
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ‘ಇಂದು ಮುಖ್ಯಮಂತ್ರಿ ಜನಸೇವಾ ಸದನದಲ್ಲಿ ಕಾಂತಾರ: ಚಾಪ್ಟರ್ 1 ನಟ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಅವರ ತಂಡವನ್ನು ಭೇಟಿ ಮಾಡಲಾಯಿತು’ ಎಂದು ಪೋಸ್ಟ ಮಾಡಲಾಗಿದೆ.

‘ಕಾಂತಾರ: ಚಾಪ್ಟರ್ 1 ಚಿತ್ರವು ಭಾರತದ ಆಧ್ಯಾತ್ಮಿಕ ಆಳ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸುಂದರವಾಗಿ ಪ್ರತಿಬಿಂಬಿಸುತ್ತದೆ. ನಮ್ಮ ಸಂಪ್ರದಾಯಗಳ ಸಾರವನ್ನು ಜೀವಂತಗೊಳಿಸುತ್ತದೆ’ ಎಂದು ರೇಖಾ ಗುಪ್ತಾ ಅವರು ಹೊಗಳಿದ್ದಾರೆ.

‘ಕಾಂತಾರ ರೀತಿಯ ಕೃತಿಗಳು ನಮ್ಮ ಪರಂಪರೆಯ ಚೈತನ್ಯವನ್ನು ಜಾಗತಿಕ ವೇದಿಕೆಗೆ ಹೆಮ್ಮೆಯಿಂದ ಕೊಂಡೊಯ್ಯುತ್ತವೆ’ ಎಂದು ರೇಖಾ ಗುಪ್ತಾ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದರಿಂದ ಸಿನಿಮಾ ತಂಡಕ್ಕೆ ಸಂತಸ ಆಗಿದೆ.

‘ಈ ಗಮನಾರ್ಹ ಸಿನಿಮೀಯ ಪ್ರಯಾಣದಲ್ಲಿ ಇಡೀ ತಂಡಕ್ಕೆ ಯಶಸ್ಸು ಸಿಗಲಿ’ ಎಂದು ರೇಖಾ ಗುಪ್ತಾ ಅವರು ಹಾರೈಸಿದ್ದಾರೆ. ರಿಷಬ್ ಶೆಟ್ಟಿ ಜೊತೆ ಪ್ರಗತಿ ಶೆಟ್ಟಿ, ರುಕ್ಮಿಣಿ ವಸಂತ್ ಮುಂತಾದವರು ಈ ವೇಳೆ ಹಾಜರಿದ್ದರು.

ಎಲ್ಲ ಕಡೆಗಳಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅತ್ಯುತ್ತಮವಾಗಿ ಪ್ರದರ್ಶನ ಕಾಣುತ್ತಿವೆ. ಕನ್ನಡ ಸೇರಿದಂತೆ ಒಟ್ಟು 7 ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಆಗಿದೆ. ಈಗಾಗಲೇ 273 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ.