- Kannada News Photo gallery mysore veterinarian dr ramesh's new experiment made slippers for the Elephants feet
ಆನೆ ಕಾಲಿಗೆ ಚಪ್ಪಲಿ; ಮೈಸೂರು ಪಶುವೈದ್ಯ ಡಾ ರಮೇಶ್ ಪಶು ಪ್ರೀತಿ ಅಂತಿಂತದಲ್ಲ
ಮೈಸೂರು ಜಿಲ್ಲೆ ಹುಣಸೂರಿನ ದೊಡ್ಡ ಹರವೆ ಆನೆ ಕ್ಯಾಂಪ್ನಲ್ಲಿರುವ ಕುಮಾರಿ ಎಂಬ ಆನೆಯ ಕಾಲಿಗೆ ಗಾಯವಾಗಿತ್ತು. ಗಾಯಕ್ಕೆ ಎಷ್ಟೇ ಔಷಧ ಹಚ್ಚಿದರೂ ಅದು ಗಾಯದ ಮೇಲೆ ನಿಲ್ಲದೆ ಆನೆ ಗಾಯಾ ವಾಸಿ ಆಗಲೇ ಇಲ್ಲ. ಕೊನೆಗೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೈದ್ಯರಾಗಿರುವ ಡಾ ರಮೇಶ್ ಅವರು ಆನೆ ಕಾಲಿಗೆ ಚಪ್ಪಲಿ ಮಾಡಿ ಔಷಧಿಯನ್ನು ಪಾದರಕ್ಷೆಗೆ ಹಚ್ಚಿ ಕುಮಾರಿ ಆನೆಯ ಕಾಲಿಗೆ ಅಳವಡಿಸಿದ್ದಾರೆ. ಸದ್ಯ ಇದರಿಂದ ಆನೆ ಚೇತರಿಸಿಕೊಂಡಿದೆ.
Updated on: Sep 09, 2023 | 2:57 PM

ಪ್ರತಿನಿತ್ಯ ಒಂದಲ್ಲ ಒಂದು ವಿಶೇಷ ವಿಭಿನ್ನ ಚಿಕಿತ್ಸಾ ಕ್ರಮಗಳನ್ನು ವೈದ್ಯರು ಅಳವಡಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ. ಇಂತಹ ಚಿಕಿತ್ಸೆಗಳು ವಿಶ್ವದಾದ್ಯಂತ ಕಂಡು ಬರುತ್ತವೆ. ಆದರೆ ಮೈಸೂರಿನ ಪಶು ವೈದ್ಯರು ಆನೆಯೊಂದರ ಚಿಕಿತ್ಸೆಗಾಗಿ ಅಳವಡಿಸಿಕೊಂಡಿರುವ ವಿಶೇಷ ವಿಭಿನ್ನವಾದ ಕ್ರಮ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಮೈಸೂರು ಜಿಲ್ಲೆ ಹುಣಸೂರಿನ ದೊಡ್ಡ ಹರವೆ ಆನೆ ಕ್ಯಾಂಪ್ನಲ್ಲಿರುವ 60 ವರ್ಷದ ಕುಮಾರಿ ಆನೆಯ ಕಾಲಿಗೆ ಗಾಯವಾಗಿತ್ತು. ತಕ್ಷಣ ವೈದ್ಯರ ತಂಡ ಕುಮಾರಿ ಆನೆಗೆ ಔಷಧ ಸಿದ್ದಪಡಿಸಿ ಹಚ್ಚಿದೆ. ಆದರೆ ಗಾಯದ ಸ್ಥಳದಲ್ಲಿ ಔಷಧಿ ನಿಂತಿಲ್ಲ. ಔಷಧಿ ಮಣ್ಣು ಪಾಲಾಗುತಿತ್ತು. ಇದರಿಂದ ಆನೆಯ ಕಾಲಿನ ಗಾಯ ವಾಸಿಯಾಗಿಲ್ಲ.

ಕೊನೆಗೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೈದ್ಯರಾಗಿರುವ ಡಾ ರಮೇಶ್ ಹೊಸ ಐಡಿಯಾ ಮಾಡಿದ್ದಾರೆ. ಆನೆಗಾಗಿ ವಿಶೇಷ ಪಾದರಕ್ಷೆಯನ್ನು ತಯಾರಿಸಿದ್ದಾರೆ. ವಾಹನದ ಟೈರ್ ಬಳಸಿಕೊಂಡು ಪಾದರಕ್ಷೆಯೊಂದನ್ನು ತಯಾರಿಸಿದ್ದಾರೆ. ನಂತರ ಔಷಧಿಯನ್ನು ಪಾದರಕ್ಷೆಗೆ ಹಚ್ಚಿ ಕುಮಾರಿ ಆನೆಯ ಕಾಲಿಗೆ ಅಳವಡಿಸಿದ್ದಾರೆ.

