- Kannada News Photo gallery Cricket photos Virat Kohli Almost Removed as RCB Captain in 2019: Exclusive Details
RCB: 2019 ರಲ್ಲಿಯೇ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಲು ತೀರ್ಮಾನಿಸಿತ್ತು ಆರ್ಸಿಬಿ..!
Virat Kohli captaincy: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ಗೆಲುವಿನ ಹಿನ್ನೆಲೆಯಲ್ಲಿ ಆಸಕ್ತಿದಾಯಕ ಮಾಹಿತಿ ಹೊರಬಿದ್ದಿದೆ. 2019ರಲ್ಲಿ ಗ್ಯಾರಿ ಕರ್ಸ್ಟನ್ ತಂಡದ ಕೋಚ್ ಆಗಿದ್ದಾಗ ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ತೆಗೆದು ಪಾರ್ಥಿವ್ ಪಟೇಲ್ ಅವರನ್ನು ನೇಮಿಸುವ ಯೋಜನೆ ಹೊಂದಿದ್ದರು . ಆದರೆ ಯಾಕೆ ಅದು ಆಗಲಿಲ್ಲ ಎಂಬುದು ತಿಳಿದಿಲ್ಲ ಎಂದು ಮಾಜಿ ಆಟಗಾರ ಮೊಯಿನ್ ಅಲಿ ಹೇಳಿದ್ದಾರೆ.
Updated on: Jul 28, 2025 | 10:34 PM

ಬರೋಬ್ಬರಿ 18 ವರ್ಷಗಳ ಬಳಿಕ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಗೆಲ್ಲುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಶಸ್ವಿಯಾಯಿತು. ಆದಾಗ್ಯೂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಅವಘಡದಿಂದಾಗಿ ಪ್ರಸ್ತುತ ಆರ್ಸಿಬಿ ಫ್ರಾಂಚೈಸಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಇದೆಲ್ಲದರ ನಡುವೆ ತಂಡದ ಮಾಜಿ ನಾಯಕ ಕೊಹ್ಲಿ ಬಗ್ಗೆ ಅಚ್ಚರಿಯ ಸಂಗತಿಯೊಂದು ಹೊರಬಿದ್ದಿದೆ.

ವಾಸ್ತವವಾಗಿ ಐಪಿಎಲ್ ಉದ್ಘಾಟನಾ ಆವೃತ್ತಿಯಲ್ಲೇ ಆರ್ಸಿಬಿ ತಂಡವನ್ನು ಸೇರಿಕೊಂಡಿದ್ದ ವಿರಾಟ್ ಕೊಹ್ಲಿಗೆ 2013 ರಲ್ಲಿ ಈ ತಂಡದ ನಾಯಕತ್ವ ಹಸ್ತಾಂತರಿಸಲಾಗಿತ್ತು. ಅಲ್ಲಿಂದ ಕೊಹ್ಲಿ 2021 ರವರೆಗೂ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ಆದರೆ ಕೊಹ್ಲಿ ನಾಯಕತ್ವದಲ್ಲಿ ತಂಡ ಒಮ್ಮೆ ಮಾತ್ರ ಫೈನಲ್ಗೇರಿದ್ದನ್ನು ಬಿಟ್ಟರೆ, ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ.

2016 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್ಸಿಬಿ ತಂಡ ಫೈನಲ್ಗೇರಿತ್ತು. ಆದರೆ ಫೈನಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಆ ಬಳಿಕವೂ ಕೊಹ್ಲಿ 2021 ರವರೆಗೆ ಆರ್ಸಿಬಿ ತಂಡವನ್ನು ಮುನ್ನಡೆಸಿದ್ದರು. ಆದರೀಗ ಕೊಹ್ಲಿಯನ್ನು 2019ರಲ್ಲೇ ನಾಯಕತ್ವದಿಂದ ಕೆಳಗಿಳಿಸಲು ತೀರ್ಮಾನಿಸಲಾಗತ್ತು ಎಂಬ ಸ್ಫೋಟಕ ಮಾಹಿತಿಯನ್ನು ಆರ್ಸಿಬಿ ತಂಡದ ಮಾಜಿ ಆಲ್ರೌಂಡರ್ ಮೊಯಿನ್ ಅಲಿ ಬಹಿರಂಗಪಡಿಸಿದ್ದಾರೆ.

ಸ್ಪೋರ್ಟ್ಸ್ ಟಕ್ ಜೊತೆ ಈ ಬಗ್ಗೆ ಮಾತನಾಡಿರುವ ಮೊಯಿನ್ ಅಲಿ, ‘ 2019 ರಲ್ಲಿ ಗ್ಯಾರಿ ಕರ್ಸ್ಟನ್ ತಂಡದ ಮುಖ್ಯ ಕೋಚ್ ಆಗಿದ್ದಾಗ, ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿ ಪಾರ್ಥಿವ್ ಪಟೇಲ್ ಅವರನ್ನು ನಾಯಕನನ್ನಾಗಿ ನೇಮಿಸುವುದು ಬಹುತೇಕ ಖಚಿತವಾಗಿತ್ತು. ಆದರೆ ಆ ಬಳಿಕ ಪಾರ್ಥಿವ್ ಪಟೇಲ್ಗೆ ಏಕೆ ನಾಯಕತ್ವ ನೀಡಲಿಲ್ಲ ಎಂದು ನನಗೆ ತಿಳಿದಿಲ್ಲ. ಆದರೆ ಅವರನ್ನು ಆ ಪಾತ್ರಕ್ಕೆ ಗಂಭೀರವಾಗಿ ಪರಿಗಣಿಸಲಾಗಿತ್ತು ಎಂದು ನನಗೆ ಗೊತ್ತಿತ್ತು ಎಂದಿದ್ದಾರೆ.

2019 ರ ನಂತರವೂ ನಾಯಕನಾಗಿ ಮುಂದುವರೆದಿದ್ದ ಕೊಹ್ಲಿ ಐಪಿಎಲ್ 2021 ರ ನಂತರ ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ಆ ಬಳಿಕ ಆರ್ಸಿಬಿಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಫಾಫ್ ಡುಪ್ಲೆಸಿಸ್ಗೆ ಹಸ್ತಾಂತರಿಸಲಾಯಿತು. ಡುಪ್ಲೆಸಿಸ್ ನಾಯಕತ್ವದಲ್ಲೂ ತಂಡಕ್ಕೆ ಟ್ರೋಫಿ ಸಿಗಲಿಲ್ಲ. ಆದರೆ ಡುಪ್ಲೆಸಿಸ್ ಬಳಿಕ ತಂಡದ ನಾಯಕತ್ವವನ್ನು ವಹಿಸಿಕೊಂಡ ರಜತ್ ಪತಿದಾರ್ ತಂಡವನ್ನು ಪ್ರಶಸ್ತಿ ಗೆಲುವಿನತ್ತ ಮುನ್ನಡೆಸಿದರು.
