ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಟೀಂ ಇಂಡಿಯಾದ ಹೀನಾಯ ಸೋಲಿನ ನಂತರ, ಕ್ರಿಕೆಟ್ ದಿಗ್ಗಜರು ಭಾರತೀಯ ಆಟಗಾರರಿಗೆ ದೇಶೀಯ ಕ್ರಿಕೆಟ್ ಆಡಲು ಸಲಹೆ ನೀಡಿದ್ದರು. ಇತ್ತೀಚೆಗೆ, ಪರಿಶೀಲನಾ ಸಭೆಯ ನಂತರ, ಬಿಸಿಸಿಐ ಕೂಡ ತಂಡದ ಆಟಗಾರರು ದೇಶೀಯ ಕ್ರಿಕೆಟ್ ಆಡುವುದನ್ನು ಕಡ್ಡಾಯಗೊಳಿಸಿತ್ತು. ಆ ಪ್ರಕಾರ ಶೀಘ್ರದಲ್ಲೇ ಆರಂಭವಾಗಲಿರುವ ರಣಜಿ ಟ್ರೋಫಿಯ ಎರಡನೇ ಸುತ್ತಿನಲ್ಲಿ ಭಾರತದ ಹಲವು ಸ್ಟಾರ್ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.
ರಣಜಿ ಟ್ರೋಫಿಯಲ್ಲಿ ಆಡುವುದಾಗಿ ಈಗಾಗಲೇ ರೋಹಿತ್ ಶರ್ಮಾ ಖಚಿತಪಡಿಸಿದ್ದಾರೆ. ಇವರ ಜೊತೆಗೆ ಅನುಭವಿ ಸ್ಪಿನ್ನರ್ ರವೀಂದ್ರ ಜಡೇಜಾ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ ಕೂಡ ಈ ದೇಶೀಯ ಟೂರ್ನಿಯಲ್ಲಿ ಆಡುವುದನ್ನು ಖಚಿತಪಡಿಸಿದ್ದಾರೆ. ಹೀಗಾಗಿ ಜಡೇಜಾ ಮತ್ತು ಪಂತ್ ಶೀಘ್ರದಲ್ಲೇ ಪರಸ್ಪರ ಮುಖಾಮುಖಿಯಾಗುವುದನ್ನು ನಾವು ಕಾಣಬಹುದಾಗಿದೆ.
ಜನವರಿ 18 ರಂದು ಬಿಸಿಸಿಐ ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾವನ್ನು ಪ್ರಕಟಿಸಿದೆ. ಇದರಲ್ಲಿ ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ ಕೂಡ ಸ್ಥಾನ ಪಡೆದಿದ್ದಾರೆ. ಭಾರತ ಈ ಟೂರ್ನಿಯಲ್ಲಿ ಫೆಬ್ರವರಿ 20 ರಿಂದ ಬಾಂಗ್ಲಾದೇಶ ವಿರುದ್ಧದ ಪಂದ್ಯದೊಂದಿಗೆ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಇದಕ್ಕೂ ಮುನ್ನ ಜಡೇಜಾ ಮತ್ತು ಪಂತ್ ದೇಶೀ ಟೂರ್ನಿಯಲ್ಲಿ ಮುಖಾಮುಖಿಯಾಗಲಿದ್ದಾರೆ.
ರಣಜಿ ಟ್ರೋಫಿಯ ಮುಂದಿನ ಸುತ್ತಿನಲ್ಲಿ ಸೌರಾಷ್ಟ್ರ ಮತ್ತು ದೆಹಲಿ ನಡುವೆ ಜನವರಿ 23 ರಂದು ಪಂದ್ಯ ನಡೆಯಲಿದೆ. ಪಂತ್ ಡೆಲ್ಲಿ ಪರ ಆಡಿದರೆ, ಜಡೇಜಾ ಸೌರಾಷ್ಟ್ರ ತಂಡದಲ್ಲಿ ಆಡಲಿದ್ದಾರೆ. ಜನವರಿ 2023 ರಿಂದ ಎರಡು ವರ್ಷಗಳ ನಂತರ ಜಡೇಜಾ ರಣಜಿ ಟ್ರೋಫಿಯಲ್ಲಿ ಕಾಣಿಸಿಕೊಳ್ಳಲಿದ್ದು, ಇತ್ತ ರಿಷಬ್ ಪಂತ್ ಕೂಡ ಬಹಳ ದಿನಗಳ ನಂತರ ದೇಶೀ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.
ಜಡೇಜಾ ಜನವರಿ 23 ರಿಂದ ದೆಹಲಿ ವಿರುದ್ಧ ರಣಜಿ ಪಂದ್ಯವನ್ನು ಆಡಲು ಸಿದ್ಧರಾಗಿದ್ದಾರೆ. ಇದಕ್ಕಾಗಿ ತಯಾರಿ ನಡೆಸುತ್ತಿರುವ ಜಡೇಜಾ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ. ಭಾನುವಾರ ಪಿಟಿಐ ಜೊತೆ ಮಾತನಾಡಿದ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಜಯದೇವ್ ಶಾ, ಜಡೇಜಾ ಇಂದು ತರಬೇತಿಗೆ ಹಾಜರಾಗಿದ್ದು, ಅವರು ಮುಂದಿನ ಪಂದ್ಯವನ್ನು ಆಡಲಿದ್ದಾರೆ ಎಂದಿದ್ದಾರೆ.
ವಿರಾಟ್ ಕೊಹ್ಲಿ ಕೂಡ ದೆಹಲಿ ಪರ ರಣಜಿ ಟ್ರೋಫಿ ಆಡಲಿದ್ದಾರೆ ಎಂದು ವರದಿಯಾಗಿದೆ. ಆದರೆ ಗಾಯದ ಕಾರಣ ಅವರು ಆಡುವುದು ಅನುಮಾನವಾಗಿದೆ. ಇತ್ತ ಮುಂಬೈ ಪರ ಆಡುತ್ತಿರುವ ರೋಹಿತ್ ಶರ್ಮಾ ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ರಣಜಿ ಟ್ರೋಫಿ ಆಡುವ ಇಂಗಿತವನ್ನು ದೃಢಪಡಿಸಿದರು. ಇವರಲ್ಲದೆ ಟೀಂ ಇಂಡಿಯಾದ ಯುವ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಕೂಡ ಈ ದೇಶೀಯ ಟೂರ್ನಿಯಲ್ಲಿ ಅಬ್ಬರಿಸಲಿದ್ದಾರೆ.