ಡಾ ರಮೇಶ್ ನಾಗರಹೊಳೆ ವಲಯದಲ್ಲಿ ಅರಣ್ಯ ಇಲಾಖೆಯ ಪಶುವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ ರಮೇಶ್ ಹುಟ್ಟಿದ್ದು ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಛತ್ರದ ಹೊಸಹಳ್ಳಿ ಗ್ರಾಮದವರು. ಕಳೆದ 5 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಪಶುವೈದ್ಯರಾಗಿದ್ದಾರೆ.

ಕಡಿಮೆ ಅವಧಿಯಲ್ಲಿ ಸಾಕಷ್ಟು ಸಾಹಸಮಯ ಕೆಲಸಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಕಾಡಿನಿಂದ ನಾಡಿಗೆ ಬರುವ ಪ್ರಾಣಿಗಳನ್ನು ಸುರಕ್ಷಿತವಾಗಿ ವಾಪಸ್ಸು ಕಾಡಿಗೆ ಕಳುಹಿಸುವುದರಲ್ಲಿ ಡಾ ರಮೇಶ್ ಪರಿಣಿತಿ ಹೊಂದಿದ್ದಾರೆ. ಡಾ ರಮೇಶ್ ಇದುವರೆಗೂ 6 ಹುಲಿ ಕಾರ್ಯಾಚರಣೆ 35 ಆನೆ ಕಾರ್ಯಾಚರಣೆ ಹಾಗೂ 50ಕ್ಕೂ ಹೆಚ್ಚು ಚಿರತೆಗಳನ್ನು ನಾಡಿನಿಂದ ಕಾಡಿಗೆ ವಾಪಸ್ಸು ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಡಾ ರಮೇಶ್ ಮನೆಯಲ್ಲಿ ಹಸು ಕರು ಎಮ್ಮೆ ನಾಯಿ ಬೆಕ್ಕು ಹೀಗೆ ನಾನಾ ಪ್ರಾಣಿಗಳಿದ್ದವು. ಅವುಗಳನ್ನು ಕಂಡರೆ ರಮೇಶ್ ಅವರಿಗೆ ಎಲ್ಲಿಲ್ಲದ ಪ್ರೀತಿ. ಹೆಚ್ಚಿನ ಕಾಲ ಅವುಗಳ ಜೊತೆಯಲ್ಲೇ ಕಳೆಯುತ್ತಿದ್ದರು. ಇನ್ನು ಹಳ್ಳಿಗಳಲ್ಲಿ ಸಾಮಾನ್ಯವಾಗಿ ಮನುಷ್ಯರು ಹುಷಾರು ತಪ್ಪಿದರೆ ಸೂಕ್ತ ಕಾಲಕ್ಕೆ ಚಿಕಿತ್ಸೆ ಸಿಗುತ್ತಿರಲಿಲ್ಲ. ಇನ್ನು ಪ್ರಾಣಿಗಳಿಗೆ ಚಿಕಿತ್ಸೆ ಕೇಳೋದೆ ಬೇಡ ಆ ರೀತಿ ಇತ್ತು. ಪರಿಸ್ಥಿತಿ.

ಯಾವಾಗಲೂ ತನ್ನ ನೆಚ್ಚಿನ ಪ್ರಾಣಿಗಳು ಅನಾರೋಗ್ಯದಿಂದ ಬಳಲುವಾಗ, ಗಾಯಗೊಂಡು ನರಳುವಾಗ ರಮೇಶ್ ಅವರ ಕರುಳು ಕಿತ್ತು ಬರುತಿತ್ತು. ಎಷ್ಟೋ ಬಾರಿ ತಮ್ಮ ಸಾಕು ಪ್ರಾಣಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ತಮ್ಮ ಕಣ್ಣ ಮುಂದೆ ಸಾವನ್ನಪ್ಪಿದ್ದು ರಮೇಶ್ ಅವರನ್ನು ಬಹುವಾಗಿ ಕಾಡಿದೆ.

