
69ನೇ ಫಿಲಂಫೇರ್ ದಕ್ಷಿಣ 2024 ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ 3 ರಂದು ಹೈದರಾಬಾದ್ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳ ಅತ್ಯುತ್ತಮ ಸಿನಿಮಾಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯ್ತು.

ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗಗಳ ದೊಡ್ಡ ಸ್ಟಾರ್ ನಟರು, ನಟಿಯರು ಹೊಸ ನಟ-ನಟಿಯರು, ತಂತ್ರಜ್ಞರು, ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪರಭಾಷೆ ನಟರಾದ ಮಮ್ಮುಟಿ, ತಮಿಳಿನ ಚಿಯಾನ್ ವಿಕ್ರಂ, ಕೀರ್ತಿ ಸುರೇಶ್, ನಟ ಸಿದ್ಧಾರ್ಥ್, ಬ್ರಹ್ಮಾನಂದಂ, ಅಲ್ಲು ಸಿರೀಶ್, ಆನಂದ್ ದೇವರಕೊಂಡ, ನವೀನ್ ಪೋಲಿಶೆಟ್ಟಿ, ವೆಟ್ರಿಮಾರನ್ ಇನ್ನೂ ಹಲವರು ಭಾಗಿಯಾಗಿದ್ದರು.

ಕನ್ನಡದ ‘ಸಪ್ತ ಸಾಗರದಾಚೆ ಎಲ್ಲೋ’, ‘ಟಗರು ಪಲ್ಯ’, ‘ಪಿಂಕಿ ಎಲ್ಲಿ’, ‘ಡೇರ್ಡೆವಿಲ್ ಮುಸ್ತಫ’ ಸೇರಿದಂತೆ ಹಲವು ಸಿನಿಮಾಗಳು ಪ್ರಶಸ್ತಿಗೆ ಭಾಜನವಾದವು. ನಟ-ನಟಿಯರು ಪ್ರಶಸ್ತಿ ಸ್ವೀಕರಿಸಿದರು.

ಕನ್ನಡದ ಕೆಲವು ಹೊಸ ಪ್ರತಿಭೆಗಳು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಶಸ್ತಿ ಪಡೆದು ಸಂಭ್ರಮಿಸಿದರು. ಅತ್ಯುತ್ತಮ ನಟ ಪ್ರಶಸ್ತಿ ಪಡೆದ ರಕ್ಷಿತ್ ಶೆಟ್ಟಿ ಕನ್ನಡದಲ್ಲಿಯೇ ಮಾತನಾಡಿದರು.

ಇದು 69ನೇ ಫಿಲಂಫೇರ್ ಆಗಿದ್ದು, ಕೆಲವು ದಿನಗಳ ಹಿಂದೆ ಹಿಂದಿ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಈಗ ದಕ್ಷಿಣ ಭಾರತದ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಯ್ತು.

‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾ ತುಸು ಹೆಚ್ಚು ಪ್ರಶಸ್ತಿ ಪಡೆಯಿತು. ರಕ್ಷಿತ್, ಹೇಮಂತ್, ರುಕ್ಮಿಣಿ ವಸಂತ್ ಭಾಗಿಯಾಗಿದ್ದರು. ‘ಟಗರು ಪಲ್ಯ’ ಸಿನಿಮಾಕ್ಕೂ ಕೆಲವು ಪ್ರಶಸ್ತಿಗಳು ದೊರೆತವು.