
ಏಷ್ಯಾಕಪ್ ಟಿ20 ಟೂರ್ನಿಯ ಎರಡನೇ ದಿನವಾದ ಇಂದು ಭಾರತ ತಂಡ ಆತಿಥೇಯ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡವನ್ನು ಎದುರಿಸಲಿದೆ. ಆದರೆ ಈ ಪಂದ್ಯಕ್ಕೂ ಅಭಿಮಾನಿಗಳಲ್ಲಿ ಕಾಡುತ್ತಿರುವ ದೊಡ್ಡ ಪ್ರಶ್ನೆಯೆಂದರೆ ತಂಡದ ಆಡಳಿತ ಮಂಡಳಿಯು ಆಡುವ ಹನ್ನೊಂದರ ಬಳಗದಲ್ಲಿ ಯಾವ ಆಟಗಾರರಿಗೆ ಅವಕಾಶ ನೀಡುತ್ತದೆ ಎಂಬುದು. ಈಗಾಗಲೇ ಕೆಲವು ಕ್ರಮಾಂಕಗಳಲ್ಲಿ ಇದೇ ಆಟಗಾರರು ಕಣಕ್ಕಿಳಿಯಲಿದ್ದಾರೆ ಎಂಬುದು ಖಚಿತವಾಗಿದೆ. ಉಳಿದಂತೆ ಕೆಲವು ಸ್ಲಾಟ್ಗಳಿಗೆ ಮಾತ್ರ ಸಾಕಷ್ಟು ಪೈಪೋಟಿ ಇದೆ.

ಉಪನಾಯಕನಾಗಿ ಶುಭ್ಮನ್ ಗಿಲ್ ತಂಡವನ್ನು ಸೇರಿಕೊಂಡಿರುವುದರಿಂದಾಗಿ ಸಂಜು ಸ್ಯಾಮ್ಸನ್ ಪ್ಲೇಯಿಂಗ್ -11 ನಲ್ಲಿ ಸ್ಥಾನ ಪಡೆಯುವುದು ಕಷ್ಟಕರವಾಗಿದೆ. ವರದಿ ಪ್ರಕಾರ ಗಿಲ್ ಮತ್ತು ಅಭಿಷೇಕ್ ಶರ್ಮಾ ಇನ್ನಿಂಗ್ಸ್ ಪ್ರಾರಂಭಿಸಲಿದ್ದಾರೆ. ತಿಲಕ್ ವರ್ಮಾ ಮೂರನೇ ಸ್ಥಾನದಲ್ಲಿ ಆಡಲಿದ್ದಾರೆ. ನಾಯಕ ಸೂರ್ಯಕುಮಾರ್ ಯಾದವ್ ಮೂರು ಅಥವಾ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬಹುದು.

ಟಾಪ್ ಮತ್ತು ಮಧ್ಯಮ ಕ್ರಮಾಂಕದ ನಂತರ, ಆಲ್ರೌಂಡರ್ಗಳ ಸರದಿ ಬರುತ್ತದೆ. ಇಲ್ಲಿ ಹಾರ್ದಿಕ್ ಪಾಂಡ್ಯ ಅವರ ಪಾತ್ರ ಮುಖ್ಯವಾಗುತ್ತದೆ. ಇವರ ಹೊರತಾಗಿ, ಶಿವಂ ದುಬೆ ಎಡಗೈ ಬ್ಯಾಟಿಂಗ್ ಸಹ ಮಾಡುತ್ತಾರೆ ಮತ್ತು ನಿಧಾನಗತಿಯ ಪಿಚ್ಗಳಲ್ಲಿ ಸ್ಪಿನ್ ಬೌಲರ್ಗಳ ವಿರುದ್ಧ ದೊಡ್ಡ ಹೊಡೆತಗಳನ್ನು ಆಡುವಲ್ಲಿ ನಿಪುಣರಾಗಿದ್ದಾರೆ. ಆದಾಗ್ಯೂ, ಮಾಧ್ಯಮ ವರದಿಗಳಲ್ಲಿ ರಿಂಕು ಸಿಂಗ್ಗೆ ಅವಕಾಶ ಸಿಗುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಜಿತೇಶ್ ಶರ್ಮಾ ಏಳನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆಗಳಿವೆ. ವಿಶೇಷವಾಗಿ ಆರ್ಸಿಬಿ ಪರ ಅವರ ಅದ್ಭುತ ಐಪಿಎಲ್ ಪ್ರದರ್ಶನ ಅವರಿಗೆ ಈ ಕ್ರಮಾಂಕದಲ್ಲಿ ಅವಕಾಶ ಸಿಗುವುದು ಖಚಿತವಾಗಿದೆ. ಅವರ ನಂತರ ಅಕ್ಷರ್ ಪಟೇಲ್ ಇದ್ದು, ತಂಡಕ್ಕೆ ಬ್ಯಾಟಿಂಗ್ ಮತ್ತು ಉಪಯುಕ್ತ ಸ್ಪಿನ್ನರ್ ಆಗಿ ಕೊಡುಗೆ ನೀಡಲಿದ್ದಾರೆ.

ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಅವರು ವೇಗದ ಬೌಲಿಂಗ್ ವಿಭಾಗದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಉಳಿದಂತೆ ಆಡಳಿತ ಮಂಡಳಿ ಅಕ್ಷರ್ ಜೊತೆಗೆ ಇನ್ನೊಬ್ಬ ಸ್ಪಿನ್ನರ್ ಅನ್ನು ಆಡಿಸಲು ನಿರ್ಧರಿಸಿದರೆ, ಅದಕ್ಕೆ ಕುಲ್ದೀಪ್ ಮತ್ತು ಚಕ್ರವರ್ತಿ ಎಂಬ ಎರಡು ಉತ್ತಮ ಆಯ್ಕೆಗಳಿವೆ.

ಭಾರತ ಸಂಭಾವ್ಯ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ/ರಿಂಕು ಸಿಂಗ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ/ಕುಲ್ದೀಪ್ ಯಾದವ್.