
ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕ್ರಮೇಣ ಚೇತರಿಸಿಕೊಳ್ಳುತ್ತಿದ್ದಾರೆ. ಇದೇ ಕಾರಣದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಐಪಿಎಲ್ನಿಂದ ಹೊರಗುಳಿದಿದ್ದಾರೆ. ಇನ್ನು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲೂ ಪಂತ್ ಕಾಣಿಸಿಕೊಳ್ಳುವುದಿಲ್ಲ ಎಂಬುದು ಖಚಿತವಾಗಿದೆ.

ಇದರ ನಡುವೆ ರಿಷಭ್ ಪಂತ್ ಯಾವಾಗ ಕಂಬ್ಯಾಕ್ ಮಾಡುತ್ತಾರೆ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಕುತೂಹಲಕಾರಿ ಪ್ರಶ್ನೆಗೆ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಉತ್ತರಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಂಗೂಲಿ, ರಿಷಭ್ ಪಂತ್ ತಂಡಕ್ಕೆ ಮರಳಲು ಕನಿಷ್ಠ ಒಂದರಿಂದ ಎರಡು ವರ್ಷ ಬೇಕು ಎಂದಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಪಂತ್ ಸ್ಥಾನ ತುಂಬುವುದು ತುಂಬಾ ಕಷ್ಟ. ಅವರ ಬದಲಿ ಆಯ್ಕೆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅಪಘಾತದ ನಂತರ ನಾನು ಪಂತ್ ಅವರೊಂದಿಗೆ ಎರಡು ಬಾರಿ ಮಾತನಾಡಿದೆ. ಅವರು ಇದೀಗ ಕಠಿಣ ಸಮಯವನ್ನು ಎದುರಿಸುತ್ತಿದ್ದಾರೆ. ಗಾಯಗಳು ಮತ್ತು ಶಸ್ತ್ರಚಿಕಿತ್ಸೆಯಿಂದ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಗಂಗೂಲಿ ತಿಳಿಸಿದರು.

ಅಲ್ಲದೆ ಪ್ರಸ್ತುತ ಸನ್ನಿವೇಶ ಗಮನಿಸಿದರೆ ರಿಷಭ್ ಪಂತ್ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಲು ಒಂದು ವರ್ಷದಿಂದ ಎರಡು ವರ್ಷಗಳು ಬೇಕಾಗಬಹುದು. ಇದು ಆತನ ಪಾಲಿಗೆ ಇದು ಕಠಿಣ ಸಮಯ ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ.

ಇದರೊಂದಿಗೆ ಮುಂಬರುವ ಏಕದಿನ ವಿಶ್ವಕಪ್ನಲ್ಲೂ ರಿಷಭ್ ಪಂತ್ ಕಾಣಿಸಿಕೊಳ್ಳುವುದಿಲ್ಲ ಎಂಬುದು ಕನ್ಫರ್ಮ್ ಆಗಿದೆ. ಅಲ್ಲದೆ 2024 ಅಥವಾ 2025 ರಲ್ಲಿ ರಿಷಭ್ ಪಂತ್ ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಬಹುದು. ಇದರ ನಡುವೆ ಟೀಮ್ ಇಂಡಿಯಾದಲ್ಲಿ ಬೇರೆ ವಿಕೆಟ್ ಕೀಪರ್ಗಳು ಮಿಂಚಿದರೆ ಪಂತ್ ಕಂಬ್ಯಾಕ್ ಮತ್ತಷ್ಟು ಕಷ್ಟಕರವಾಗಿರಲಿದೆ.

ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಇದುವರೆಗೆ ರಿಷಭ್ ಪಂತ್ ಅವರ ಬದಲಿ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ. ಅಭಿಷೇಕ್ ಪೊರೆಲ್ ಅಥವಾ ಹಿರಿಯ ದೇಶಿಯ ಆಟಗಾರ ಶೆಲ್ಡನ್ ಜಾಕ್ಸನ್ ಅವರಿಗೆ ಅವಕಾಶ ನೀಡುವ ಸಾಧ್ಯತೆಯಿದೆ.

ಹಾಗೆಯೇ ತಂಡಕ್ಕೆ ಹೊಸ ನಾಯಕನನ್ನು ಕೂಡ ಆಯ್ಕೆ ಮಾಡಬೇಕಿದೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ ಹೆಸರು ಮುಂಚೂಣಿಯಲ್ಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೀಗಿದೆ: ಡೇವಿಡ್ ವಾರ್ನರ್, ಪೃಥ್ವಿ ಶಾ, ರಿಪಾಲ್ ಪಟೇಲ್, ರೋವ್ಮನ್ ಪೊವೆಲ್, ಸರ್ಫರಾಜ್ ಖಾನ್, ಯಶ್ ಧುಲ್, ಮಿಚೆಲ್ ಮಾರ್ಷ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಅನ್ರಿಕ್ ನೋಕಿಯಾ, ಚೇತನ್ ಸಕರಿಯಾ, ಕಮಲೇಶ್ ನಾಗರಕೋಟಿ, ಖಲೀಲ್ ಅಹ್ಮದ್, ಲುಂಗಿ ಎನ್ಗಿಡಿ, ಮುಸ್ತಫಿಜುರ್ ರೆಹಮಾನ್, ಅಮನ್ ಖಾನ್, ಕುಲದೀಪ್ ಯಾದವ್, ಕುಲದೀಪ್ ಯಾದವ್, ವಿಕಿ ಓಸ್ಟ್ವಾಲ್, ರಿಲೀ ರೊಸೊ, ಮನೀಶ್ ಪಾಂಡೆ, ಮುಖೇಶ್ ಕುಮಾರ್, ಇಶಾಂತ್ ಶರ್ಮಾ , ಫಿಲ್ ಸಾಲ್ಟ್ .