
ಇತ್ತೀಚೆಗೆ ರಾಜ್ಯಕ್ಕೆ ಎಂಟ್ರಿಕೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ ಇವತ್ತು ಮತ್ತೆ ಭೇಟಿ ನೀಡಿದ್ದರು. ಚಿಕ್ಕಬಳ್ಳಾಪುರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ಪ್ರಚಾರ ಮಾಡಿದರು. ಬಳಿಕ ಬೆಂಗಳೂರಿಗೆ ಆಗಮಿಸಿದ ಅವರು ಕಾಂಗ್ರೆಸ್ ಸರ್ಕಾರ ಟೆಕ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ನಡೆದ ಚುನಾವಣಾ ಸಮಾವೇಶ ಉದ್ದೇಶಿಸಿ ಮಾಡಿದ ಅವರು, ಬೆಂಗಳೂರು ನಗರದಲ್ಲಿ ವಾಟರ್ ಮಾಫಿಯಾ ತಲೆ ಎತ್ತಿದೆ. ನಗರದ ಜನತೆ ನೀರಿಗಾಗಿ ಪರಿತಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕಾಂಗ್ರೆಸ್ ಕೇವಲ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕೆಲವೇ ತಿಂಗಳಿನಲ್ಲಿ ಬೆಂಗಳೂರಿನ ಪರಿಸ್ಥಿತಿ ಹಾಳು ಮಾಡಿದೆ. ಜನರ ಸಮಸ್ಯೆ ಬಗ್ಗೆ ಈ ಸರ್ಕಾರ ಗಮನ ಕೊಡುತ್ತಿಲ್ಲ ಎಂದು ಮೋದಿ ಕಿಡಿಕಾರಿದ್ದಾರೆ.

ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ಕೆಲಸ ಶುರುವಾಗಿದೆ. ಸ್ಯಾಟಲೈಟ್ ರಿಂಗ್ ರಸ್ತೆಯ ಲಾಭವೂ ಶೀಘ್ರದಲ್ಲಿ ಸಿಗಲಿದೆ. ಮೇಡ್ ಇನ್ ಇಂಡಿಯಾಕ್ಕೂ ಬೆಂಗಳೂರು ಕೊಡುಗೆ ಅಪಾರ. ಕರ್ನಾಟಕಕ್ಕೂ ಬುಲೆಟ್ ಟ್ರೈನ್ ಬರಲಿದೆ. ಬೆಂಗಳೂರನ್ನು ಅದ್ಭುತ ನಗರವನ್ನಾಗಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

2014 ರಲ್ಲಿ 1GB ಡೇಟಾ 250 ರೂ. ಇತ್ತು. ಈಗ 1 ಜಿಬಿ ಡೇಟಾ ಬೆಲೆ 10 ರೂ. ಆಗಿದೆ. ಡೇಟಾ ಸೆಕ್ಯುರಿಟಿಗಾಗಿ ಕಠಿಣ ಕಾನೂನು ತಂದಿದ್ದೇವೆ ಎಂದು ತಿಳಿಸಿದ್ದಾರೆ.

ಬಡವರಿಗೆ ಒಂದು ಕೋಟಿ ಮನೆ ಕೊಡಲಾಗಿದೆ. 84 ಸಾವಿರ ಮನೆಗಳು ಬೆಂಗಳೂರಿಗೆ ಸಿಕ್ಕಿವೆ. ಮಧ್ಯಮ ವರ್ಗದ ಮನೆಗಳ ಕನಸು ನನಸು ಮಾಡಿದ್ದೇವೆ. ಜನರ ಒಳಿತಿಗಾಗಿ ರೇರಾ ಕಾಯ್ದೆ ಜಾರಿಯಾಗಿದೆ. ಏಳು ಲಕ್ಷದವರೆಗೆ ಈಗ ತೆರಿಗೆ ಕಟ್ಟುವಂತಿಲ್ಲ. ಹತ್ತು ವರ್ಷಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲ ಎಂದಿದ್ದಾರೆ.
Published On - 7:15 pm, Sat, 20 April 24