
ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಮಡಿಕೇರಿ ರಾಜಾಸೀಟ್ನಲ್ಲಿ ಪುಷ್ಪಕಾಶಿಯೇ ಸೃಷ್ಟಿಯಾಗಿದೆ. ದೇಸಿ ಮತ್ತು ವಿದೇಶೀ ತಳಿಯ ಹೂವುಗಳು ಅರಳಿ ನಸು ನಗುತ್ತಿವೆ. ಡೇಲಿಯಾ, ಚೆಂಡು ಹೂವು, ಸೇವಂತಿಗೆ, ಜರಬ್ರಾ, ವಾಟರ್ ಲಿಲ್ಲಿ, ಕ್ಯಾಕ್ಟಸ್, ಗುಲಾಬಿ, ಗ್ಲಾಡಿಯೋಲಸ್, ಜೀನಿಯಾ ಹೀಗೆ ಹತ್ತು ಹಲವು ಬಗೆಯ ಹೂವುಗಳು ಅರಳಿವೆ.

ಫಲ-ಪುಷ್ಪ ಪ್ರದರ್ಶನದ ಅಂಗವಾಗಿ ರಾಜಾಸೀಟ್ನಲ್ಲಿ ಇಗ್ಗುತ್ತಪ್ಪ ದೇವಸ್ಥಾನದ ಪ್ರತಿಕೃತಿಯನ್ನು ಹೂವಿನಿಂದ ನಿರ್ಮಿಸಲಾಗಿದೆ. 20ಕ್ಕೂ ಅಧಿಕ ಬಗೆಯ ಸುಮಾರು ಒಂದು ಲಕ್ಷ ಹೂವುಗಳಿಂದ ದೇವಸ್ಥಾನ ನಿರ್ಮಿಸಲಾಗಿದೆ.

ವಿಶೇಷ ಅಂದರೇ, ದೇವಸ್ಥಾನದಲ್ಲಿನ ಶಿವಲಿಂಗ ಕೂಡ ಹೂವುಗಳಿಂದಲೇ ನಿರ್ಮಿಸಲಾಗಿದ್ದು, ಬಹಳ ಆಕರ್ಷಕವಾಗಿದೆ. ಈ ದೇವಸ್ಥಾನದ ಎದುರು ಫೋಟೋ ತೆಗೆಸಿಕೊಳ್ಳಲು ಜನರು ಮುಗಿ ಬೀಳುತ್ತಿದ್ದಾರೆ. ರಾಜಾಸೀಟ್ ಉದ್ಯಾನವದಲ್ಲಿ ಸುಮಾರು 15 ಸಾವಿರ ಹೂವಿನಗಿಡಗಳನ್ನು ಬೆಳೆಸಲಾಗಿದೆ.

ಈ ಎಲ್ಲ ಹೂವುಗಳನ್ನು ಕಳೆದ ಎರಡು ತಿಂಗಳಿನಿಂದ ಪೋಷಿಸಿ ಬೆಳೆಸಲಾಗುತ್ತಿದೆ. ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಶೇಷ ಮುತುವರ್ಜಿ ವಹಿಸಿ ಹೂವುಗಳನ್ನ ಬೆಳೆಸಿದ್ದಾರೆ.

ಗಣರಾಜ್ಯೋತ್ಸವ ಹಾಗೂ ವೀಕೆಂಡ್ ಹಿನ್ನೆಲೆಯಲ್ಲಿ ಈ ಬಾರಿ ಸಾಕಷ್ಟು ಪ್ರವಾಸಿಗರು ಮಡಿಕೇರಿಯತ್ತ ಆಗಮಿಸಿದ್ದಾರೆ. ವಾರಾಂತ್ಯದಲ್ಲಿ ಇದರ ಸಂಖ್ಯೆ ದುಪ್ಪಟ್ಟಾಗಲಿದೆ. ಹೀಗಾಗಿ ರಾಜಾಸೀಟ್ ಆಗಮಿಸುವ ಪ್ರವಾಸಿಗರ ಕಣ್ಣಿಗೆ ಹಬ್ಬದೂಟದಂತಿದೆ ಫಲಪುಷ್ಪ ಪ್ರದರ್ಶನದ ಸೊಬಗು ಬರ ಸೆಳೆಯುತ್ತಿದೆ.
Published On - 10:36 am, Mon, 27 January 25