
ಈ ಬಾರಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಎಲ್ಲರ ಗಮನ ಸೆಳೆದ ಆಟಗಾರನೆಂದರೆ ಸಮಿತ್ ದ್ರಾವಿಡ್. ಹೀಗೆ ಎಲ್ಲರ ಕೇಂದ್ರ ಬಿಂದುವಾಗಲು ಮುಖ್ಯ ಕಾರಣ ಹೆಸರಿನ ಹಿಂದೆಯಿದ್ದ ದ್ರಾವಿಡ್ ಎನ್ನುವ ಸರ್ನೇಮ್. ತಂದೆ ರಾಹುಲ್ ದ್ರಾವಿಡ್ ಅವರ ಸುಪುತ್ರನಾಗಿದ್ದರಿಂದ ಸಮಿತ್ ಟೂರ್ನಿಯ ಆರಂಭದಿಂದಲೇ ಸುದ್ದಿಯಲ್ಲಿದ್ದರು. ಆದರೆ ಟೂರ್ನಿ ಮುಗಿದಾಗ ಸಮಿತ್ ದ್ರಾವಿಡ್ ಸುದ್ದಿಯಾಗುತ್ತಿರುವುದು ಕಳಪೆ ಪ್ರದರ್ಶನದ ಕಾರಣದಿಂದ ಎಂಬುದು ವಿಪರ್ಯಾಸ.

ಹೌದು, ಈ ಬಾರಿಯ ಮಹಾರಾಜ ಟೂರ್ನಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಆಟಗಾರರಲ್ಲಿ ಸಮಿತ್ ದ್ರಾವಿಡ್ ಕೂಡ ಒಬ್ಬರು. ಏಕೆಂದರೆ ಮೈಸೂರು ವಾರಿಯರ್ಸ್ ತಂಡದ ಪರ 7 ಪಂದ್ಯಗಳನ್ನಾಡಿರುವ ಸಮಿತ್ ಕಲೆಹಾಕಿದ್ದು ಕೇವಲ 82 ರನ್ಗಳು. ಈ 82 ರನ್ಗಳನ್ನು ಬಾರಿಸಲು ತೆಗೆದುಕೊಂಡಿದ್ದು 72 ಎಸೆತಗಳನ್ನು ಎಂಬುದು ಇಲ್ಲಿ ಉಲ್ಲೇಖಾರ್ಹ.

ಮೈಸೂರು ವಾರಿಯರ್ಸ್ ಪರ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಸಮಿತ್ ದ್ರಾವಿಡ್ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಕಲೆಹಾಕಿದ್ದು ಕೇವಲ 5 ರನ್ಗಳು. ಇನ್ನು ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ 12, ಹುಬ್ಬಳ್ಳಿ ಟೈಗರ್ಸ್ ವಿರುದ್ಧ 2, ಮಂಗಳೂರು ಡ್ರಾಗನ್ಸ್ ವಿರುದ್ಧ 16, ಶಿವಮೊಗ್ಗ ಲಯನ್ಸ್ ವಿರುದ್ಧ 7 ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 7 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

ಇನ್ನು ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧದ ಪಂದ್ಯದಲ್ಲಿ 24 ಎಸೆತಗಳಲ್ಲಿ 33 ರನ್ ಬಾರಿಸಿದ್ದು ಸಮಿತ್ ಅವರ ಗರಿಷ್ಠ ಸ್ಕೋರ್. 7 ಪಂದ್ಯಗಳಲ್ಲೂ ಬ್ಯಾಟ್ ಬೀಸಿರುವ ಯುವ ದಾಂಡಿಗ ಕಲೆಹಾಕಿದ್ದು ಕೇವಲ 84 ರನ್ಗಳು ಮಾತ್ರ. ಅಂದರೆ ಕೇವಲ 11.71 ಸರಾಸರಿಯಲ್ಲಷ್ಟೇ ರನ್ಗಳಿಸಿದ್ದಾರೆ.

ಈ ಕಳಪೆ ಬ್ಯಾಟಿಂಗ್ ಕಾರಣದಿಂದಲೇ ಸಮಿತ್ ದ್ರಾವಿಡ್ ಅವರನ್ನು ಮೈಸೂರು ವಾರಿಯರ್ಸ್ ತಂಡವು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಲ್ಲಿ ಕಣಕ್ಕಿಳಿಸಿರಲಿಲ್ಲ. ಇದೀಗ ಭಾರತ ಅಂಡರ್ 19 ತಂಡದಲ್ಲಿ ಸ್ಥಾನ ಪಡೆದಿರುವ ಸಮಿತ್ ದ್ರಾವಿಡ್ ಆಸ್ಟ್ರೇಲಿಯಾ ಅಂಡರ್ 19 ವಿರುದ್ಧದ ಪಂದ್ಯಗಳ ಮೂಲಕ ಉತ್ತಮ ಪ್ರದರ್ಶನ ನೀಡಲಿದ್ದಾರಾ ಕಾದು ನೋಡಬೇಕಿದೆ.