
ಕಳೆದ ಕೆಲವು ದಿನಗಳಿಂದ ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಲು ನಮ್ಮ ತಂಡವನ್ನು ಭಾರತಕ್ಕೆ ಕಳುಹಿಸುವುದಿಲ್ಲ ಎಂಬ ಹೊಸ ಖ್ಯಾತೆ ತೆಗೆದಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಇದೀಗ ಐಸಿಸಿ ಬಿಗ್ ಶಾಕ್ ನೀಡಿದೆ. ಭಾರತದ ಬದಲು ತನ್ನ ಪಂದ್ಯಗಳನ್ನು ಶ್ರೀಲಂಕಾಕ್ಕೆ ಬದಲಿಸಬೇಕು ಎಂಬ ಬಾಂಗ್ಲಾ ಮಂಡಳಿಯ ಮನವಿಯನ್ನು ಐಸಿಸಿ ನಿರಾಕರಿಸಿದೆ.

ಇದು ಮಾತ್ರವಲ್ಲದೆ ತನ್ನ ಅಂತಿಮ ನಿರ್ಧಾರವನ್ನು ತಿಳಿಸಲು ಐಸಿಸಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಇನ್ನೂ 24 ಗಂಟೆಗಳ ಕಾಲಾವಕಾಶ ನೀಡಿದೆ. ಒಂದು ವೇಳೆ ಬಾಂಗ್ಲಾ ಕ್ರಿಕೆಟ್ ಮಂಡಳಿ ತನ್ನ ನಿಲುವಿನಲ್ಲಿ ಮುಂದುವರಿದರೆ, ಬಾಂಗ್ಲಾದೇಶ ಕ್ರಿಕೆಟ್ ತಂಡವನ್ನು ಟಿ20 ವಿಶ್ವಕಪ್ನಿಂದ ಹೊರಹಾಕಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಐಸಿಸಿ ನೀಡಿದೆ.

ವಾಸ್ತವವಾಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್ನಿಂದ ಕೈಬಿಟ್ಟ ನಂತರ ಬಾಂಗ್ಲಾದೇಶ ಬಿಸಿಸಿಐ ವಿರುದ್ಧ ಕೆರಳಿದೆ. ಹೀಗಾಗಿ ಮೇಲೆ ಹೇಳಿದ ಬಾಂಗ್ಲಾದೇಶ ತನ್ನ ಪಂದ್ಯವನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂದು ಒತ್ತಾಯಿಸುತ್ತಿದ್ದು, ಬಾಂಗ್ಲಾದೇಶ ತಂಡಕ್ಕೆ ಭಾರತದಲ್ಲಿ ಸುರಕ್ಷತೆ ಇಲ್ಲ ಆದ್ದರಿಂದ ತನ್ನ ತಂಡದ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಐಸಿಸಿಯನ್ನು ಕೇಳುತ್ತಿದೆ.

ಬಾಂಗ್ಲಾದೇಶ ಬೇಡಿಕೆಯಂತೆ ಸ್ಥಳವನ್ನು ಬದಲಾಯಿಸುವ ಕುರಿತು ಐಸಿಸಿ ಮತದಾನ ನಡೆಸಿತು. ಇದರಲ್ಲಿ ಬಾಂಗ್ಲಾದೇಶ ಮಂಡಳಿ 2-14 ಅಂತರದಿಂದ ಸೋಲನುಭವಿಸಿದೆ. ಮಂಡಳಿ ಮತ್ತು ಪಾಕಿಸ್ತಾನ ಮಾತ್ರ ಬಾಂಗ್ಲಾದೇಶದ ಪರವಾಗಿ ಮತ ಚಲಾಯಿಸಿದವು. ಉಳಿದ ತಂಡಗಳ ಮಂಡಳಿಗಳು ಭಾರತವನ್ನು ಬೆಂಬಲಿಸಿ ಮತ ಚಲಾಯಿಸಿದವು.

ಹೀಗಾಗಿ ಬಹುಮತದ ಪ್ರಕಾರ ಬಾಂಗ್ಲಾದೇಶ ಭಾರತದಲ್ಲಿ ತನ್ನ ಪಂದ್ಯಗಳನ್ನು ಆಡಲೇಬೇಕೆಂದು ಐಸಿಸಿ ಸೂಚಿಸಿದೆ. ಮಾತ್ರವಲ್ಲದೆ. ಐಸಿಸಿ ತನ್ನ ಸರ್ಕಾರವನ್ನು ಮನವೊಲಿಸಲು ಬಾಂಗ್ಲಾದೇಶ ಮಂಡಳಿಗೆ ಸ್ಪಷ್ಟವಾಗಿ ಸೂಚನೆ ನೀಡಿದೆ. ಹಾಗೆಯೇ ಬಾಂಗ್ಲಾದೇಶ ಭಾರತದಲ್ಲಿ ಆಡದಿದ್ದರೆ, ಬೇರೆ ತಂಡಕ್ಕೆ ಅವಕಾಶ ನೀಡುವುದಾಗಿಯೂ ತಿಳಿಸಿದೆ. ಒಂದು ವೇಳೆ ಬಾಂಗ್ಲಾದೇಶ ಟಿ20 ವಿಶ್ವಕಪ್ನಿಂದ ಹೊರಬಿದ್ದರೆ, ಸ್ಕಾಟ್ಲೆಂಡ್ ಅದರ ಸ್ಥಾನದಲ್ಲಿ ಆಡಲಿದೆ.

ಟಿ20 ವಿಶ್ವಕಪ್ನಿಂದ ಬಾಂಗ್ಲಾದೇಶ ಹೊರಬಿದ್ದರೆ, ಅದು ಅಲ್ಲಿನ ಆಟಗಾರರಿಗೆ ಭಾರಿ ನಷ್ಟವನ್ನುಂಟು ಮಾಡಲಿದೆ. ಹಲವಾರು ಮಾಜಿ ಬಾಂಗ್ಲಾದೇಶ ಕ್ರಿಕೆಟಿಗರು ಇದನ್ನು ಮಾಧ್ಯಮಗಳ ಮುಂದೆ ವ್ಯಕ್ತಪಡಿಸಿದ್ದಾರೆ. ಈ ವಿಷಯದ ಬಗ್ಗೆ ಮಾತನಾಡಿದರೆ ನಾನು ಸುರಕ್ಷಿತವಾಗಿರುವುದಿಲ್ಲ ಎಂದು ಪ್ರಸ್ತುತ ಟಿ20 ನಾಯಕ ಲಿಟ್ಟನ್ ದಾಸ್ ಕೂಡ ಹೇಳಿದ್ದಾರೆ. ಪ್ರಸ್ತುತ ಬಾಂಗ್ಲಾದೇಶ ಆಟಗಾರರು ಸಹ ಟಿ20 ವಿಶ್ವಕಪ್ನಲ್ಲಿ ಆಡಲು ಬಯಸುತ್ತಿದ್ದು, ಈಗ ನಿರ್ಧಾರ ಬಾಂಗ್ಲಾದೇಶ ಸರ್ಕಾರದ ಮೇಲಿದೆ.
Published On - 7:33 pm, Wed, 21 January 26