
ಬಾರ್ಡರ್-ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಪಂದ್ಯಕ್ಕೆ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ಸಜ್ಜಾಗಿ ನಿಂತಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಪೈಕಿ ಇಂದು ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.

ಆಸ್ಟ್ರೇಲಿಯಾ ವಿರುದ್ಧ ಉತ್ತಮ ದಾಖಲೆ ಹೊಂದಿರುವ ರಿಷಭ್ ಪಂತ್ ಈ ಟೆಸ್ಟ್ ಸರಣಿಯಲ್ಲಿ ಆಡುತ್ತಿಲ್ಲ. ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಪ್ರಮುಖ ಬ್ಯಾಟರ್ ಶ್ರೇಯಸ್ ಅಯ್ಯರ್ ಹೊರಗುಳಿದಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಮ್ಯಾನೇಜ್ಮೆಂಟ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ತಂಡದಲ್ಲಿ ಅನೇಕ ಆಯ್ಕೆಗಳಿದ್ದರು ಯಾರಿಗೆ ಸ್ಥಾನ ನೀಡಬೇಕು ಎಂಬ ಗೊಂದಲ ಮೂಡಿದೆ. ಮುಖ್ಯವಾಗಿ ಒಂದು ಸ್ಥಾನಕ್ಕಾಗಿ ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮಾ ನಡುವೆ ಡಿಬೆಟ್ ಶುರುವಾಗಿದೆ.

ರೋಹಿತ್ ಜೊತೆ ಉಪ ನಾಯಕ ಕೆಎಲ್ ರಾಹುಲ್ ಕಣಕ್ಕಿಳಿಯುವುದು ಖಚಿತವಾಗಿದೆ. ಹೀಗಾದಲ್ಲಿ ಶುಭ್ಮನ್ ಗಿಲ್ ಅವರನ್ನು ಯಾವ ಕ್ರಮಾಂಕದಲ್ಲಿ ಆಡಿಸಬೇಕು?, ಅಥವಾ ಅವರನ್ನು ಕೈಬಿಡಬೇಕೆ ಎಂಬ ಚರ್ಚೆ ನಡೆಯುತ್ತಿದೆ.

ಭಾರತದ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಸಲು ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ ಹಾಗೂ ಕೆಎಸ್ ಭರತ್ ಇದ್ದಾರೆ. ಉಳಿದಿರುವುದು ಶ್ರೇಯಸ್ ಅಯ್ಯರ್ ಆಡುತ್ತಿದ್ದ ಜಾಗ. ಇಲ್ಲಿ ಸೂರ್ಯಕುಮಾರ್ ಆಡಬೇಕು ಎಂಬುದು ರೋಹಿತ್ ಇಚ್ಚೆಯಾದರೆ, ಗಿಲ್ಗೆ ಅವಕಾಶ ನೀಡಬೇಕು ಎಂಬುದು ದ್ರಾವಿಡ್ ಮನವಿ. ಹೀಗಾಗಿ ಈ ಒಂದು ಸ್ಥಾನಕ್ಕೆ ತಂಡದಲ್ಲಿ ಗೊಂದಲ ಉಂಟಾಗಿದೆ.

ಇವರಿಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಸುಲಭ ಕೆಲಸವಲ್ಲ. ಯಾಕೆಂದರೆ ಗಿಲ್ ಮೂರು ಮಾದರಿಯ ಕ್ರಿಕೆಟ್ನಲ್ಲಿ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಅಲ್ಲದೆ ಗಿಲ್ ರೆಡ್ ಬಾಲ್ ಕ್ರಿಕೆಟ್ಗಾಗಿಯೇ ಆಯ್ಕೆ ಆದವರು.

ಇತ್ತ ಅನುಭವಿ ಪ್ಲೇಯರ್ ಸೂರ್ಯಕುಮಾರ್ ಆಸೀಸ್ ದಾಳಿಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ. ಜೊತೆಗೆ ಟೆಸ್ಟ್ ಕ್ರಿಕೆಟ್ನಲ್ಲಿ ಸೂರ್ಯನಿಗೆ ಅವಕಾಶ ನೀಡಬೇಕು ಎಂಬ ಕೂಗು ಬಹುದಿನಗಳಿಂದ ಕೇಳಿಬರುತ್ತಿದೆ.

''ಗಿಲ್ ಸೂಪರ್ ಫಾರ್ಮ್ನಲ್ಲಿದ್ದಾರೆ. ಅವರ ಬ್ಯಾಟ್ನಿಂದ ಅನೇಕ ಶತಕಗಳು ಬಂದಿವೆ. ಹಾಗೆಯೆ ಸೂರ್ಯ ತನ್ನ ಘನತೆಗೆ ತಕ್ಕಂತೆ ಆಡುತ್ತಿದ್ದಾರೆ. ಇವರಿಬ್ಬರಲ್ಲಿ ಯಾರನ್ನ ಆಡಿಸಬೇಕು ಎಂಬುದನ್ನು ನಾವಿನ್ನೂ ಆಯ್ಕೆ ಮಾಡಿಲ್ಲ,'' ಎಂದು ರೋಹಿತ್ ಶರ್ಮಾ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಭಾರತದ ಸಂಭಾವ್ಯ ಪ್ಲೇಯಿಂಗ್ XI: ರೋಹಿತ್ ಶರರ್ಮಾ, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್/ಸೂರ್ಯಕುಮಾರ್ ಯಾದವ್, ಕೆಎಲ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್/ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ.