
ಟೀಮ್ ಇಂಡಿಯಾದ ಏಕದಿನ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಲಾಗಿದೆ. ಅವರ ಸ್ಥಾನದಲ್ಲಿ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಟೀಮ್ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ, ರೋಹಿತ್ ಶರ್ಮಾ ಅವರನ್ನು ಏಕದಿನ ತಂಡದ ನಾಯಕರನ್ನಾಗಿ ಆಯ್ಕೆ ಮಾಡಿರುವುದು ಉತ್ತಮ ನಿರ್ಧಾರ ಎಂದಿದ್ದಾರೆ.

ಏಕೆಂದರೆ ರೋಹಿತ್ ತಂಡಕ್ಕೆ ಉತ್ತಮವಾದದ್ದನ್ನು ಮಾಡುತ್ತಾರೆ. ಅವರು ಯಾವಾಗಲೂ ತಂಡದ ಹಿತಾಸಕ್ತಿಯ ಬಗ್ಗೆ ಯೋಚಿಸುತ್ತಾರೆ. ತಂಡದ ಪ್ರತಿಯೊಬ್ಬ ಆಟಗಾರನನ್ನು ಸಂಪೂರ್ಣ ಬಳಸಿಕೊಳ್ಳಲು ಬಯಸುವಂತಹ ವ್ಯಕ್ತಿತ್ವ ಅವರದ್ದು, ಹೀಗಾಗಿ ಸೀಮಿತ ಓವರ್ಗಳಿಗೆ ರೋಹಿತ್ ಶರ್ಮಾ ಅವರನ್ನು ನಾಯಕನಾಗಿ ಆಯ್ಕೆ ಮಾಡಿರುವುದು ಉತ್ತಮ ನಿರ್ಧಾರ ಎಂದು ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಏಕದಿನ ಮತ್ತು ಟೆಸ್ಟ್ ಎರಡರಲ್ಲೂ ಶ್ರೇಷ್ಠ ಆಟಗಾರರು. ಈ ತಂಡವು ಅತ್ಯುತ್ತಮ ವೇಗದ ಬೌಲಿಂಗ್ ಬಳಗವನ್ನು ಹೊಂದಿದೆ. ಈ ತಂಡವು ಆಸ್ಟ್ರೇಲಿಯಾ ತಂಡವನ್ನು ಅವರದ್ದೇ ನೆಲದಲ್ಲಿ ಸೋಲಿಸಿದೆ. ಹೀಗಾಗಿ ಮುಂದಿನ ದಿನಗಳಲ್ಲೂ ಟೀಮ್ ಇಂಡಿಯಾದಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು ಎಂದರು.

ವಿರಾಟ್ ಕೊಹ್ಲಿ ನಾಯಕರಾಗಿದ್ದ ವೇಳೆ ಟೀಮ್ ಇಂಡಿಯಾ ಕೋಚ್ ಆಗಿ ರವಿ ಶಾಸ್ತ್ರಿ ಅವರು ಕಾರ್ಯ ನಿರ್ವಹಿಸಿದ್ದರು. 2017ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ನಲ್ಲಿ ಸೋಲನುಭವಿಸಿದ ನಂತರ ರವಿಶಾಸ್ತ್ರಿ ಅವರನ್ನು ಕೋಚ್ ಆಗಿ ನೇಮಿಸಲು ಕೊಹ್ಲಿಯೇ ಮುಖ್ಯ ಕಾರಣ ಎಂದು ಹೇಳಲಾಗುತ್ತದೆ.

ಕೊಹ್ಲಿ ಹಾಗೂ ಶಾಸ್ತ್ರಿ ನಡುವೆ ಉತ್ತಮ ಹೊಂದಾಣಿಕೆ ಕೂಡ ಇದ್ದು, ಹೀಗಾಗಿಯೇ ಇವರ ಅವಧಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿತು. ಇದಾಗ್ಯೂ ರವಿ ಶಾಸ್ತ್ರಿ-ಕೊಹ್ಲಿ ನೇತೃತ್ವದಲ್ಲಿ ಟೀಮ್ ಇಂಡಿಯಾ ಐಸಿಸಿ ಟ್ರೋಫಿ ಮಾತ್ರ ಗೆದ್ದಿರಲಿಲ್ಲ. ಇದೀಗ ರವಿಶಾಸ್ತ್ರಿ ಅಧಿಕಾರಾವಧಿ ಮುಗಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಅವರನ್ನು ಏಕದಿನ ತಂಡದ ನಾಯಕನ ಸ್ಥಾನದಿಂದಲೂ ಕೆಳಗಿಸಿರುವುದು ವಿಶೇಷ.