
ಟೀಮ್ ಇಂಡಿಯಾ ಆಟಗಾರ ಸರ್ಫರಾಝ್ ಖಾನ್ (Sarfaraz Khan) ಇತ್ತೀಚೆಗೆ ನಡೆದ ಬುಚ್ಚಿ ಬಾಬು ಟೂರ್ನಿಯಲ್ಲಿ ಮುಂಬೈ ಪರ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿ ಮಿಂಚಿದ್ದರು. ಈ ಶತಕದಬ್ಬರೊಂದಿಗೆ ದುಲೀಪ್ ಟ್ರೋಫಿಗೆ ಸಜ್ಜಾಗಿದ್ದ ಸರ್ಫರಾಝ್ ಖಾನ್ಗೆ ಆಘಾತ ಎದುರಾಗಿದೆ.

ದುಲೀಪ್ ಟ್ರೋಫಿ ಟೂರ್ನಿಯ ಸೆಮಿಫೈನಲ್ನಲ್ಲಿ ಪಶ್ಚಿಮ ವಲಯ ಪರ ಕಣಕ್ಕಿಳಿಯಲು ಸಜ್ಜಾಗಿದ್ದ ಸರ್ಫರಾಝ್ ಖಾನ್ ಗಾಯಗೊಂಡಿದ್ದಾರೆ. ಹೀಗಾಗಿ ಸೆಪ್ಟೆಂಬರ್ 4 ರಿಂದ ಶುರುವಾಗಲಿರುವ ಕೇಂದ್ರ ವಲಯ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸರ್ಫರಾಝ್ ಖಾನ್ ಕಣಕ್ಕಿಳಿಯುವುದಿಲ್ಲ ಎಂದು ವರದಿಯಾಗಿದೆ.

ಇದಕ್ಕೂ ಮುನ್ನ ಸರ್ಫರಾಝ್ ಖಾನ್ ಬುಚ್ಚಿ ಬಾಬು ಟೂರ್ನಿಯಲ್ಲಿ ಸತತ ಶತಕಗಳನ್ನು ಬಾರಿಸಿದ್ದರು. ಆಗಸ್ಟ್ 18 ರಂದು ನಡೆದ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಇಲೆವೆನ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಕಣಕ್ಕಿಳಿದ ಸರ್ಫರಾಝ್ ಕೇವಲ 92 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು. ಅಲ್ಲದೆ ಈ ಪಂದ್ಯದಲ್ಲಿ 114 ಎಸೆತಗಳನ್ನು ಎದುರಿಸಿ 6 ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ 138 ರನ್ ಬಾರಿಸಿದ್ದರು.

ಇದಾದ ಬಳಿಕ ಹರ್ಯಾಣ ವಿರುದ್ಧದ ಪಂದ್ಯದಲ್ಲೂ ಸರ್ಫರಾಝ್ ಖಾನ್ ಮೂರಂಕಿ ಮೊತ್ತ ಗಳಿಸಿದ್ದರು. ಈ ಪಂದ್ಯದಲ್ಲಿಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸರ್ಫರಾಝ್ ಖಾನ್ 100 ಎಸೆತಗಳಲ್ಲಿ ಶತಕ ಪೂರೈಸಿದರು. ಇನ್ನು ಈ ಪಂದ್ಯದಲ್ಲಿ 112 ಎಸೆತಗಳನ್ನು ಎದುರಿಸಿದ ಬಲಗೈ ದಾಂಡಿಗನ ಬ್ಯಾಟ್ನಿಂದ 9 ಫೋರ್ ಹಾಗೂ 5 ಸಿಕ್ಸ್ಗಳೊಂದಿಗೆ 111 ರನ್ಗಳು ಮೂಡಿಬಂದಿದ್ದವು.

ಈ ಎರಡು ಭರ್ಜರಿ ಶತಕಗಳ ಹುಮ್ಮಸ್ಸಿನೊಂದಿಗೆ ಸರ್ಫರಾಝ್ ಖಾನ್ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದರು. ಆದರೀಗ ಗಾಯಗೊಂಡಿರುವ ಅವರು ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಇತ್ತ ಈ ಬಾರಿಯ ದುಲೀಪ್ ಟ್ರೋಫಿಯಲ್ಲಿ ಸರ್ಫರಾಝ್ ಖಾನ್ ಮಿಂಚಿದ್ದರೆ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗುವ ಸಾಧ್ಯತೆಯಿತ್ತು. ಆದರೆ ದುರಾದೃಷ್ಟ ಗಾಯದಿಂದಾಗಿ ಅವರು ದುಲೀಪ್ ಟ್ರೋಫಿಯಲ್ಲಿ ಕಣಕ್ಕಿಳಿಯಲು ಸಾಧ್ಯವಾಗುತ್ತಿಲ್ಲ..!