ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವೂ ಪರ್ತ್ನಲ್ಲಿ ನಡೆಯಲಿದೆ. ನವೆಂಬರ್ 22 ರಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕ ಹೇಗಿರುತ್ತದೆ? ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಏಕೆಂದರೆ ನಾಯಕ ರೋಹಿತ್ ಶರ್ಮಾ ಜೊತೆಗೆ ಶುಭ್ಮನ್ ಗಿಲ್ ಕೂಡ ಮೊದಲ ಟೆಸ್ಟ್ನಿಂದ ಹೊರಬಿದ್ದಿದ್ದಾರೆ. ಹೀಗಾಗಿ ಮೊದಲ ಪಂದ್ಯದಲ್ಲಿ ಯಾರು ಆರಂಭಿಕರಾಗುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಒಬ್ಬ ಆರಂಭಿಕನಾಗಿ ಯಶಸ್ವಿ ಜೈಸ್ವಾಲ್ ಕಣಕ್ಕಿಳಿಯುವುದು ಖಚಿತ. ಆದರೆ ಜೈಸ್ವಾಲ್ ಜೊತೆಗೆ ಭಾರತದ ಇನ್ನಿಂಗ್ಸ್ ಆರಂಭಿಸುವ ಮತ್ತೊಬ್ಬ ಆರಂಭಿಕ ಯಾರು ಎಂಬುದು ಇದುವರೆಗೂ ಖಚಿತವಾಗಿಲ್ಲ.
ಮಾಧ್ಯಮ ವರದಿಗಳ ಪ್ರಕಾರ, ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ, ಕನ್ನಡಿಗ ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್ ಅವರೊಂದಿಗೆ ಓಪನಿಂಗ್ ಮಾಡಬಹುದು ಎಂದು ಹೇಳಲಾಗುತ್ತಿದೆ. ಆದರೆ, ಟೀಂ ಇಂಡಿಯಾದ ಈ ನಡೆಗೆ ಚೇತೇಶ್ವರ ಪೂಜಾರ ಅಪಸ್ವರ ಎತ್ತಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಚೇತೇಶ್ವರ ಪೂಜಾರ, ಕೆಎಲ್ ರಾಹುಲ್ ಅವರನ್ನು ಆರಂಭಿಕನಾಗಿ ಕಳುಹಿಸಬಾರದು ಎಂದಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿದ್ದಾರೆ.
ಭಾರತದ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಚೇತೇಶ್ವರ ಪೂಜಾರ, ‘ನನಗೆ ಬ್ಯಾಟಿಂಗ್ ಕ್ರಮಾಂಕ ತಿಳಿದಿಲ್ಲ. ಆದರೆ ನಾನು ಕೆಎಲ್ ರಾಹುಲ್ ಅವರನ್ನು 3ನೇ ಕ್ರಮಾಂಕದಲ್ಲಿ ಆಡಿಸಬೇಕು ಎಂದು ಬಯಸುತ್ತೇನೆ. ಕೆಎಲ್ ರಾಹುಲ್ ಒತ್ತಡವನ್ನು ಎದುರಿಸಿದ ಅನುಭವ ಹೊಂದಿದ್ದಾರೆ.
ಪ್ರಸ್ತುತ ಗಿಲ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿರುವ ದೇವದತ್ ಪಡಿಕ್ಕಲ್ ಅವರು ಎಡಗೈ ಬ್ಯಾಟ್ಸ್ಮನ್ ಆಗಿರುವುದರಿಂದ ಅವರನ್ನು 3ನೇ ಕ್ರಮಾಂಕದಲ್ಲಿ ಆಡಿಸುವ ಸಾಧ್ಯತೆಗಳಿವೆ. ಟೀಂ ಇಂಡಿಯಾ ಬಲ ಮತ್ತು ಎಡಗೈ ಸಂಯೋಜನೆಯನ್ನು ಬಯಸುತ್ತದೆ. ಆದರೆ ಕೆಎಲ್ ರಾಹುಲ್ಗೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸುಲಭವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಚೇತೇಶ್ವರ್ ಪೂಜಾರ ಅವರ ಹೇಳಿಕೆ ಕೂಡ ಸರಿಯಾಗಿದೆ. ಏಕೆಂದರೆ ಕೆಎಲ್ ರಾಹುಲ್ ಆಸ್ಟ್ರೇಲಿಯಾ ಎ ವಿರುದ್ಧದ ಪಂದ್ಯದಲ್ಲೂ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಆದರೆ ಎರಡೂ ಇನ್ನಿಂಗ್ಸ್ಗಳಲ್ಲಿ ವಿಫಲರಾಗಿದ್ದರು. ರಾಹುಲ್ ಮೊದಲ ಇನಿಂಗ್ಸ್ನಲ್ಲಿ 4 ರನ್ ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ 10 ರನ್ ಗಳಿಸಲಷ್ಟೇ ಶಕ್ತರಾದರು. ಹೀಗಾಗಿ ರಾಹುಲ್, ಪೂಜಾರ ಹೇಳಿದಂತೆ ಮೂರನೇ ಕ್ರಮಾಂಕದಲ್ಲಿ ಆಡುವುದು ಸೂಕ್ತ.
ಆದರೆ, ಪರ್ತ್ ಟೆಸ್ಟ್ನಲ್ಲಿ ರಾಹುಲ್ ಓಪನಿಂಗ್ ಮಾಡಲಿದ್ದಾರೆ ಎಂಬುದು ಖಚಿತವಾಗಿದೆ. ಪ್ರಸ್ತುತ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ರಾಹುಲ್ಗೆ ಫಾರ್ಮ್ ಕಂಡುಕೊಳ್ಳುವ ಒತ್ತಡ ಒಂದೆಡೆಯಾದರೆ, ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಡಬೇಕಾದ ಒತ್ತಡ ಇನ್ನೊಂದೆಡೆ. ಹೀಗಾಗಿ ಈ ಎರಡೂ ಒತ್ತಡಗಳನ್ನು ರಾಹುಲ್ ಯಾವ ರೀತಿ ನಿಭಾಯಿಸುತ್ತಾರೆ ಎಂಬುದು ನಾಳಿನ ಪಂದ್ಯದಲ್ಲಿ ತಿಳಿಯಲಿದೆ.