದರು.

ಆದರೆ, ಇಂದು ಮೊಹಮ್ಮದ್ ಶಮಿ ಇಡೀ ಭಾರತವೇ ಹೆಮ್ಮೆ ಪಡುವಂತೆ ಮಾಡುತ್ತಿದ್ದಾರೆ. ಶಮಿ ಬೌಲಿಂಗ್ ಮಾಡಲು ಬಂದರೆ ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳೆಲ್ಲ ಇವರಿಗೆ ಬೆಂಬಲ ನೀಡುತ್ತಿದ್ದಾರೆ. ಸದ್ಯ ವಿಶ್ವಕಪ್ 2023 ರಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿರುವ ಶಮಿ ಆಡಿರುವ ಕೇವಲ 6 ಪಂದ್ಯಗಳಲ್ಲಿ 23 ವಿಕೆಟ್ ಕಬಳಿಸಿದ್ದಾರೆ.



















