
ಬೃಹತ್ತಾದ ಕಬ್ಬಡಿ ಗ್ರೌಂಡ್, ಉತ್ತಮ ಆಟ ಪ್ರದರ್ಶನ ಮಾಡುತ್ತಿರುವ ಆಟಗಾರರು. ಸಿಳ್ಳೆ, ಚಪ್ಪಾಳೆಯ ಮೂಲಕ ಆಟಗಾರರನ್ನು ಪ್ರೋತ್ಸಾಹಿಸುತ್ತಿರುವ ಜನ. ಈ ದೃಶ್ಯ ಕಂಡು ಬಂದಿದ್ದು ನಾಡ ದೊರೆ ಸಿಎಂ ಬೊಮ್ಮಾಯಿ ತವರು ಕ್ಷೇತ್ರದಲ್ಲಿ.

ಹೌದು ಉತ್ತಮ ಕ್ರೀಡಾಪಟುಗಳನ್ನ ಮುನ್ನೆಲೆಗೆ ತರುವ ಉದ್ದೇಶದಿಂದ ರಾಜ್ಯ ಸರ್ಕಾರದ ವತಿಯಿಂದ ಸವಣೂರು ತಾಲೂಕಿನಲ್ಲಿ ರಾಷ್ಟ್ರ ಮಟ್ಟದ ಕಬ್ಬಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.

ಇನ್ನು ಶುಕ್ರವಾರದಿಂದ ಆರಂಭವಾಗಿರುವ ಪಂದ್ಯಾವಳಿಯಲ್ಲಿ ಕರ್ನಾಟಕ ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳಿಂದ 37 ಕ್ಕೂ ಅಧಿಕ ಕಬ್ಬಡಿ ತಂಡಗಳು ಭಾಗವಹಿಸಿದ್ದು, ಇದರಲ್ಲಿ 15 ಬಾಲಕಿಯರ ತಂಡಗಳಿವೆ.

ಇನ್ನು ಎರಡನೇ ದಿನವಾದ ನಿನ್ನೆ(ಮಾ.24) ಕಬ್ಬಡಿ ಪಂದ್ಯಾವಳಿ ವಿಕ್ಷಿಸಲು ಆಗಮಿಸಿದ್ದ ಸಿಎಂ ಬೊಮ್ಮಾಯಿ ಆಟಗಾರರ ಉತ್ಸಾಹ ಕಂಡು ಸಂತಸಗೊಂಡರು.

ಈ ದೇಶದ ಗ್ರಾಮೀಣ ಕ್ರಿಡೆ ಉಳಿಯಬೇಕು. ನಮ್ಮ ರಾಜ್ಯದ ಯುವಕರು ಒಲಂಪಿಕ್ಸ್ನಲ್ಲಿ ಹೆಚ್ಚು ಚಿನ್ನದ ಪದಕ ಗೆಲ್ಲಬೇಕೆಂಬ ಸದುದ್ದೇಶದಿಂದ, ನಮ್ಮ ಸರ್ಕಾರ 75 ಜನ ಕ್ರಿಡಾಪಟುಗಳನ್ನು ದತ್ತು ಪಡೆಯುತ್ತಿದೆ.

ಜೊತೆಗೆ ತಲಾ 8 ಲಕ್ಷ ರೂಪಾಯಿ ಖರ್ಚು ಮಾಡಲು ತಿರ್ಮಾನಿಸಿದೆ. ನಮ್ಮ ರಾಜ್ಯದ ಯುವಕರು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕು ಎಂಬುವುದು ನಮ್ಮ ಸರ್ಕಾರದ ಆಶಯ ಎಂದು ತಿಳಿಸಿದರು.

ಒಟ್ಟಾರೆಯಾಗಿ ರಾಜ್ಯದಲ್ಲಿ ಚುನಾವಣೆ ಸಮಿಪಿಸುತ್ತಿದ್ದಂತೆ ಯುವಕರನ್ನು ಸೆಳೆಯಲು ಕ್ರಿಡಾ ಕೂಟಗಳನ್ನು ಆಯೋಜಿಸಿ ನೀಡುತ್ತಿರುವ ಆಶ್ವಾಸನೆಗಳು ಆದಷ್ಟು ಬೇಗ ಕಾರ್ಯರೂಪಕ್ಕೆ ತಂದು, ನಮ್ಮ ರಾಜ್ಯದ ಯುವಕರು ಹೆಚ್ಚು ಚಿನ್ನದ ಪದಕ ಗೆಲ್ಲುವಂತಾಗಲಿ ಎಂಬುವುದಷ್ಟೆ ನಮ್ಮ ಆಶಯ.