
ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ಸಿಕ್ಕಿ ಮೂರು ದಿನಗಳು ಆಗಿದೆ. ಇದುವರೆಗೂ ಹತ್ತು ಹಲವು ಕಾರ್ಯಕ್ರಮಗಳು ಜನಮನಸೂರೆಗೊಂಡವು. ಅದರಂತೆ ಇಂದು(ಅ.07) ಕೂಡ ಮೈಸೂರಿನಲ್ಲಿ ಬೊಂಬೆ ಮನೆ ಕಣ್ಮನ ಸೆಳೆಯುತ್ತಿದೆ.

ವಿಶ್ವ ವಿಖ್ಯಾತ ಮೈಸೂರು ದಸರಾ 2024ಕ್ಕೆ ಅದ್ದೂರಿ ಚಾಲನೆ ಸಿಕ್ಕಿದ್ದು, ನವರಾತ್ರಿ ವೇಳೆ ನಾಡಿನೆಲ್ಲೆಡೆ ಮನೆ ಮನೆಗಳಲ್ಲಿ ಬೊಂಬೆ ಕೂರಿಸಿ ಸಂಭ್ರಮಾಚರಣೆ ಇರುತ್ತದೆ. ಅದರಂತೆ ಮೈಸೂರಿನಲ್ಲಿಯೂ ಬೊಂಬೆ ಮನೆ ಕಣ್ಮನ ಸೆಳೆಯುತ್ತಿದ್ದು, ನೋಡುಗರ ಹಿಂಡು ಹರಿದು ಬರುತ್ತಿದೆ.

ಹೌದು, ಮೈಸೂರಿನ ಗಿರಿದರ್ಶಿನಿ ಬಡಾವಣೆಯ ಗೀತಾಶ್ರೀಹರಿ ನಿವಾಸದಲ್ಲಿ ಬೊಂಬೆಗಳು ಜನರನ್ನು ಆಕರ್ಷಿಸುತ್ತಿವೆ. ವಿವಿಧ ಪರಿಕಲ್ಪನೆಗಳನ್ನ ಇಟ್ಟುಕೊಂಡು ಬೊಂಬೆ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಸುಮಾರು 25 ಸಾವಿರ ಬೊಂಬೆಗಳನ್ನ ಬಳಸಿಕೊಂಡು ಈ ಬೊಂಬೆ ಮನೆ ನಿರ್ಮಾಣ ಮಾಡಲಾಗಿದೆ. ಆಶ್ಚರ್ಯವೆಂದರೆ ಇಡೀ ಮನೆ ಬೊಂಬೆಗಳಿಂದಲೇ ಅಲಂಕಾರವಾಗಿದ್ದು, ಜನಮನಸೂರೆಗೊಂಡವು.

ವಿಶೇಷವೆಂದರೆ ಬೊಂಬೆಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದ್ದು, ವಿಷ್ಣುವಿನ ದಶವತಾರ, ಶ್ರೀಕೃಷ್ಣ, ಮಧುರನಗರಿ, ಕೈಲಾಸದಲ್ಲಿ ಶಿವ, ಬೊಂಬೆ ಮೂಲಕ ಸನಾತನ ಧರ್ಮ ಉಳಿಸಿ ಎಂಬ ಸಂದೇಶ ರವಾನಿಸಲಾಗುತ್ತಿದೆ.ಇದರ ಜೊತೆಗೆ ಜಂಬೂ ಸವಾರಿ ಮೆರವಣಿಗೆ, ಖಾಸಗಿ ದರ್ಬಾರ್, ಮಹಾಭಾರತದ ಪಾತ್ರಗಳನ್ನ ಕಟ್ಟಿಕೊಡುವ ಕಾರ್ಯವಾಗುತ್ತಿದೆ.

ಇನ್ನು ಬೊಂಬೆಯಲ್ಲಿಯೇ ಮೂಡಿರುವ ಮದುವೆ ಶಾಸ್ತ್ರ, ಚಾಮುಂಡಿಬೆಟ್ಟ, ಮಲೈ ಮಹದೇಶ್ವರ ಬೆಟ್ಟ ಉಳಿಸಿ ಎಂಬ ಸಂದೇಶ, ನವದುರ್ಗೆಯರು, ಮೈಸೂರು ಸಂಸ್ಥಾನ ಸೇರಿ ನೂರಾರು ಪರಿಕಲ್ಪನೆಗಳನ್ನ ಇಟ್ಟುಕೊಂಡು ಬೊಂಬೆ ಮನೆ ನಿರ್ಮಾಣ ಮಾಡಲಾಗಿದೆ.