- Kannada News Photo gallery Floriculture exhibition in University of Horticultural Sciences in Bagalkot
Floriculture exhibition: ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಅರಳಿದ ಪುಷ್ಪಕೃಷಿ, ಬಗೆಬಗೆಯ ಪುಷ್ಪ ಚಿತ್ತಾರ ಕಣ್ತುಂಬಿಕೊಳ್ಳಿ
ಭೂಮಿಗೆ ಹೂವಿನ ಅಲಂಕಾರ. ಭೂಮಿ ತಾಯಿಗೆ ಬಣ್ಣ ಬಣ್ಣದ ರಂಗು ನೀಡಿ ಕಳೆ ನೀಡಿದ ವಿವಿಧ ಬಗೆಯ ಹೂವುಗಳು. ನೋಡಿದ ತಕ್ಷಣ ಆಹಾ ಎಂಥ ಚೆಂದ ಅನ್ನೋ ರೀತಿಯಲ್ಲಿ ಇರುವ ಹೂ ಗೊಂಚಲು. ಹೌದು ಇದು ಹೀಗೆ ಭೂಮಿಯ ಅಂದವನ್ನು ಹೆಚ್ಚಿಸಿರುವ ಬಗೆ ಬಗೆ ಹೂವುಗಳನ್ನು ಬೆಳೆದಿರುವುದು ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣದಲ್ಲಿ.
Updated on: Dec 31, 2022 | 3:11 PM

ಹೂ ಚೆಲುವೆಲ್ಲಾ ನಂದೆಂದಿತು ಅಂತಾರೆ. ಹೂ ಅಂದರೆ ಅದು ಸೌಂದರ್ಯದ ಗಣಿ. ಎಲ್ಲ ಶುಭ ಕಾರ್ಯಕ್ಕೂ ಹೂವು ಬೇಕು. ಕೆಲ ದುಃಖಕರ ಪ್ರಸಂಗಗಳಲ್ಲೂ ಹೂ ಬೇಕೇ ಬೇಕು. ಹೂ ಕೇವಲ ಸೌಂದರ್ಯಕ್ಕೆ ಮೀಸಲಲ್ಲ. ಹೂ ಆರ್ಥಿಕ ಅಭಿವೃದ್ಧಿಗೂ ಪ್ರಮುಖ ದಾರಿ ಅಂತಾ ಹೇಳಬಹುದು. ಇಲ್ಲಿ ಆ ಒಂದು ಸ್ಥಳದಲ್ಲಿ ವಿಶ್ವವಿದ್ಯಾಲಯದಿಂದ ಹೂ ಬೆಳೆಸಿದ್ದು, ಅಲಂಕಾರ ಹೆಚ್ಚಿಸಿದೆ. ಜೊತೆಗೆ ರೈತರ ಆದಾಯಕ್ಕೆ ಆಸರೆಯಾಗಿದೆ.

ಭೂಮಿಗೆ ಹೂವಿನ ಅಲಂಕಾರ. ಭೂಮಿ ತಾಯಿಗೆ ಬಣ್ಣ ಬಣ್ಣದ ರಂಗು ನೀಡಿ ಕಳೆ ನೀಡಿದ ವಿವಿಧ ಬಗೆಯ ಹೂವುಗಳು. ನೋಡಿದ ತಕ್ಷಣ ಆಹಾ ಎಂಥ ಚೆಂದ ಅನ್ನೋ ರೀತಿಯಲ್ಲಿ ಇರುವ ಹೂ ಗೊಂಚಲು. ಹೌದು ಇದು ಹೀಗೆ ಭೂಮಿಯ ಅಂದವನ್ನು ಹೆಚ್ಚಿಸಿರುವ ಬಗೆ ಬಗೆ ಹೂವುಗಳನ್ನು ಬೆಳೆದಿರುವುದು ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣದಲ್ಲಿ.

ಬಾಗಲಕೋಟೆ ನವನಗರದಲ್ಲಿರುವ ತೋಟಗಾರಿಕೆ ವಿಶ್ವವಿದ್ಯಾಲಯದ ಪುಷ್ಪಕೃಷಿ ಹಾಗೂ ಉದ್ಯಾನ ವಿನ್ಯಾಸ ವಿಭಾಗದ ಮುಂಭಾಗದ ದೃಶ್ಯಗಳಿವು. ಬಾಗಲಕೋಟೆ ತೋಟಗಾರಿಕೆ ವಿವಿಯಿಂದ ತೋಟಗಾರಿಕೆ ಮೇಳ ನಡೆದಿದ್ದು, ವಿವಿಯ ( University of Horticultural Sciences, Bagalkot) ಮುಂಭಾಗ ಬೆಳೆದ ಹೂಗಳು ಎಲ್ಲರನ್ನೂ ಆಕರ್ಷಿಸುತ್ತಿವೆ.

ತೋಟಗಾರಿಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಹೂ ಬೆಳೆದಿದ್ದು, ಹೂಗಳು ನೋಡಿದವ್ರ ಕಣ್ಮನ ಸೆಳೆಯುವ ರೀತಿಯಲ್ಲಿ ಬೆಳೆದಿವೆ. ತೋಟಗಾರಿಕೆ ಮೇಳಕ್ಕೆ ಬಂದ ಮಹಿಳೆಯರು, ವಿದ್ಯಾರ್ಥಿಗಳು ಅಷ್ಟೆ ಯಾಕೆ ಯುವಜನತೆಯೂ ಹೂಗಳಿಗೆ ಮಾರು ಹೋಗಿದ್ದಾರೆ. ಹೂಗಳ ಸೌಂದರ್ಯ ಕಣ್ತುಂಬಿಕೊಳ್ಳುತ್ತಿದ್ದಾರೆ. ಹೂಗಳ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮ ಪಡುತ್ತಿದ್ದಾರೆ. ಇದು ಕೇವಲ ಸೌಂದರ್ಯಕ್ಕೆ ಸೀಮಿತವಲ್ಲ, ಹೂ ಕೃಷಿ ರೈತರಿಗೆ ವರದಾನವಾಗಿದೆ. ರೈತರು ಇಂತಹ ಹೂ ಕೃಷಿ ಮಾಡಿ ಅಭಿವೃದ್ಧಿ ಸಾಧಿಸಬಹುದು ಅಂತರೆ ಜನರು. (ವರದಿ: ರವಿ ಮೂಕಿ, ಟಿ ವಿ 9, ಬಾಗಲಕೋಟೆ)

ವಿವಿಯ ವಿದ್ಯಾರ್ಥಿಗಳ ಅಧ್ಯಯನ, ಅಭ್ಯಾಸಕ್ಕಾಗಿ,ರೈತರಿಗೆ ಪ್ರಾತ್ಯಕ್ಷಿಕೆ ಮಾಹಿತಿ ನೀಡುವುದರ ಸಮ್ಮುಖದಲ್ಲಿ ಇವುಗಳನ್ನು ಬೆಳೆಸಲಾಗಿದೆ. ವಿವಿ ಆವರಣದಲ್ಲಿ ಪುಷ್ಪ ಕೃಷಿ ವಿಭಾಗದಿಂದ ಚೆಂಡು ಹೂ, ಗ್ಲಾಡಿಯೋಲಾ, ಕೆಲಾರ್ಡಿಯಾ, ರುದ್ರಾಕ್ಷಿ ಹೂ, ಸ್ಪೈಡರ್ ಲಿಲಿ, ಕನಕಾಂಬರ, ಸುಗಂಧರಾಜ, ಪೆಟೊನಿಯಾ, ಸಾಲ್ವಿಯಾ, ಸಲೊಸಿಯಾ, ಡಯಾಂತಸ್, ಜಿನಿಯಾ, ಆರ್ನಾಮೆಂಟ್ ಸನ್ ಪ್ಲವರ್, ಗೌರಿ ಹೂ ಜೊತೆಗೆ ಉದ್ಯಾನವನ, ಅಲಂಕಾರಿಕ ಹೂ ಸೇರಿದಂತೆ ಐವತ್ತು ಬಗೆಯ ಹೂಗಳನ್ನು ಬೆಳೆಸಲಾಗಿದೆ. 50 ಬಗೆಯ ಹೂವಿನ ಪ್ರಭೇದದ ಹೂಗಳು ನೋಡುಗರನ್ನು ಆಕರ್ಷಣೆ ಮಾಡುತ್ತವೆ. ಈ ಹೂಗಳು ಕೇವಲ ವಿವಿ ಅಂದಕ್ಕೆ ಮಾತ್ರ ಸೀಮಿತವಲ್ಲ.ಇವುಗಳನ್ನು ಹೇಗೆ ಬೆಳೆಸಬೇಕು, ಯಾವ ಮಣ್ಣಲ್ಲಿ ಯಾವ ಹೂ ಬೆಳೆಯಬೇಕು, ಯಾವ ರೀತಿ ಹೂ ಕೃಷಿ ಮಾಡಬೇಕು ಎಂದೆಲ್ಲ ತೋಟಗಾರಿಕೆ ವಿವಿಯಲ್ಲಿ ರೈತರಿಗೆ ಆಗಲಿ ಬೇರೆ ಯಾರಿಗೆ ಆಗಲಿ ಮಾಹಿತಿ ನೀಡಲಾಗುತ್ತದೆ. ಇದರ ಸದುಪಯೋಗವನ್ನು ರೈತರು ಪಡೆಯಬಹುದಾಗಿದೆ ಅಂತಾರೆ ವಿವಿ ಸಿಬ್ಬಂದಿ.

ಒಟ್ಟಿನಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಒಣಭೂಮಿ ಹೆಚ್ಚಾಗಿದೆ. ನೀರಿನ ಅಭಾವ ಹೆಚ್ಚಾಗಿರುವ ಉತ್ತರ ಕರ್ನಾಟಕ ಭಾಗದ ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ತೋಟಗಾರಿಕೆ ವಿವಿ ಕೈಗೊಂಡಿರುವ ಪುಷ್ಪಕೃಷಿ ಮಾದರಿಯಾಗಿದೆ. ತೋಟಗಾರಿಕೆ ಮೇಳದ ಕೇಂದ್ರ ಬಿಂದುವಾಗಿ ಎಲ್ಲರ ಗಮನ ಸೆಳೆಯುತ್ತಿದೆ.



















