ವರ್ಷದ ಮೊದಲ ಹಬ್ಬ ಸಂಕ್ರಮಣ, ಉತ್ತರಾಯಣ ಪಥ ಬದಲಿಸುವ ಸಂಕ್ರಾಂತಿ ಹಬ್ಬವನ್ನು ಉತ್ತರ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಆಚರಿಸಲಾಯಿತು. ಬಗೆಬಗೆಯ ತಿಂಡಿ ತಿನಿಸುಗಳನ್ನು ಒಂದೆಡೆ ತಂದಿಟ್ಟು ಹಾಡಿ ನಲಿದು ಮಹಿಳೆಯರು ಸಂಭ್ರಮದಿಂದ ಆಚರಿಸಿದರು.
ಧಾರವಾಡದ ಜಾನಪದ ಸಂಶೋಧನಾ ಕೇಂದ್ರದ ಸದಸ್ಯರು ರಂಗಾಯಣದ ಆವರಣದಲ್ಲಿ ತಮ್ಮ ಮನೆಯಿಂದ ಖುಷಿಖುಷಿಯಿಂದ ಒಂದೊಂದು ಬಗೆಯ ಅಡುಗೆ ಮಾಡಿಕೊಂಡು ಬಂದು ಸಂಕ್ರಮಣ ಹಬ್ಬ ಆಚರಿಸಿ ಸಂಭ್ರಮಿಸಿದರು.
ಬಣ್ಣಬಣ್ಣದ ಇಳಕಲ್ ಸೀರೆಯುಟ್ಟು, ಆಭರಣಗಳನ್ನು ಧರಿಸಿರುವ ಮಹಿಳೆಯರು ಹಾಡುತ್ತ ನಲಿಯುತ್ತಾ, ಮೂರ್ತಿ ಪೂಜೆ ಮಾಡಿ ಸಂಭ್ರಮದಿಂದ ಸಂಕ್ರಾಂತಿ ಆಚರಿಸಿದರು.
ಕಡಕ್ ರೊಟ್ಟಿ, ಸಜ್ಜಿ ರೊಟ್ಟಿ, ರಾಗಿ ರೊಟ್ಟಿ, ಎಳ್ಳಹಚ್ಚಿದ ರೊಟ್ಟಿ, ಮಾದಲಿ, ಎಣ್ಣೆಕಾಯಿ ಪಲ್ಲೆ, ಕೆಂಪು ಚಟ್ನಿ, ಶೇಂಗಾ ಹೋಳಿಗೆ, ಮೊಸರಣ್ಣ, ಪುಳಿಯೋಗರೆ, ಮಸಾಲಾ ರೈಸ್ ಮೊಸರು ಸೇರಿದಂತೆ ವಿವಿಧ ಬಗೆಯ ಭಕ್ಷ್ಯಗಳನ್ನು ಸವಿದು ಸಂತಸ ಪಟ್ಟರು.
ಪ್ರತಿವರ್ಷವೂ ಸಂಭ್ರಮದಿಂದ ಸಂಕ್ರಾಂತಿ ಆಚರಿಸುವ ಜಾನಪದ ಸಂಶೋಧನಾ ಕೇಂದ್ರದ ಸದಸ್ಯರು ಈ ಬಾರಿಯೂ ವರ್ಷದ ಮೊದಲ ಹಬ್ಬ ಸಂಕ್ರಮಣವನ್ನು ಆಚರಿಸಿ ಖುಷಿಪಟ್ಟರು. ಇನ್ನು ಇದರಲ್ಲಿ ಬೆಂಗಳೂರಿನಿಂದ ಮದುವೆಯಾದ ಬಳಿಕ ಧಾರವಾಡಕ್ಕೆ ಬಂದ ಮಹಿಳೆಯರೂ ಇದ್ದರು. ಅವರಿಗೆಲ್ಲ ಈ ಸಂಕ್ರಾಂತಿ ಸಂಭ್ರಮ ಹೊಸದರಂತೆ ಕಂಡಿತ್ತು. ಅಚ್ಚರಿಯಿಂದ ನೋಡುತ್ತಲೇ ಸಂಭ್ರಮಿಸಿದರು.
ಕಳೆದ ಕೆಲ ವರ್ಷಗಳಿಂದ ಈ ರೀತಿಯಾಗಿ ಹಬ್ಬಗಳನ್ನು ಆಚರಣೆ ಮಾಡುತ್ತಿರುವ ಜಾನಪದ ಸಂಶೋಧನಾ ಕೇಂದ್ರದ ಮಹಿಳೆಯರು ಈ ಸಲವೂ ಸಂಭ್ರಮದಿಂದ ಆಚರಿಸಿದರು. ನಶಿಸುತ್ತಿರುವ ಕೆಲ ಸಂಪ್ರದಾಯಗಳನ್ನು ಉಳಿಸಿಕೊಂಡು ಹೋಗುತ್ತಿರುವುದು ಸಂತಸದ ವಿಷಯವಾಗಿದೆ.