ಹಾಸನಾಂಬೆ ದರ್ಶನಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಇದುವರೆಗೆ 16 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ಈ ಬಗ್ಗೆ ಟಿವಿ9 ಜೊತೆಗೆ ಹಾಸನಾಂಬೆ ದೇವಾಲಯದ ಆಡಳಿತ ಅಧಿಕಾರಿ ಮಾರುತಿ ಅವರು ಮಾತನಾಡಿದ್ದು, ಇದುವರೆಗೆ 16 ಲಕ್ಷ ಭಕ್ತರು ಭೇಟಿ ನೀಡಿದ್ದು, ಟಿಕೆಟ್, ಲಡ್ಡು ಪ್ರಸಾದ ಮಾರಾಟದಿಂದ 8 ಕೋಟಿ ರೂ. ಆದಾಯ ಬಂದಿದೆ ಎಂದಿದ್ದಾರೆ.
ಈ ವರ್ಷ ಜಿಲ್ಲಾಡಳಿತ ಕೈಗೊಂಡ ಕ್ರಮಗಳಿಂದ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಪಾಸ್ಗಳನ್ನು ರದ್ದು ಮಾಡಿದ್ರೂ ಕೂಡ ಭಕ್ತರ ಸಂಖ್ಯೆ ಕಡಿಮೆ ಆಗಿಲ್ಲ. ನಿರೀಕ್ಷೆಗೂ ಮೀರಿ ದೇಶ-ವಿದೇಶದಿಂದಲೂ ಭಕ್ತರು ಬಂದಿದ್ದಾರೆ ಎಂದರು.
ಇಂದು 5 ಗಂಟೆವರೆಗೆ ಹಾಸನಾಂಬೆ ದರ್ಶನ ಇರಲಿದೆ. ನಂತರ ಶ್ರೀ ಸಿದ್ದೇಶ್ವರ ಸ್ವಾಮಿ ರಥೋತ್ಸವ ಆರಂಭ ಆಗಲಿದೆ. ನಂತರ ರಾತ್ರಿ 11 ರಿಂದ ಮತ್ತೆ ಹಾಸನಾಂಬೆ ದರ್ಶನ ಆರಂಭವಾಗಲಿದೆ.
ನಾಳೆ ಬೆಳಿಗ್ಗೆ 6 ಗಂಟೆವರೆಗೆ ದರ್ಶನ ಇರಲಿದ್ದು, ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ಇಲ್ಲ. ನಾಳೆ 12 ಗಂಟೆಗೆ ಗರ್ಭಗುಡಿ ಬಾಗಿಲು ಮುಚ್ಚಲಿದೆ ಎಂದು ಒಂಬತ್ತು ದಿನಗಳ ಹಾಸನಾಂಬೆ ದರ್ಶನೋತ್ಸವದ ಬಗ್ಗೆ ಅಧಿಕಾರಿ ಮಾರುತಿ ಮಾಹಿತಿ ನೀಡಿದ್ದಾರೆ.