
ದೇಶೀ ಟೂರ್ನಿಗಳಲ್ಲಿ ಅಮೋಘ ಪ್ರದರ್ಶನ ನೀಡಿ ಪದೇ ಪದೇ ಟೀಂ ಇಂಡಿಯಾ ಕದ ತಟ್ಟುತ್ತಿರುವ ಸರ್ಫರಾಜ್ ಖಾನ್ಗೆ ನಾನಾ ಕಾರಣಗಳಿಂದ ಭಾರತ ತಂಡದಲ್ಲಿ ಅವಕಾಶ ಸಿಗುತ್ತಿಲ್ಲ. ಆದಾಗ್ಯೂ ತಮ್ಮ ಪ್ರಯತ್ನಗಳನ್ನು ಕೈಬಿಡದ ಸರ್ಫರಾಜ್ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.

ವಾಸ್ತವವಾಗಿ ಇದು ಸರ್ಫರಾಜ್ ಖಾನ್ ಅವರ ಟಿ20 ವೃತ್ತಿಜೀವನದ ಮೊದಲ ಶತಕವಾಗಿದೆ. ಸರ್ಫರಾಜ್ ಅವರ ಅಬ್ಬರದ ಶತಕದ ನೆರವಿನಿಂದ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಕೇವಲ 4 ವಿಕೆಟ್ ಕಳೆದುಕೊಂಡು 220 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಅಸ್ಸಾಂ ತಂಡ ಕೇವಲ 122 ರನ್ಗಳಿಗೆ ಆಲೌಟ್ ಆಗಿ 98 ರನ್ಗಳಿಂದ ಸೋಲೊಪ್ಪಿಕೊಂಡಿತು.

ಅಸ್ಸಾಂ ವಿರುದ್ಧದ ಈ ಪಂದ್ಯದಲ್ಲಿ ಸರ್ಫರಾಜ್ ಖಾನ್ ಕೇವಲ 47 ಎಸೆತಗಳಲ್ಲಿ 100 ರನ್ಗಳ ಅಜೇಯ ಸ್ಫೋಟಕ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್ನಲ್ಲಿ 8 ಬೌಂಡರಿಗಳು ಮತ್ತು 7 ಅಗಾಧ ಸಿಕ್ಸರ್ಗಳು ಸೇರಿದ್ದವು. ಮೇಲೆ ಹೇಳಿದಂತೆ ಕಳೆದ ಎರಡು ವರ್ಷಗಳಿಂದ, ಸರ್ಫರಾಜ್ ದೇಶೀಯ ಕ್ರಿಕೆಟ್ನಲ್ಲಿ ರನ್ ಗಳಿಸುತ್ತಿದ್ದಾರೆ. ರಣಜಿ ಟ್ರೋಫಿಯಲ್ಲಿ ಶತಕಗಳ ಮೇಲೆ ಶತಕ ಬಾರಿಸಿದ್ದ ಸರ್ಫರಾಜ್, ಭಾರತದ ಪರ ಚೊಚ್ಚಲ ಟೆಸ್ಟ್ನಲ್ಲಿ ಅರ್ಧಶತಕ ಬಾರಿಸಿದ್ದರು.

ಸರ್ಫರಾಜ್ಗೆ ಟೀಂ ಇಂಡಿಯಾದಲ್ಲಿ ಸಧ್ಯಕ್ಕೆ ಸ್ಥಾನ ಸಿಗದಿದ್ದರೂ ಇನ್ನು ಕೆಲವೇ ದಿನಗಳಲ್ಲಿ ನಡೆಯಲಿರುವ ಐಪಿಎಲ್ ಮಿನಿ ಹರಾಜಿನಲ್ಲಿ ಅವರ ಖರೀದಿಯಲ್ಲಿ ಈ ಶತಕ ಪ್ರಮುಖ ಪಾತ್ರವಹಿಸಲಿದೆ. ಕೇವಲ 47 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ, ಸರ್ಫರಾಜ್ ಅವರು ಕೆಂಪು ಚೆಂಡಿನ ಕ್ರಿಕೆಟ್ನಲ್ಲಿ ಮಾತ್ರವಲ್ಲದೆ ಬಿಳಿ ಚೆಂಡಿನ ಕ್ರಿಕೆಟ್ನಲ್ಲಿಯೂ ಪ್ರಮುಖ ಪಂದ್ಯ ವಿಜೇತರಾಗಬಹುದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಪಂದ್ಯದ ಬಗ್ಗೆ ಹೇಳುವುದಾದರೆ.. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು 20 ಓವರ್ಗಳಲ್ಲಿ 4 ವಿಕೆಟ್ಗಳ ನಷ್ಟಕ್ಕೆ 220 ರನ್ ಗಳಿಸಿತು. ಸರ್ಫರಾಜ್ ಖಾನ್ ಜೊತೆಗೆ, ಅಜಿಂಕ್ಯ ರಹಾನೆ ಕೂಡ 42 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಮಧ್ಯೆ, ಸಾಯಿರಾಜ್ ಪಾಟೀಲ್ 9 ಎಸೆತಗಳಲ್ಲಿ ಅಜೇಯ 25 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ ಕೂಡ 20 ರನ್ಗಳ ಕೊಡುಗೆ ನೀಡಿದರೆ, ಆಯುಷ್ ಮ್ಹಾತ್ರೆ 21 ರನ್ಗಳ ಕೊಡುಗೆ ನೀಡಿದರು.