
ಆಗಸ್ಟ್ 15 ರಂದು ದೇಶದೆಲ್ಲೆಡೆ ಸ್ವಾತಂತ್ರ ದಿನಾಚರಣೆಯನ್ನ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಇಂದು ದೇಶ್ಯಾದ್ಯಂತ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಈ ಸುಸಂದರ್ಭದಲ್ಲಿ ಚಾಮರಾಜನಗರದ ಓರ್ವ ಗಾರೆ ಕೆಲಸಗಾರ ತನ್ನ ಮನೆಯಲ್ಲಿ 7 ಅಡಿ ಎತ್ತರದ ಭಾರತದ ಭೂಪಟ ಹಾಗೂ ದ್ವಜ ನಿರ್ಮಿಸುವ ಮೂಲಕ ತನ್ನ ದೇಶ ಭಕ್ತಿ ಮೆರೆದಿದ್ದಾರೆ.

ಚಾಮರಾಜನಗರದ ಕೆಲ್ಲಂಬಳ್ಳಿ ಗ್ರಾಮದಲ್ಲಿ ಗಾರೆ ಕೆಲಸ ಮಾಡುವ ರವಿ ಎಂಬುವರು ಗಾರೆ ಕೆಲಸ ಮಾಡಿ ಬಂದ ಚೂರು ಪಾರು ಹಣದಿಂದ ಮನೆ ಕಟ್ಟಿಕೊಂಡಿದ್ದಾರೆ. ತಮ್ಮ ಮನೆಯ ಗೋಡೆಯ ಮೇಲೆ 7 ಅಡಿ ಎತ್ತರದ ಭಾರತದ ಭೂಪಟವನ್ನು ಕಾಂಕ್ರೀಟ್ನಿಂದ ನಿರ್ಮಾಣ ಮಾಡಿದ್ದಾರೆ. ಪಕ್ಕದಲ್ಲೇ ರಾಷ್ಟ್ರಧ್ವಜವನ್ನು ನಿರ್ಮಾಣ ಮಾಡಿ ದೇಶ ಭಕ್ತಿ ಮೆರೆದಿದ್ದಾರೆ.

ಕೇವಲ ಭಾರತ ದೇಶದ ಧ್ವಜ ಅಷ್ಟೇ ಅಲ್ಲದೆ ಕಾಡುಗಳ್ಳ ವೀರಪ್ಪನ್ ಕೈಯಲ್ಲಿ ಪ್ರಾಣ ತ್ಯಾಗ ಮಾಡಿದ ನಿಷ್ಠಾವಂತ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಪ್ರತಿಮೆ ನಿರ್ಮಾಣ ಮಾಡುವ ಕನಸನ್ನು ಕಂಡಿದ್ದಾರೆ. ಯಾರಾದರು ಹಣದ ಸಹಾಯ ಮಾಡಿದರೆ, ಅನುಮತಿ ಕೊಡಿಸಿದ್ರೆ ಖಂಡಿತ ಆ ವ್ಯಕ್ತಿಗಳ ಪ್ರತಿಮೆಯನ್ನ ನಿರ್ಮಾಣ ಮಾಡಿ ರಾಮಾಪುರ ಪೊಲೀಸ್ ಠಾಣೆಯ ಮುಂದೆ ಇಡುವುದಾಗಿ ಹೆಬ್ಬಯಕೆಯನ್ನು ತೋರಿದ್ದಾರೆ. ಮೂಲತಃ ಕೆಲ್ಲಂಬಳ್ಳಿ ನಿವಾಸಿಯಾದ ರವಿ ಅವರಿಗೆ ದೇಶ ಹಾಗೂ ದೇಶ ಕಾಯುವ ಯೋಧರು ತುಂಬಾ ಅಭಿಮಾನ. ದೇಶದ ಸಲುವಾಗಿ ಏನಾದರು ಮಾಡಬೇಕೆಂಬ ಬಯಕೆ ಇದೆ.

ಕೇವಲ ಆಗಸ್ಟ್ 15 ರಂದು ಮಾತ್ರ ಕೈಯಲ್ಲಿ ಬಾವುಟ ಹಿಡಿದು ಓಡಾಡುವ ಜನರ ನಡುವೆ ವರ್ಷವಿಡಿ ದೇವರಿಗೆ ಪೂಜೆ ಮಾಡುವಂತೆ ದಿನ ನಿತ್ಯ ಭಾರತದ ಧ್ವಜ ಹಾಗೂ ಭೂಪಟಕ್ಕೆ ಪೂಜೆ ಸಲ್ಲಿಸುವ ಇಂತಹ ದೇಶ ಪ್ರೇಮಿಗೆ ಒಂದು ಸಲ್ಯೂಟ್ ಹೊಡಿಯಲೇ ಬೇಕು.
Published On - 10:24 pm, Fri, 15 August 25