ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2024 ಕ್ಕೆ ದಿನಗಣನೆ ಆರಂಭವಾಗಿದೆ. ದಸರಾಗೆ ಕಾಡುಬಿಟ್ಟು ನಾಡಿಗೆ ಬಂದಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಟೀಂ ಭರ್ಜರಿ ತಾಲೀಮು ಮಾಡುತ್ತಿದ್ದು, ಅದರಂತೆ ಇಂದು ಎರಡನೇ ಹಂತದ ದಸರಾ ಗಜಪಡೆಯ ತೂಕ ಪರೀಕ್ಷೆ ನಡೆಸಲಾಯಿತು.
ದಸರಾ ಹಿನ್ನಲೆ ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆ ಅಂಗಳದಲ್ಲಿ ಬೀಡು ಬಿಟ್ಟಿರುವ ಕ್ಯಾಪ್ಟನ್ ಅಭಿಮನ್ಯು ಟೀಂಗೆ ಪೌಷ್ಟಿಕ ಆಹಾರ ಕೊಡುವುದರ ಜೊತೆಗೆ ತಾಲೀಮು ಕೂಡ ಜೋರಾಗಿದೆ. ಬೆಳಿಗ್ಗೆ, ಸಂಜೆ ಕ್ಯಾಪ್ಟನ್ ಅಭಿಮನ್ಯು ಟೀಂ ಮೈಸೂರಿನ ಅಂಬಾವಿಲಾಸ ಅರಮನೆ ಅಂಗಳದಿಂದ ಚಿನ್ನದ ಅಂಬಾರಿ ಬಂದು ತಲುಪುವ ಬನ್ನಿಮಂಟಪಕ್ಕೆ ತಾಲೀಮಿನಲ್ಲಿ ತೊಡಗಿವೆ.
ಕಳೆದ ಸಂಜೆ ಮೈಸೂರಿಗೆ ಆಗಮಿಸಿದ್ದ ಎರಡನೇ ಹಂತದ ದಸರಾ ಗಜಪಡೆಗೆ ಇಂದು ತೂಕ ಪರೀಕ್ಷೆ ನಡೆಸಲಾಗಿದ್ದು, ಪ್ರಶಾಂತ್ ಆನೆ 4875 ಕೆ ಜಿ ತೂಕ, ಹಿರಣ್ಯ 2930 ಕೆ ಜಿ, ಮಹೇಂದ್ರ 4910 ಕೆ ಜಿ, ದೊಡ್ಡಹರವೆ ಲಕ್ಷ್ಮಿ 3485 ಕೆ ಜಿ, ಸುಗ್ರೀವ ಆನೆ 5190 ಕೆ ಜಿ ತೂಕ ಹೊಂದಿದೆ.
ಮೈಸೂರಿನ ದೇವರಾಜ ಮೊಹಲ್ಲಾದ ತೂಕ ಮಾಪನ ಕೇಂದ್ರದಲ್ಲಿ ಆನೆಗಳ ತೂಕ ಪರೀಕ್ಷೆ ನಡೆಸಲಾಗಿದ್ದು, ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವಿನ ಬಳಿಕ ಅತಿ ಹೆಚ್ಚು ತೂಕವನ್ನು ಸುಗ್ರೀವ ಹೊಂದಿದ್ದಾನೆ. ಈ ಹಿನ್ನಲೆ ಮೈಸೂರಿನ ರಾಜಬೀದಿಗಳಲ್ಲಿ ಆನೆಗಳ ಗಜ ಗಾಂಭೀರ್ಯ ನಡಿಗೆಯನ್ನು ನೋಡಿ ಕಣ್ತುಂಬಿಕೊಳ್ಳಲು ಜನರು ಕಾತರದಿಂದ ಕಾಯುತ್ತಿದ್ದಾರೆ.
ಇನ್ನು ಕಳೆದ ಬಾರಿ ತೂಕ ಪರೀಕ್ಷೆ ನಡೆಸುವ ವೇಳೆ ಕಂಜನ್ ಎಂಬ ಆನೆಯ ಕಾಲು ಟ್ವಿಸ್ಟ್ ಆಗಿತ್ತು. ಹೀಗಾಗಿ ಕೆಲದಿನಗಳ ಕಾಲ ಕಂಜನ್ ವಿಶ್ರಾಂತಿಯಲ್ಲಿದ್ದ. ಸದ್ಯ ಕಂಜನ್ ಶೇಖಡ 90 ರಷ್ಟು ಗುಣಮುಖನಾಗಿದ್ದು. ಆದಷ್ಟು ಬೇಗ ತಾಲೀಮಿನಲ್ಲಿ ಭಾಗಿಯಾಗಲಿದ್ದಾನೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಇದೀಗ ನಾಡಹಬ್ಬ ದಸರೆ ಸಿದ್ದತೆ ಕಳೆಗಟ್ಟಿದ್ದು, ಕಾಡಿನಿಂದ ನಾಡಿಗೆ ಬಂದಿರುವ ಗಜಪಡೆಗೆ ರಾಜಾತೀಥ್ಯ, ಪ್ರತಿದಿನ ಭೂರಿ ಭೋಜನ ನೀಡಲಾಗುತ್ತಿದೆ. ಜೊತೆಗೆ ಇಷ್ಟು ದಿನ ಕಾಡಿನಲ್ಲಿದ್ದ ದಸರಾ ಆನೆಗಳಿಗೆ ನಾಡಿನ ಜೊತೆ ಹೊಂದಾಣಿಕೆ ಮಾಡಿಸುವುದಲ್ಲಿ ಮಾವುತರು ತೊಡಗಿದ್ದಾರೆ.