
ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ಮನುಷ್ಯರ ಜೊತೆಗೆ ಪ್ರಾಣಿಗಳು ಸಹ ತತ್ತರಿಸಿವೆ. ಹೀಗಾಗಿ ಮೃಗಾಲಯದ ವನ್ಯಜೀವಿಗಳಿಗೆ ವಿಶೇಷ ಆರೈಕೆ ಮಾಡಲಾಗುತ್ತಿದೆ. ಇತ್ತ ಗದಗನ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದಲ್ಲಿರುವ ಪ್ರಾಣಿಗಳ ರಕ್ಷಣೆಗೆ ಹೆಚ್ಚುವರಿ ಕಾಳಜಿ ವಹಿಸಲಾಗುತ್ತಿದೆ. ಅದಕ್ಕಾಗಿ ವಿಶೇಷ ಮುನ್ನೆಚ್ಚರಿಕೆ ಹಾಗೂ ಆರೈಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಗದಗನ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದಲ್ಲಿರುವ ವನ್ಯಜೀವಿಗಳನ್ನು ಬಿಸಿಲಿನ ತಾಪದಿಂದ ರಕ್ಷಿಸಲು ವಿಶೇಷ ಆರೈಕೆ ಮಾಡಲಾಗುತ್ತಿದೆ. ವೈದ್ಯರ ಸಲಹೆಯಂತೆ ಪ್ರಾಣಿಗಳಿಗೆ ಐಸ್ ಮಿಶ್ರಿತ ನೀರು, ತಂಪಾದ ಆಹಾರ ಮತ್ತು ಗ್ಲುಕೋಸ್ ನೀಡಲಾಗುತ್ತಿದ್ದು, ಸ್ಪ್ರಿಂಕ್ಲರ್ ಮೂಲಕ ತಂಪಾದ ವಾತಾವರಣ ಕಲ್ಪಿಸಲಾಗಿದೆ.

ಹುಲಿ, ಸಿಂಹ, ಚಿರತೆ, ಕರಡಿ ಸೇರಿದಂತೆ ವಿವಿಧ ಪ್ರಭೇದದ ಪ್ರಾಣಿಗಳ ಆರೋಗ್ಯದ ಮೇಲೆ ಹಗಲು-ರಾತ್ರಿ ಕಣ್ಗಾವಲು ಇರಿಸಲಾಗಿದ್ದು, ಸಿಬ್ಬಂದಿ ವಿಶೇಷ ನಿಗಾವಹಿಸಿದ್ದಾರೆ. ತಜ್ಞರ ಸಲಹೆ ಮೇರೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

ಇನ್ನು ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದು, ಪ್ರಾಣಿಗಳ ರಕ್ಷಣೆಗೆ ಕೈಗೊಂಡಿರುವ ವ್ಯವಸ್ಥೆಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಾಣಿ-ಪಕ್ಷಿಗಳ ಕಲರವ ಕಂಡು ಫಿದಾ ಆಗಿದ್ದಾರೆ.

ಬಿಸಿಲು ಹೆಚ್ಚಾದರೂ ವನ್ಯಜೀವಿಗಳ ರಕ್ಷಣೆಗೆ ಅರಣ್ಯ ಇಲಾಖೆ ಕೈಗೊಂಡಿರುವ ಕ್ರಮಗಳು ಮಾನವೀಯತೆಗೂ, ಪರಿಸರ ಸಂರಕ್ಷಣೆಗೂ ಉತ್ತಮ ಉದಾಹರಣೆಯಾಗಿದೆ.

ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದ ಅಧಿಕಾರಿಗಳು ಮತ್ತು ಸಿಬಂದಿ ಮಾಡುತ್ತಿರುವ ಈ ಒಳ್ಳೆಯ ಕೆಲಸಕ್ಕೆ ಪ್ರಾಣಿ ಪ್ರಿಯರು ಭೇಷ್ ಎಂದಿದ್ದಾರೆ.