90ರ ದಶಕದಲ್ಲಿ ಟೀಮ್ ಇಂಡಿಯಾ ಪರ ಸಂಚಲನ ಸೃಷ್ಟಿಸಿದ ಇಬ್ಬರು ಯಂಗ್ ಬ್ಯಾಟರ್ಗಳೆಂದರೆ ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳಿ. ಅದರಲ್ಲೂ ಆಡಿದ ಮೊದಲ 14 ಟೆಸ್ಟ್ ಇನಿಂಗ್ಸ್ಗಳಲ್ಲಿ 1000 ರನ್ ಪೂರೈಸಿ ಕಾಂಬ್ಳಿ ಹೊಸ ಇತಿಹಾಸ ಬರೆದಿದ್ದರು.
ಹೀಗೆ 21ರ ಹದಿಹರೆಯದಲ್ಲಿ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಕಾಂಬ್ಳಿ ಜಾಹೀರಾತು ಕಂಪೆನಿಗಳ ಹಾಟ್ ಫೇವರೇಟ್ ಆದರು. ಅತ್ತ ಭರ್ಜರಿ ಬ್ಯಾಟಿಂಗ್ನೊಂದಿಗೆ ನೇಮ್ ಫೇಮ್ ಬೆಳೆಸಿಕೊಂಡ ಕಾಂಬ್ಳಿ ಗಳಿಕೆಯು ಲಕ್ಷದಿಂದ ಕೋಟಿಯತ್ತ ಸಾಗಿತು. ಆದರೆ ಈ ಕೋಟಿಗಳೊಂದಿಗೆ ಅವರು ಮೈಮರೆತ್ತಿದ್ದು ಮಾತ್ರ ವಿಪರ್ಯಾಸ.
ಏಕೆಂದರೆ ಒಂದು ಕಾಲದಲ್ಲಿ ಕೋಟಿ ಲೆಕ್ಕದಲ್ಲಿ ದುಡ್ಡು ನೋಡಿದ್ದ ವಿನೋದ್ ಕಾಂಬ್ಳಿ ಈಗ ತಮ್ಮ ದೈನಂದಿನ ಖರ್ಚಿಗಾಗಿ ಬಿಸಿಸಿಐ ನೀಡುವ ಪಿಂಚಣಿಗಾಗಿ ಕಾಯುವಂತಹ ಪರಿಸ್ಥಿತಿಯಲ್ಲಿದ್ದಾರೆ. ಅಲ್ಲದೆ ಈ ಪೆನ್ಷನ್ ಹಣವೇ ಅವರ ಜೀವನದ ಮೂಲಾಧಾರ ಎಂದು ವರದಿಯಾಗಿದೆ.
ತಮ್ಮ ಕೆರಿಯರ್ ವೇಳೆ $1 ಮಿಲಿಯನ್ (ಇಂದು ರೂ. 8.48 ಕೋಟಿ) ಮೌಲ್ಯದ ಗಮನಾರ್ಹ ಗಳಿಕೆ ಮತ್ತು ಆಸ್ತಿ ಹೊಂದಿದ್ದ ವಿನೋದ್ ಕಾಂಬ್ಳಿ ಅವರು ಈಗ ಬಿಸಿಸಿಐ ತಿಂಗಳಿಗೆ ನೀಡುವ 30 ಸಾವಿರ ರೂಪಾಯಿನ್ನು ಪಿಂಚಣಿಯನ್ನು ಅವಲಂಬಿಸಿದ್ದಾರೆ ಎಂದು ವರದಿಯಾಗಿದೆ. ಅಂದರೆ ಬಿಸಿಸಿಐ ನೀಡುವ 30000 ರೂ.ನಿಂದ ಅವರು ತಮ್ಮ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದಾರೆ.
ಇದೀಗ ಆರ್ಥಿಕ ಸಂಕಷ್ಟದೊಂದಿಗೆ ಅನಾರೋಗ್ಯಕ್ಕೀಡಾಗಿರುವ ವಿನೋದ್ ಕಾಂಬ್ಳಿ ತಮ್ಮ ಖರ್ಚು ವೆಚ್ಚಗಳನ್ನು ಈಡೇರಿಸಲು ಮತ್ತೊಬ್ಬರನ್ನು ಆಶ್ರಯಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ. ಈ ಪರಿಸ್ಥಿತಿಯನ್ನು ಮನಗಂಡಿರುವ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್, ಕಾಂಬ್ಳಿ ಅವರಿಗೆ ನೆರವು ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ.
1983ರ ವಿಶ್ವಕಪ್ ತಂಡವು ಕಾಂಬ್ಳಿಗೆ ಬೇಕಾದ ಎಲ್ಲಾ ನೆರವನ್ನು ನೀಡಲು ಸಿದ್ಧ. ನಾವು ಯಾವ ರೀತಿಯಲ್ಲಿ ಸಹಾಯ ಮಾಡಲಿದ್ದೇವೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಈ ನೆರವಿನೊಂದಿಗೆ ವಿನೋದ್ ಕಾಂಬ್ಳಿ ಅವರು ಆರ್ಥಿಕ ಸಂಕಷ್ಟದಿಂದ ಪಾರಾಗುವ ವಿಶ್ವಾಸದಲ್ಲಿದ್ದಾರೆ.