2023ರ ಏಷ್ಯಾಕಪ್ನಲ್ಲಿ ಟೀಂ ಇಂಡಿಯಾ ಫೈನಲ್ ಪ್ರವೇಶಿಸಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಸತತ ಎರಡು ದಿನಗಳಲ್ಲಿ ಪಾಕಿಸ್ತಾನ ಮತ್ತು ನಂತರ ಶ್ರೀಲಂಕಾವನ್ನು ಸೋಲಿಸುವ ಮೂಲಕ ಸೆಪ್ಟೆಂಬರ್ 17 ರಂದು ನಡೆಯಲಿರುವ ಪ್ರಶಸ್ತಿ ಪಂದ್ಯದ ಟಿಕೆಟ್ ಅನ್ನು ಗೆದ್ದುಕೊಂಡಿತು.
ಕೊಲಂಬೊದಲ್ಲಿ ನಡೆದ ಸೂಪರ್-4 ರ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಶ್ರೀಲಂಕಾವನ್ನು 41 ರನ್ಗಳಿಂದ ಸೋಲಿಸಿತು. ಇನ್ನು ಈ ಪಂದ್ಯದಲ್ಲಿ ಉಭಯ ತಂಡಗಳ ಸ್ಪಿನ್ನರ್ಗಳು ಪ್ರಾಬಲ್ಯ ಮೆರೆದರು. ಟೀಂ ಇಂಡಿಯಾದಿಂದ ಕುಲ್ದೀಪ್ 4 ಹಾಗೂ ಜಡೇಜಾ 2 ವಿಕೆಟ್ ಪಡೆದು ಮಿಂಚಿದರು.
ಇದರೊಂದಿಗೆ ಇತಿಹಾಸ ಬರೆದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಏಷ್ಯಾಕಪ್ನಲ್ಲಿ ಭಾರತದ ಪ್ರಮುಖ ವಿಕೆಟ್ ಟೇಕರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಜಡೇಜಾ, ಮಾಜಿ ವೇಗಿ ಇರ್ಫಾನ್ ಪಠಾಣ್ ಅವರನ್ನು ಈ ವಿಚಾರದಲ್ಲಿ ಹಿಂದಿಕ್ಕಿದ್ದಾರೆ.
ಶ್ರೀಲಂಕಾ ನಾಯಕ ಶನಕ ಅವರ ವಿಕೆಟ್ ಪಡೆದ ಕೂಡಲೇ ಜಡೇಜಾ ಏಷ್ಯಾಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಉರುಳಿಸಿದ ಭಾರತೀಯ ಬೌಲರ್ಗಳ ಪೈಕಿ ಅಗ್ರಸ್ಥಾನಕ್ಕೆ ಏರಿದ್ದಾರೆ.
ಇದುವರೆಗೆ ಜಡೇಜಾ ಏಷ್ಯಾಕಪ್ನಲ್ಲಿ 18 ಪಂದ್ಯಗಳನ್ನಾಡಿದ್ದು, ಇದರಲ್ಲಿ 25.56 ಸರಾಸರಿಯಲ್ಲಿ 23 ವಿಕೆಟ್ಗಳನ್ನು ಪಡೆದಿದ್ದಾರೆ. 29 ರನ್ಗಳಿಗೆ 4 ವಿಕೆಟ್ ಉರುಳಿಸಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.
ಇದೀಗ ಈ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಾರಿರುವ ಪಠಾಣ್ ತಮ್ಮ ವೃತ್ತಿಜೀವನದಲ್ಲಿ ಏಷ್ಯಾಕಪ್ನಲ್ಲಿ ಕೇವಲ 12 ಪಂದ್ಯಗಳಲ್ಲಿ 22 ವಿಕೆಟ್ಗಳನ್ನು ಪಡೆದಿದ್ದರು.
ಇನ್ನು ಈ ಪಂದ್ಯದಲ್ಲಿ ಪ್ರಮುಖ 4 ವಿಕೆಟ್ ಉರುಳಿಸಿದ ಎಡಗೈ ಸ್ಪಿನ್ನರ್ ಕುಲ್ದೀಪ್ ಯಾದವ್ ಮೂರನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ 5 ವಿಕೆಟ್ ಪಡೆದಿದ್ದ ಕುಲ್ದೀಪ್, ಇದುವರೆಗೆ ಪಂದ್ಯಾವಳಿಯಲ್ಲಿ ಕೇವಲ ಹತ್ತು ಪಂದ್ಯಗಳಲ್ಲಿ 17 ವಿಕೆಟ್ಗಳನ್ನು ಪಡೆದಿದ್ದಾರೆ.