ಮೂಕರೋಧನೆಗೆ ಇತಿಶ್ರೀ ಹಾಡಬೇಕು ಅನ್ನೋ ಸಂಕಲ್ಪ ಮಾಡಿ ಡಾ.ರಮೇಶ್ ಕಠಿಣವಾಗಿ ಅಭ್ಯಾಸ ಮಾಡಿ ಇಂದು ಒಬ್ಬ ವಿಶೇಷ ಪಶುವೈದ್ಯರಾಗಿ ಗುರುತಿಸಿಕೊಂಡಿದ್ದಾರೆ. ರಮೇಶ್ ಪ್ರಾಥಮಿಕ ಪ್ರೌಢಶಿಕ್ಷಣ ಪೂರೈಸಿದ್ದು ಕನ್ನಡ ಮಾಧ್ಯಮದಲ್ಲಿ. ವೈದ್ಯನಾಗಲು ಪಿಯುಸಿಯಲ್ಲಿ ಪಿಸಿಎಂಬಿ ತೆಗೆದುಕೊಳ್ಳಬೇಕಾಗಿತ್ತು.

ರಮೇಶ್ ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಮದ್ದೂರಿನ ಚಿಕ್ಕ ಅರಸಿನಕರೆಯಲ್ಲಿ ಪೂರೈಸಿದರು. ಅದಾದ ನಂತರ ಹಾಸನದ ಪಶುವೈದ್ಯಕೀಯ ಕಾಲೇಜು ಸೇರಿ ಪದವಿ ಪಡೆದುಕೊಂಡರು. ನಂತರ ಬೆಂಗಳೂರು ಪಶು ವೈದ್ಯಕೀಯ ಕಾಲೇಜು ಸೇರಿ ಪ್ರಾಣಿಗಳ ಶಸ್ತ್ರಚಿಕಿತ್ಸೆ ಹಾಗೂ ರೇಡಿಯಾಲಜಿಯ ಕೋರ್ಸ್ ಪೂರೈಸಿದರು.

2018ರಲ್ಲಿ ರಮೇಶ್ ಅವರ ಕನಸು ನನಸಾಯಿತು. ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಒದಗಿ ಬಂತು. ಆಗ ರಮೇಶ್ ಅವರ ವಯಸ್ಸು ಕೇವಲ 24. ಮೊದಲ ಡ್ಯೂಟು ಬನ್ನೇರುಘಟ್ಟದ ಪ್ರಾಣಿಗಳ ಪುನರ್ವಸತಿ ಕೇಂದ್ರ. ಅಲ್ಲಿ ರಮೇಶ್ ಅವರಿಗೆ ಪ್ರ್ಯಾಕ್ಟಿಕಲ್ ಆಗಿ ಕಲಿಯಲು ಸಾಕಷ್ಟು ಅವಕಾಶ ಸಿಕ್ಕಿತು. ಅದನ್ನು ಸದುಪಯೋಗಪಡಿಸಿಕೊಂಡ ಡಾ ರಮೇಶ್ ಶ್ರದ್ದೆಯಿಂದ ಎಲ್ಲವನ್ನೋ ಕಲಿತರು.

ಬನ್ನೇರುಘಟ್ಟದಲ್ಲಿದ್ದಾಗ ಸಿಂಹದ ಮರಿಗಳು ಹುಲಿಮರಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿ ಸೈ ಎನಿಸಿಕೊಂಡರು. 2021ರಲ್ಲಿ ಅವರಿಗೆ ಮೈಸೂರು ಜಿಲ್ಲಾ ವ್ಯಾಪ್ತಿಯ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಇದೇ ವೇಳೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2021ನ್ನು ಯಶಸ್ವಿಯಾಗಿ ನೆರವೇರಿಸುವಲ್ಲಿ ಡಾ ರಮೇಶ್ ಪಾತ್ರ ಮಹತ್ವದಾಗಿತ್ತು.

ಕೋವಿಡ್ ಕಾಲಘಟ್ಟವಾಗಿದ್ದರಿಂದ ಆನೆಗಳ ಸುರಕ್ಷತೆ ಅದರ ಮಾವುತರು ಕಾವಾಡಿಗಳ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಾಗಿತ್ತು. ಹಲವು ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ಡಾ ರಮೇಶ್ ಕರ್ತವ್ಯ ನಿರ್ವಹಿಸಿದ್ದಾರೆ.



















