ಖ್ಯಾತ ಪೋಷಕ ನಟ ಮೋಹನ್ ಜುನೇಜ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೇ 6ರ ರಾತ್ರಿ ನಿಧನರಾದರು. ಹಲವು ಸೆಲೆಬ್ರಿಟಿಗಳು ಬಂದು ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ತಮ್ಮೇನಹಳ್ಳಿ ಗ್ರಾಮದ ಸ್ಮಶಾನದಲ್ಲಿ ಮೋಹನ್ ಜುನೇಜ ಅಂತ್ಯಕ್ರಿಯೆ ನಡೆಯಲಿದೆ.
ನೂರಾರು ಸಿನಿಮಾ, ಧಾರಾವಾಹಿ, ನಾಟಕಗಳಲ್ಲಿ ಮೋಹನ್ ಜುನೇಜ ನಟಿಸಿದ್ದರು. ‘ಕೆಜಿಎಫ್ 1’ ಮತ್ತು ‘ಕೆಜಿಎಫ್ 2’ ಸಿನಿಮಾದಲ್ಲಿ ಮೋಹನ್ ಜುನೇಜ ಮಾಡಿದ್ದ ಪಾತ್ರ ಗಮನ ಸೆಳೆದಿತ್ತು. ಆನಂದ್ ಇಂಗಳಗಿಗೆ ರಾಕಿ ಭಾಯ್ ಬಗ್ಗೆ ಮಾಹಿತಿ ನೀಡುವ ವ್ಯಕ್ತಿಯಾಗಿ ಅವರು ಕಾಣಿಸಿಕೊಂಡಿದ್ದರು. ಮೋಹನ್ ಜುನೇಜ ನಿಧನಕ್ಕೆ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ಕಂಬನಿ ಮಿಡಿದಿದೆ.
ಮೋಹನ್ ಜುನೇಜ ಅವರ ಮರಣದ ಸುದ್ದಿ ತಿಳಿಯುತ್ತಿದ್ದಂತೆಯೇ ‘ಕೆಜಿಎಫ್ 2’ ಸಿನಿಮಾದ ನಿರ್ಮಾಪಕರು ಅವರ ಕುಟುಂಬಕ್ಕೆ ನೆರವಾಗಿದ್ದಾರೆ. ಈ ಕಷ್ಟದ ಸಂದರ್ಭದಲ್ಲಿ 50 ಸಾವಿರ ರೂಪಾಯಿ ನೀಡುವ ಮೂಲಕ ಸಹಾಯ ಮಾಡಿದ್ದಾರೆ. ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯವರು ಬಂದು ಹಣ ನೀಡಿದ್ದಾರೆ.
‘ಕನ್ನಡದ ಖ್ಯಾತ ಹಾಸ್ಯ ನಟರಾದ ಮೋಹನ್ ಜುನೇಜ ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಮ್ಮ ಕೆಜಿಎಫ್ ಚಿತ್ರತಂಡದ ಜತೆಗಿನ ಅವರ ಅವಿನಾಭಾವ ಸಂಬಂಧ ಮರೆಯಲಾರೆವು. ಕನ್ನಡ ಚಿತ್ರರಂಗದಲ್ಲಿ ಅವರು ಜನಪ್ರಿಯರಾಗಿದ್ದರು. ಅವರ ಕುಟುಂಬದವರಿಗೆ, ಸ್ನೇಹಿತರಿಗೆ ಮತ್ತು ಹಿತೈಷಿಗಳಿಗೆ ನಮ್ಮ ಸಾಂತ್ವನಗಳು’ ಎಂದು ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ಟ್ವೀಟ್ ಮಾಡಿದೆ.
‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ಯಾವಾಗಲೂ ಚಿತ್ರರಂಗದ ಕಾರ್ಮಿಕರು, ಕಲಾವಿದರು ಮತ್ತು ತಂತ್ರಜ್ಞರ ಪರವಾಗಿ ನಿಂತಿದೆ. ಈ ಹಿಂದೆ ಲಾಕ್ ಡೌನ್ ಸಂದರ್ಭದಲ್ಲಿಯೂ ನೂರಾರು ಜನರಿಗೆ ಈ ಸಂಸ್ಥೆ ವತಿಯಿಂದ ಸಹಾಯ ಮಾಡಲಾಗಿತ್ತು. ಈಗ ಮೋಹನ್ ಜುನೇಜ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದೆ.