2024ರ ಟಿ20 ವಿಶ್ವಕಪ್ನಲ್ಲಿ ಐರ್ಲೆಂಡ್ ವಿರುದ್ಧ ಇಂದು ನಡೆಯಲ್ಲಿರುವ ಪಂದ್ಯದೊಂದಿಗೆ ಟೀಂ ಇಂಡಿಯಾ ತನ್ನ ಅಭಿಯಾನ ಆರಂಭಿಸುತ್ತಿದೆ. ನ್ಯೂಯಾರ್ಕ್ನ ನಸ್ಸೌ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು, ಟೀಂ ಇಂಡಿಯಾ ಪ್ರಮುಖ ಬದಲಾವಣೆಯೊಂದಿಗೆ ಅಖಾಡಕ್ಕಿಳಿಯುವ ಮುನ್ಸೂಚನೆಗಳು ಈಗಾಗಲೇ ಸಿಕ್ಕಿವೆ.
ಟೀಂ ಇಂಡಿಯಾದಲ್ಲಾಗುತ್ತಿರುವ ಪ್ರಮುಖ ಬದಲಾವಣೆಯೆಂದರೆ ಅದು ಬ್ಯಾಟಿಂಗ್ ಕ್ರಮಾಂಕದಲ್ಲಿ ನೂತನ ಪ್ರಯೋಗ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಅವರೊಂದಿಗೆ ಓಪನಿಂಗ್ ಮಾಡಬಹುದು ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ವರದಿ ನಿಜವಾದರೆ, ಇದು ಖಂಡಿತವಾಗಿಯೂ ತಂಡದ ವಿಕೆಟ್ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ಗೆ ಭರ್ಜರಿ ಲಾಭವಾಗಲಿದೆ.
ಅದು ಹೇಗೆಂದರೆ? ಒಂದು ವೇಳೆ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದರೆ, ಅವರು ಈಗ ಆಡುತ್ತಿರುವ ಮೂರನೇ ಕ್ರಮಾಂಕ ರಿಷಬ್ ಪಂತ್ಗೆ ಸಿಗಲಿದೆ. ಇದರಿಂದ ಈ ಹಿಂದೆ ಗೇಮ್ ಫಿನಿಶರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಪಂತ್ಗೆ ಮೂರನೇ ಕ್ರಮಾಂಕದಲ್ಲಿ ಮುಕ್ತವಾಗಿ ಆಡುವ ಅವಕಾಶ ಸಿಗಲಿದೆ.
ರಿಷಬ್ ಪಂತ್ 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಯಶಸ್ವಿ ಜೈಸ್ವಾಲ್ ಅವರನ್ನು ಪ್ಲೇಯಿಂಗ್ 11 ನಿಂದ ಹೊರಗಿಟ್ಟಿರುವುದು ಒಂದು ಕಾರಣ. ಟೀಂ ಇಂಡಿಯಾ ವಿರಾಟ್ಗೆ ಮುಕ್ತ ಅವಕಾಶ ನೀಡಿದರೆ, ಪಂತ್ 3 ನೇ ಸ್ಥಾನಕ್ಕೆ ಉತ್ತಮ ಆಯ್ಕೆಯಾಗುತ್ತಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ಅಭ್ಯಾಸ ಪಂದ್ಯದಲ್ಲೂ ಪಂತ್ ಮೂರನೇ ಕ್ರಮಾಂದಲ್ಲಿ ಬ್ಯಾಟ್ ಬೀಸಿದ್ದರು.
ನ್ಯೂಯಾರ್ಕ್ ಪಿಚ್ನಲ್ಲಿ ಬಾಂಗ್ಲಾದೇಶ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದ ಪಂತ್ ಗೆಲುವಿನ ಅರ್ಧಶತಕ ಸಿಡಿಸಿದ್ದರು. ಈ ಕ್ರಮಾಂಕದಲ್ಲಿ ನಿರ್ಭೀತಿಯಿಂದ ಬ್ಯಾಟ್ ಬೀಸಿದ್ದ ಪಂತ್ ಅವರ ಗುಣ ಅವರಿಗೆ 3ನೇ ಕ್ರಮಾಂಕದಲ್ಲಿ ಅವಕಾಶ ನೀಡುವುದಕ್ಕೆ ಪುಷ್ಠಿ ನೀಡಿತ್ತಿದೆ.
ಅರ್ಥಾತ್ ಟೀಂ ಇಂಡಿಯಾ ಆರಂಭದಲ್ಲೇ ಮೊದಲ ವಿಕೆಟ್ ಕಳೆದುಕೊಂಡರೂ ಪಂತ್ ವೇಗದ ಬ್ಯಾಟಿಂಗ್ ಮೂಲಕ ರನ್ ರೇಟ್ ಹೆಚ್ಚಿಸಬಲ್ಲರು. ಪಂತ್ ನಂತರ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಅವರಂತಹ ಬ್ಯಾಟ್ಸ್ಮನ್ಗಳೂ ಆಕ್ರಮಣಕಾರಿ ಬ್ಯಾಟಿಂಗ್ಗೆ ಹೆಸರುವಾಸಿಯಾಗಿದ್ದಾರೆ. ಹೀಗಾಗಿ ಇದೊಂದು ಬದಲಾವಣೆ ತಂಡದ ಫಲಿತಾಂಶದ ಮೇಲೆ ಸಾಕಷ್ಟು ಪರಿಣಾಮ ಬೀರುವ ಸಾಧ್ಯತೆಗಳಿವೆ.
ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಬ್ ಪಂತ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಅರ್ಶ್ದೀಪ್ ಸಿಂಗ್, ಮೊಹಮ್ಮದ್ ಸಿರಾಜ್.