
ಉತ್ತರ ಕರ್ನಾಟಕದಲ್ಲೇ ಅತಿ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸುವ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಈ ಹಿಂದೆ ಶೇ. 60ರಷ್ಟು ಕೊಲ್ಲಾಪುರದ ಪಿಒಪಿ ಮೂರ್ತಿಗಳೇ ರಾರಾಜಿಸುತ್ತಿದ್ದವು. ಆದರೆ ಈಗ ಪಿಒಪಿ ಮೂರ್ತಿಗಳಿಗೆ ಬ್ರೇಕ್ ಬಿದ್ದಿದ್ದು, ಪರಿಸರ ಸ್ನೇಹಿ ಮಣ್ಣಿನ ಗಣಪನ ಪ್ರತಿಷ್ಠಾಪನೆಗೆ ಜನ ಒಲವು ತೋರುತ್ತಿದ್ದಾರೆ. (Image Credit: tv9 kannada)
ಧಾರವಾಡದ ಕಲಾವಿದ ಮಂಜುನಾಥ್ ಹಿರೇಮಠ ಅವರು ಕಳೆದ ಮೂರೂವರೆ ದಶಕಗಳಿಂದ ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳನ್ನೇ ಪ್ರತಿಷ್ಠಾಪಿಸುವಂತೆ ಸತತ ಜಾಗೃತಿ ಅಭಿಯಾನ ನಡೆಸಿಕೊಂಡು ಬರುವ ಮೂಲಕ ಜನಮನ ಗೆದ್ದಿದ್ದಾರೆ. (Image Credit: tv9 kannada)
ಏಳೆಂಟು ವರ್ಷಗಳ ಹಿಂದೆ ಮಂಜುನಾಥ್ ಅವರು ಸಿದ್ಧಪಡಿಸುವ ‘ಬೀಜದ ಗಣಪತಿ’ಗೆ ಇದೀಗ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಜೇಡಿಮಣ್ಣಿನ ಮೂರ್ತಿಯ ಒಳಗೆ ವಿವಿಧ ಬಗೆಯ ಬೀಜಗಳನ್ನು ಇರಿಸಿ ವಿಗ್ರಹ ತಯಾರಿಸುವುದು ಇದರ ವಿಶೇಷತೆಯಾಗಿದೆ. (Image Credit: tv9 kannada)
ಈ ಗಣಪತಿಗಳಿಗೆ ಯಾವುದೇ ರಾಸಾಯನಿಕ ಬಳಸದೆ ಇದ್ದಿಲು, ಅಷ್ಟಗಂಧ ಹಾಗೂ ಅರಿಶಿಣದಂತಹ ನೈಸರ್ಗಿಕ ಬಣ್ಣಗಳನ್ನೇ ಲೇಪಿಸಲಾಗುತ್ತದೆ. ನೀರಿನಲ್ಲಿಟ್ಟ ಕೇವಲ ಒಂದೇ ಗಂಟೆಯಲ್ಲಿ ಈ ಮೂರ್ತಿಗಳು ಸಂಪೂರ್ಣವಾಗಿ ಕರಗಿಹೋಗುತ್ತವೆ. (Image Credit: tv9 kannada)
ಫಲವತ್ತಾದ ಜೇಡಿಮಣ್ಣಿನಲ್ಲಿ ತಯಾರಾಗುವ ಈ ಮೂರ್ತಿಗಳ ಒಳಗಿರುವ ಹಾಗೂ ಅಲಂಕಾರಕ್ಕೆ ಬಳಸಿದ ಬೀಜಗಳು ಐದಾರು ದಿನಗಳಲ್ಲಿ ಮೊಳಕೆಯೊಡೆಯುತ್ತವೆ. ಹಬ್ಬದ 11ನೇ ದಿನಕ್ಕೆ ಸಣ್ಣ ಸಸಿಗಳಾಗಿ ಬೆಳೆಯುವ ಈ ಮಣ್ಣನ್ನು ಹಿತ್ತಲು ಅಥವಾ ಹೊಲಗಳಲ್ಲಿ ಹಾಕಿದರೆ ಗಿಡಗಳು ಬೆಳೆಯುತ್ತವೆ. (Image Credit: tv9 kannada)
ಕೆರೆ-ಬಾವಿಗಳಲ್ಲಿ ವಿಸರ್ಜಿಸಿ ನೀರು ಕಲುಷಿತಗೊಳಿಸುವ ಬದಲು, ಮನೆಯಲ್ಲೇ ವಿಸರ್ಜಿಸಿ ಗಿಡ ಬೆಳೆಸುವ ಈ ಅಭಿಯಾನ ಸಂಪೂರ್ಣ ಯಶಸ್ಸು ಕಂಡಿದೆ. ವಿಸರ್ಜನೆಯ ನಂತರ ತಮ್ಮ ಮನೆಗಳಲ್ಲಿ ಹೆಮ್ಮರವಾಗಿ ಬೆಳೆದಿರುವ ಗಿಡಗಳ ಚಿತ್ರಗಳನ್ನು ಗ್ರಾಹಕರು ಹಂಚಿಕೊಳ್ಳುತ್ತಿರುವುದು ಕಲಾವಿದರ ಕುಟುಂಬಕ್ಕೆ ಅಪಾರ ಸಂತಸ ತಂದಿದೆ. (Image Credit: tv9 kannada)