ಹಾವೇರಿ: ಭರ್ಜರಿಯಾಗಿ ನಡೆಯುತ್ತಿರುವ ಕರ್ನಾಟಕ ಕುಸ್ತಿ ಹಬ್ಬ, ಇಲ್ಲಿದೆ ನೋಡಿ ಅದರ ಝಲಕ್
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸಿಹೋಗುತ್ತಿದೆ. ಇದೀಗ ಸರ್ಕಾರ ಗ್ರಾಮೀಣ ಹಾಗೂ ಜನಪದ ಕ್ರೀಡೆಯಾದ ಕುಸ್ತಿಯನ್ನ ಉಳಿಸಿ, ಬೆಳಸಲು ಕರ್ನಾಟಕ ಕುಸ್ತಿ ಹಬ್ಬವನ್ನ ಆಯೋಜನೆ ಮಾಡಲಾಗಿದ್ದು, ಮುಖ್ಯಮಂತ್ರಿ ತವರು ಕ್ಷೇತ್ರ ಶಿಗ್ಗಾಂವಿಯಲ್ಲಿ ಕರ್ನಾಟಕ ಕುಸ್ತಿ ಹಬ್ಬ ಭರ್ಜರಿಯಾಗಿ ನಡೆಯುತ್ತಿದೆ.
Updated on: Mar 03, 2023 | 8:51 AM

ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ಹೊರವಲಯದಲ್ಲಿ ಕ್ರೀಡಾ ಇಲಾಖೆ ಹಾಗೂ ಯುವಜನ ಇಲಾಖೆಯಿಂದ ರಾಜ್ಯದಲ್ಲಿ ಮೂರನೇ ಬಾರಿ ಕರ್ನಾಟಕ ಕುಸ್ತಿ ಹಬ್ಬ ಆಯೋಜನೆ ಮಾಡಲಾಗಿದೆ.

ರಾಜ್ಯದ ನಾನಾ ಭಾಗಗಳಲ್ಲಿಂದ ಹೆಸರು ನೊಂದಣಿ ಕಾರ್ಯ ನಡೆದಿದೆ. ರಾಜ್ಯ ಹಾಗೂ ಹೊರರಾಜ್ಯದ 850 ಕ್ಕೂ ಅಧಿಕ ಕುಸ್ತಿಪಟುಗಳು ಆಗಮಿಸಿದ್ದಾರೆ.

ಅಧಿಕೃತವಾಗಿ ಇವತ್ತಿನಿಂದ ನಾಲ್ಕು ದಿನಗಳ ಕಾಲ ಹೊನಲು ಬೆಳಕಿನ ಕುಸ್ತಿ ಪ್ರಾರಂಭವಾಗಿದೆ. ಜಿಲ್ಲಾಧಿಕಾರಿ ರಘುನಂದಮೂರ್ತಿ ಕರ್ನಾಟಕ ಕುಸ್ತಿ ಹಬ್ಬಕ್ಕೆ ಚಾಲನೆ ನೀಡಿದ್ದಾರೆ. 14 ವರ್ಷ ಮೇಲ್ಪಟ್ಟ ವಯಸ್ಸಿನ ಮಕ್ಕಳಿಂದ ಹಿಡಿದು ಪುರುಷರು, ರಾಜ್ಯ, ದೇಶ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕುಸ್ತಿಪಟು ಕುಸ್ತಿ ಹಬ್ಬಕ್ಕೆ ಆಗಮಿಸಲಿದ್ದಾರೆ.

ಇನ್ನು ಶಿಗ್ಗಾಂವಿ ಪಟ್ಟಣಕ್ಕೆ ಸಾವಿರಾರು ಕುಸ್ತಿಪಟುಗಳು ಆಗಮಿಸಿದ್ದಾರೆ. 14 ವರ್ಷದ ಮೇಲ್ಪಟ್ಟ ವಯಸ್ಸಿನ 34 ಕೆಜೆ ತೂಕದ ಬಾಲಕರು, ಬಾಲಕೀಯರಿಂದ ಹಿಡಿದು 100 ಕೆಜಿ ತೂಕದ ಪುರುಷರು ಕುಸ್ತಿಯಲ್ಲಿ ಭಾಗವಹಿಸುತ್ತಿದ್ದಾರೆ. ಬಾಲಕಿಯರು 29 ಕೆಜಿ ತೂಕದಿಂದ ಹಿಡಿದು 78 ಕೆಜಿ ತೂಕದ ಕುಸ್ತಿಪಟುಗಳು ಕರ್ನಾಟಕ ಕುಸ್ತಿಯಲ್ಲಿ ಭಾಗವಹಿಸುತ್ತಿದ್ದಾರೆ.

ಬೆಳಗ್ಗಿನಿಂದಲೇ ಕುಸ್ತಿ ಭರ್ಜರಿ ಪ್ರಾರಂಭವಾಗಿದ್ದು, ಸರ್ಕಾರ ಕುಸ್ತಿ ಆಯೋಜನೆ ಮಾಡಿದ್ದು ಸಂತಸವಾಗಿದೆ. ಅದರೆ ಗ್ರಾಮೀಣ ಪ್ರದೇಶದಲ್ಲಿ ಇರುವ ಗರಡಿಮನೆಗಳನ್ನ ಸಂರಕ್ಷಣೆ ಮಾಡಬೇಕು. ನೂತನ ಗರಡಿಮನೆ ನಿರ್ಮಾಣ ಮಾಡಬೇಕು. ಕುಸ್ತಿಪಟುಗಳಿಗೆ ಸರ್ಕಾರದಿಂದ ಹೆಚ್ಚು ಪೋತ್ಸಾಹ ಸಿಗಬೇಕು ಅಂತಾರೆ ಕುಸ್ತಿಪಟುಗಳು.

ಒಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕ್ಷೇತ್ರದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಭರ್ಜರಿಯಾಗಿ ನಡೆಯುತ್ತಿದೆ. ರಾಜ್ಯದ ಹಾಗೂ ಹೊರ ರಾಜ್ಯದ ಸಾವಿರಾರು ಕುಸ್ತಿಪಟುಗಳು ಹಾಗೂ ಕುಸ್ತಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಕರ್ನಾಟಕ ಕುಸ್ತಿ ಹಬ್ಬವನ್ನ ನೋಡಿ ಸಖತ್ ಮನರಂಜನೆ ಪಡೆಯಬಹುದಾಗಿದೆ.




