ಅನೇಕ ವೈಶಿಷ್ಟ್ಯ, ವಿಸ್ಮಯಗಳನ್ನು ಹೊದ್ದು ನಿಂತಿರುವ ಮಹಾರಾಷ್ಟ್ರದ ಎಲ್ಲೋರ ಗುಹೆ, ದೇವಾಲಯಗಳು ಪ್ರವಾಸಿಗರನ್ನು ಚಕಿತರನ್ನಾಗಿ ಮಾಡುತ್ತದೆ. ಇದು ಜೈನ, ಬೌದ್ಧ, ಹಿಂದೂ ಗುಹಾದೇಗುಲಗಳ ಏಕಶಿಲಾಭವನವಾಗಿದೆ. ಶಿಲೆಗಳ ಮೇಲಿನ ಕೆತ್ತನೆಯಿಂದ ನೋಡುಗರ ಮನದಲ್ಲಿ ಚಿರಕಾಲ ಉಳಿಯುವಂತಹ ಶಿಲ್ಪಕಲೆಯನ್ನು ಕೈಲಾಸನಾಥ ದೇವಾಲಯ ಒಳಗೊಂಡಿದೆ. ಪ್ರತಿಯೊಬ್ಬರೂ ಒಮ್ಮೆಯಾದರೂ ಭೇಟಿ ನೀಡಲೇ ಬೇಕಾದ ಭವ್ಯ ವಾಸ್ತು ಶಿಲ್ಪ ಅಜಂತ ಎಲ್ಲೋರದಲ್ಲಿದೆ. ಎಲ್ಲೋರದ ಕೆಲವು ಫೋಟೋಗಳು ಇಲ್ಲಿವೆ.
ಯಾವುದೇ ಆಧುನಿಕ ತಂತ್ರಜ್ಞಾನ ಇರದ ಆ ಕಾಲದಲ್ಲಿ ಅಂದರೆ ಕ್ರಿ.ಶ 760 ರಲ್ಲಿ ಕೈಲಾಸದ ಪ್ರತಿರೂಪವಾಗಿ ರಾಷ್ಟ್ರಕೂಟ ರಾಜನಿಂದ ಕೆತ್ತಿಸಲ್ಪಟ್ಟ ನಭೂತೋ ನಭವಿಷ್ಯತಿ ಎನ್ನಬಹುದಾದ ದೇವಾಲಯ ಇದು.
ಮಹಾರಾಷ್ಟ್ರದ ಔರಂಗಾಬಾದ್ ನ ವಾಯುವ್ಯ ದಿಕ್ಕಿನಲ್ಲಿ ಔರಂಗಾಬಾದ್-ಚಾಲಿಸ್ಗಾಂವ್ ರಸ್ತೆಯ ವೆರುಲ್ ಬಳಿ ಎಲ್ಲೋರ ಗುಹೆಗಳಿವೆ. ಎಲ್ಲೋರಾ ಗುಹೆಗಳನ್ನು 1983 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಹೆಸರಿಸಲಾಯಿತು.
ರಾಷ್ಟ್ರಕೂಟ ದೊರೆ 1ನೇ ಕೃಷ್ಣ ಅಕಾಲವರ್ಷ ಶುಭತುಂಗ ಕೃಷ್ಣನಿಂದ ಈ ದೇವಾಲಯ ನಿರ್ಮಾಣವಾಗಿದೆ. ಈ ಗುಹೆಗಳನ್ನ ಚರಣಾದ್ರಿ ಪರ್ವತ ಶ್ರೇಣಿಯಲ್ಲಿ ಕೆತ್ತಲಾಗಿದೆ. ಇಲ್ಲಿ ನೂರಕ್ಕೂ ಹೆಚ್ಚು ಗುಹೆಗಳಿವೆಯಾದರೂ ಕೇವಲ 34 ಗುಹೆಗಳು ಮಾತ್ರ ಸಾರ್ವಜನಿಕರ ವೀಕ್ಷಣೆಗೆ ಲಭ್ಯ.
ಇಲ್ಲಿ ಮೊದಲ ಹನ್ನೆರಡು ಗುಹೆಗಳು ಬೌದ್ಧ ಮತಕ್ಕೆ ಸಂಬಂಧಿಸಿದವುಗಳು. ನಂತರದ ಹದಿನೇಳು ಗುಹೆಗಳು ಹಿಂದೂ ಧರ್ಮದ್ದು ಮತ್ತು ಕೊನೆಯ ಐದು ಗುಹೆಗಳು ಜೈನ ಧರ್ಮದವು. ಇವುಗಳ ಪೈಕಿ ಹದಿನಾರನೇ ಗುಹೆಯೇ ಅದ್ಭುತವಾದ ಕೈಲಾಸನಾಥ ದೇವಾಲಯ.
ಕೈಲಾಸನಾಥ ದೇವಾಲಯ ಸುಮಾರು ವಿಸ್ತೀರ್ಣ 28000 ಚದರ ಅಡಿಗಳು (145'x195'x90') ಮತ್ತು ಎತ್ತರ ಬರೋಬ್ಬರಿ ತೊಂಭತ್ತು ಅಡಿಗಳು. ಇಲ್ಲಿ ಪುರಾಣಗಳಲ್ಲಿ ಬರುವ ಸಾಹಸದ ದೃಶ್ಯಗಳನ್ನ ಕೆತ್ತಲಾಗಿದೆ. ಈ ದೇವಾಲಯವನ್ನ ಕೆತ್ತಲು ತೆಗೆದುಕೊಂಡ ಅವಧಿ ಕೇವಲ ಹದಿನೆಂಟು ವರ್ಷಗಳು.
ವಿಶ್ವಪ್ರಸಿದ್ಧ ಕೈಲಾಸನಾಥ ದೇವಾಲಯವು ರಾಷ್ಟ್ರಕೂಟ ವಾಸ್ತುಶಿಲ್ಪಕ್ಕೆ ಅದ್ಭುತ ಉದಾಹರಣೆಯಾಗಿದೆ. ಇದು ಶಿವನ ವಾಸಸ್ಥಾನವಾದ ಕೈಲಾಶ್ ಪರ್ವತವನ್ನು ಪ್ರತಿನಿಧಿಸುತ್ತದೆ. ಅಂಗಳದೊಳಗೆ ಶಿವನಿಗೆ ಅರ್ಪಿತವಾದ ಕೇಂದ್ರ ದೇವಾಲಯ ಮತ್ತು ನಂದಿಯ (ದಿ ಸೆಕ್ರೇಡ್ ಬುಲ್) ಚಿತ್ರವಿದೆ. ಈ ದೇವಾಲಯದಲ್ಲಿ ರಾಮಾಯಣ ಮತ್ತು ಮಹಾಭಾರತದ ಘಟನೆಗಳನ್ನು ಚಿತ್ರಿಸುವ ಅನೇಕ ಶಿಲ್ಪಕಲೆಗಳಿವೆ.
1300 ವರ್ಷಗಳ ಹಿಂದೆ ನಿರ್ಮಿಸಲಾದ ಈ ಕಲಾಕೃತಿಯು ಪ್ರಪಂಚದ ಅತ್ಯಂತ ದೊಡ್ಡ ಏಕಶಿಲಾ ಕಲಾಕೃತಿಯಾಗಿದೆ. ಇದು ಮೇಲಿನಿಂದ ಕೆಳಗಿನತನಕ ಕೆತ್ತಲ್ಪಟ ಪ್ರಪಂಚದ ಏಕೈಕ ದೇವಾಲಯ.
Published On - 10:29 pm, Sat, 13 August 22