- Kannada News Photo gallery Cricket photos Rohit Sharma talking about Virat Kohli at the post match presentation after series sealing win
Rohit Sharma: ಪಂದ್ಯ ಮುಗಿದ ಬಳಿಕ ಕೊಹ್ಲಿ ಆಟದ ಬಗ್ಗೆ ನಾಯಕ ರೋಹಿತ್ ಶರ್ಮಾ ಹೇಳಿದ್ದೇನು ನೋಡಿ
IND vs WI T20: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಗೆದ್ದ ಬಳಿಕ ಆಟಗಾರರ ಪ್ರದರ್ಶನದ ಬಗ್ಗೆ ಮಾತನಾಡಿದ ಭಾರತದ ನಾಯಕ ರೋಹಿತ್ ಶರ್ಮಾ, ಪ್ರಮುಖವಾಗಿ ವಿರಾಟ್ ಕೊಹ್ಲಿ ನೀಡಿದ ಕೊಡುಗೆ ಬಗ್ಗೆ ಹಾಡಿಹೊಗಳಿದ್ದಾರೆ. ಅವರು ಏನು ಹೇಳಿದರು ಎಂಬುದನ್ನು ನೋಡಿ.
Updated on: Feb 19, 2022 | 8:43 AM

ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾದ ಗೆಲುವಿನ ಓಟ ಭರ್ಜರಿ ಆಗಿ ಮುಂದುವರೆದಿದೆ. ಶುಕ್ರವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲೂ ಭಾರತ 8 ರನ್ಗಳ ರೋಚಕ ಜಯ ಸಾಧಿಸಿತು. ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಭಾರತ ತಂಡಕ್ಕೆ ಸಿಕ್ಕ 100ನೇ ಗೆಲುವು ಎಂಬುದು ವಿಶೇಷ. ರೋಹಿತ್ ಶರ್ಮಾ ಈ ರೋಚಕ ಜಯದೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಾಗಲೇ 2-0 ಅಂತರದಲ್ಲಿ ಗೆದ್ದುಕೊಂಡಿದೆ.

ಸ್ಫೋಟಕ ಬ್ಯಾಟರ್ಗಳಾದ ನಿಕೋಲಸ್ ಪೂರನ್ ಹಾಗೂ ರೊವ್ಮನ್ ಪೊವೆಲ್ ಜೋಡಿಯ ಬಿರುಸಿನ ಬ್ಯಾಟಿಂಗ್ ನಡುವೆಯೂ ಕೆರಿಬಿಯನ್ನರಿಗೆ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ಭಾರತ ಪರ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಅದರಲ್ಲೂ ಕಳಪೆ ಫಾರ್ಮ್ನಿಂದ ಕಂಗೆಟ್ಟಿದ್ದ ಕಿಂಗ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ತಕ್ಕ ಉತ್ತರ ನೀಡಿದರು.

ಪಂದ್ಯ ಮುಗಿದ ಬಳಿಕ ಆಟಗಾರರ ಪ್ರದರ್ಶನದ ಬಗ್ಗೆ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಈ ಹುಡುಗರ ವಿರುದ್ಧ ಆಡುವಾಗ ಒಂದು ಭಯ ಇದ್ದೇ ಇರುತ್ತದೆ. ಇದು ಅಂದುಕೊಂಡಷ್ಟು ಸುಲಭ ಅಲ್ಲ ಎಂಬುದು ನಮಗೆ ತಿಳಿದಿತ್ತು. ಇದಕ್ಕಾಗಿ ನಾವು ಸಾಕಷ್ಟು ಸಿದ್ಧತೆ ನಡೆಸಿದ್ದೆವು ಎಂದು ಹೇಳಿದ್ದಾರೆ.

ಒತ್ತಡಗಳ ನಡುವೆ ನಮ್ಮಲ್ಲಿನ ಯೋಜನೆಯನ್ನು ನಾವು ಜಾರಿಗೆ ತಂದೆವು. ಇಲ್ಲಿ ಅನುಭವ ಪ್ರಮುಖ ಪಾತ್ರವಹಿಸುತ್ತದೆ. ಭುವನೇಶ್ವರ್ ಕುಮಾರ್ ಸತತವಾಗಿ ಯಾರ್ಕರ್ – ಬೌನ್ಸರ್ಗಳನ್ನು ಎಸೆಯುತ್ತಿದ್ದರು. ಅವರ ಪ್ರತಿಭೆ ಬಗ್ಗೆ ನಮಗೆ ನಂಬಿಕೆ ಇತ್ತು ಎಂದು ಹೇಳಿದ್ದಾರೆ.

ಕೊಹ್ಲಿ ಬಗ್ಗೆ ಮೆಚ್ಚುಗೆಯ ಮಾತನಾಡಿರುವ ರೋಹಿತ್, ಇಂದು ವಿರಾಟ್ ಕೊಹ್ಲಿ ನೀಡಿದ ಪ್ರದರ್ಶನ ಮಹತ್ವದ್ದಾಗಿತ್ತು. ಅವರು ಬ್ಯಾಟ್ ಹಿಡಿದು ಕ್ರೀಸ್ಗೆ ಬಂದು ಆಟ ಶುರು ಮಾಡಿದಾಗ ನನ್ನ ಮೇಲಿದ್ದ ಒತ್ತಡ ಕಡಿಮೆ ಆಯಿತು. ಮೊದಲ ಎರಡು ಓವರ್ಗಳಲ್ಲಿ ನಾವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿಲ್ಲ. ಆದರೆ, ಕೊಹ್ಲಿ ಬಂದು ಅಮೋಘ ಹೊಡೆತಗಳ ಮೂಲ ಗಮನ ಸೆಳೆದರು. ಅವರು ಬ್ಯಾಟಿಂಗ್ ಶೈಲಿ ನೋಡಲು ಆಹ್ಲಾದಕರವಾಗಿತ್ತು ಎಂಬುದು ಅವರ ಮಾತು.

ರಿಷಭ್ ಪಂತ್ ಮತ್ತು ವೆಂಕಟೇಶ್ ಅಯ್ಯರ್ ಪಂದ್ಯವನ್ನು ಉತ್ತಮವಾಗಿ ಫಿನಿಶ್ ಮಾಡಿದರು. ಅಯ್ಯರ್ ಪಂದ್ಯದಿಂದ ಪಂದ್ಯಕ್ಕೆ ಬೆಳೆಯುತ್ತಿರುವುದು ಖುಷಿ ನೀಡುತ್ತದೆ. ಅವರ ಕೌಶಲ್ಯದಲ್ಲಿ ತುಂಬಾ ಬದಲಾವಣೆ ಆಗಿದ್ದು ಪ್ರತಿಯೊಬ್ಬ ನಾಯಕನು ಇದನ್ನೆ ಬಯಸುತ್ತಾನೆ. ರೀತಿಯ ಆಟಗಾರ ತಂಡಕ್ಕೆ ಅಗತ್ಯವಿದೆ. – ರೋಹಿತ್ ಶರ್ಮಾ

ನಾವು ಫೀಲ್ಡಿಂಗ್ನಲ್ಲಿ ಕೊಂಚ ಕಳಪೆ ಪ್ರದರ್ಶನ ನೀಡಿದೆವು. ಇದು ಬೇಸರ ತರಿಸಿದೆ. ಸಿಕ್ಕ ಕ್ಯಾಚ್ ಅನ್ನು ನಾವು ಹಿಡಿದಿದ್ದರೆ ಪಂದ್ಯದ ಗತಿ ಬದಲಾಗುತ್ತಿತ್ತು ಎಂದು ರೋಹಿತ್ ಹೇಳಿದರು.









