ಪ್ರಧಾನಿ ನರೇಂದ್ರ ಮೋದಿ ಅವರು ತೆಪ್ಪಕಾಡು ಆನೆ ಶಿಬಿರಕ್ಕೆ ಇಂದು (ಏಪ್ರಿಲ್ 9) ಭೇಟಿ ನೀಡಿದ್ದಾರೆ. ಈ ವೇಳೆ ಮಾವುತರಾದ ಬೊಮ್ಮನ್ ಮತ್ತು ಬೆಳ್ಳಿ ದಂಪತಿಯ ಜೊತೆ ಕೆಲವು ಸಮಯ ಕಳೆದಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.
ಅನಾಥ ಆನೆಗಳನ್ನು ಸಾಕುವ ಕಾರ್ಯದಲ್ಲಿ ತೊಡಗಿಕೊಂಡಿರುವ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಕ್ಕ ಬಳಿಕ ಅವರಿಗೆ ಇಷ್ಟೊಂದು ಖ್ಯಾತಿ ಬಂದಿದೆ.
ಬೆಳ್ಳಿ ಮತ್ತು ಬೊಮ್ಮನ್ ಅವರು ಸಾಕಿದ ರಾಘು ಎಂಬ ಆನೆಯನ್ನು ಮೋದಿ ನೋಡಿದ್ದಾರೆ. ತೆಪ್ಪಕಾಡು ಆನೆ ಶಿಬಿರದಲ್ಲಿನ ಇತರ ಆನೆಗಳಿಗೂ ಅವರು ಆಹಾರ ತಿನಿಸಿದ್ದಾರೆ.
‘ಬೊಮ್ಮನ್-ಬೆಳ್ಳಿ ಮತ್ತು ರಾಘು ಜೊತೆ ಆಹಾ ಎಂಥ ಭೇಟಿ’ ಎಂದು ನರೇಂದ್ರ ಮೋದಿ ಸಂತಸ ಹಂಚಿಕೊಂಡಿದ್ದಾರೆ. ರಾಘು ಆನೆಯನ್ನು ಅವರು ಮುಟ್ಟಿ ಮುದ್ದಾಡಿದ್ದಾರೆ. ಈ ಸಂದರ್ಭದಲ್ಲಿ ಮಾವುತರ ಜೊತೆ ಅವರು ಮಾತುಕಥೆ ನಡೆಸಿದ್ದಾರೆ.
‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರದಲ್ಲಿ ಬೊಮ್ಮನ್ ಮತ್ತು ಬೆಳ್ಳಿ ದಂಪತಿಯ ಬದುಕನ್ನು ತೋರಿಸಲಾಗಿದೆ. ಈ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಸಿಕ್ಕ ನಂತರ ಅನೇಕರು ಈ ದಂಪತಿಯನ್ನು ಭೇಟಿ ಮಾಡಿದ್ದಾರೆ. ಈ ಮೊದಲ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೂಡ ಭೇಟಿ ಆಗಿದ್ದರು.