
8 ವರ್ಷಗಳ ನಂತರ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಕರ್ನಾಟಕದ ಅನುಭವಿ ಬ್ಯಾಟ್ಸ್ಮನ್ ಕರುಣ್ ನಾಯರ್ಗೆ ಇಂಗ್ಲೆಂಡ್ ಪ್ರವಾಸದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್ ಪ್ರವಾಸದಲ್ಲಿ ಐದು ಟೆಸ್ಟ್ಗಳ ಸರಣಿಯಲ್ಲಿ ನಾಲ್ಕು ಪಂದ್ಯಗಳನ್ನು ಆಡಿದ ಕರುಣ್ 25.62 ಸರಾಸರಿಯಲ್ಲಿ ಕೇವಲ 205 ರನ್ ಗಳಿಸಿದರು. ಇದರಲ್ಲಿ ಕೇವಲ ಒಂದು ಅರ್ಧಶತಕ ಮಾತ್ರ ಸೇರಿತ್ತು.

ಇದೀಗ ಪ್ರವಾಸ ಮುಗಿಸಿ ಬಂದಿರುವ ಕರುಣ್ ESPNcricinfo ಜೊತೆ ಮಾತನಾಡಿದ್ದು, ಇಂಗ್ಲೆಂಡ್ನಲ್ಲಿ ಶತಕ ಬಾರಿಸದಿರುವುದು ಬೇಸರ ಮೂಡಿಸಿದೆ ಎಂದಿದ್ದಾರೆ. ಅಲ್ಲದೆ ಓವಲ್ನಲ್ಲಿ ನಡೆದ ಕೊನೆಯ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಉತ್ತಮ ಆರಂಭ ಪಡೆದ ಹೊರತಾಗಿಯೂ ತಮ್ಮ ಅರ್ಧಶತಕವನ್ನು ಶತಕವನ್ನಾಗಿ ಪೂರೈಸಿದರಿವುದು ಕೂಡ ಬೇಸರ ತಂದಿದೆ ಎಂದಿದ್ದಾರೆ.

ಓವಲ್ನಲ್ಲಿ ನನ್ನ ಆರಂಭವನ್ನು ಶತಕವಾಗಿ ಪರಿವರ್ತಿಸದಿರುವುದು ನನಗೆ ನಿರಾಶೆಯನ್ನುಂಟುಮಾಡಿತು. ಆದರೆ ಹಿಂತಿರುಗಿ ನೋಡಿದಾಗ, ಆ ಕಠಿಣ ಪರಿಸ್ಥಿತಿಯಲ್ಲಿ ಮೊದಲ ದಿನದಂದು ತಂಡದೊಂದಿಗೆ ನಿಲ್ಲುವುದು ನನಗೆ ಬಹಳ ಮುಖ್ಯವಾಗಿತ್ತು. ನಾನು ಮೊದಲು ಅಲ್ಲಿ ಆಡಿದ್ದೇನೆ ಸರ್ರೆ ವಿರುದ್ಧ ನಾನು ನಾರ್ಥಾಂಟ್ಸ್ ಪರ 150 ರನ್ ಗಳಿಸಿದ್ದೆ. ಆದರೆ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸಲು ಸಾಧ್ಯವಾಗುತ್ತದೆ ಎಂದು ನಾನು ಆಶಿಸಿದ್ದೆ, ಆದರೆ ಅದು ನನಗೆ ಸಾಧ್ಯವಾಗಲಿಲ್ಲ.

ಇದು ಏರಿಳಿತಗಳ ಸರಣಿಯಾಗಿತ್ತು, ನಾನು ಅದರ ಬಗ್ಗೆ ಬಹಳಷ್ಟು ಯೋಚಿಸಿದೆ. ಆದರೆ ಏನಾಯಿತು ಎಂಬುದನ್ನು ಮರೆತು ಮುಂದಿನ ಕೆಲವು ತಿಂಗಳುಗಳಲ್ಲಿ ನಾನು ಏನು ಮಾಡಬೇಕು ಎಂಬುದರ ಮೇಲೆ ಗಮನಹರಿಸುವುದು ಸಹ ಮುಖ್ಯವಾಗಿದೆ ಎಂದು ಕರುಣ್ ಹೇಳಿದ್ದಾರೆ.

ಕಮ್ಬ್ಯಾಕ್ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ನಾಯರ್ ಶೂನ್ಯಕ್ಕೆ ಔಟಾಗಿದ್ದರು. ಲೀಡ್ಸ್ನಲ್ಲಿ ನಡೆದ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 20 ರನ್ ಗಳಿಸಿದ್ದರು. ನಂತರ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಎರಡನೇ ಟೆಸ್ಟ್ನಲ್ಲಿ ಕ್ರಮವಾಗಿ 31 ಮತ್ತು 26 ರನ್ಗಳ ಇನ್ನಿಂಗ್ಸ್ ಆಡಿದರು. ಲಾರ್ಡ್ಸ್ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 40 ರನ್ ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ 14 ರನ್ ಗಳಿಸಿದ್ದರು.

ಮ್ಯಾಂಚೆಸ್ಟರ್ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಡಲಾಯಿತು. ಆದಾಗ್ಯೂ ಓವಲ್ನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದ ಕರುಣ್, ಮೊದಲ ಇನ್ನಿಂಗ್ಸ್ನಲ್ಲಿ 57 ರನ್ ಬಾರಿಸಿ ಭಾರತವನ್ನು 200 ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಉಳಿದಂತೆ ಎರಡನೇ ಇನ್ನಿಂಗ್ಸ್ನಲ್ಲಿ ಕರುಣ್ 17 ರನ್ ಬಾರಿಸಲಷ್ಟೇ ಶಕ್ತರಾಗಿದ್ದರು.