
ಐಪಿಎಲ್ ಸೀಸನ್-17 ಇನ್ನೇನು ಮುಗಿಯವ ಹಂತ ತಲುಪಿದೆ. ಅದರಲ್ಲೂ ಸತತ ಆರು ಪಂದ್ಯ ಗೆಲ್ಲುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ಪ್ರವೇಶಿಸಿದೆ.

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಐದು ಬಾರಿ ಟ್ರೋಫಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 27 ರನ್ಗಳಿಂದ ಸೋಲಿಸಿ ಭರ್ಜರಿ ಜಯದ ಮೂಲಕ ಪ್ಲೇ ಆಫ್ ಪ್ರವೇಶಿಸಿತು.

ಈ ಹಿನ್ನಲೆ ವಿರಾಟ್ ಕೊಹ್ಲಿ ಅಭಿಮಾನಿ ಕಲಾವಿದನೊಬ್ಬ ತನ್ನ ರಕ್ತದಿಂದ ಕೊಹ್ಲಿ ಚಿತ್ರವನ್ನ ಬಿಡಿಸುವ ಮೂಲಕ ಅಭಿಮಾನ ಮೆರೆದಿದ್ದಾನೆ.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರದ ಶಿವಾನಂದ ನೀಲನೂರ ಎಂಬುವವರು ಸುಂದರವಾದ ವಿರಾಟ್ ಕೊಹ್ಲಿ ಚಿತ್ರವನ್ನ ಬಿಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

2008 ರಿಂದಲೂ ಆರ್ಸಿಬಿ ಅಭಿಮಾನಿ ಆಗಿರುವ ಶಿವಾನಂದ ಅವರು ಮಹಾಲಿಂಗಪುರ ಪಟ್ಟಣದ ಖಾಸಗಿ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದಾರೆ.

ಈ ಕುರಿತು ಮಾತನಾಡಿದ ಅವರು , ‘ನಾನು ಬಿಡಿಸಿದ ಚಿತ್ರಕಲೆ ಕಂಡು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲ ಕಡೆ ಚಿತ್ರ ಹಂಚುತ್ತಿದ್ದಾರೆ. ಇದನ್ನು ವಿರಾಟ್ ಕೊಹ್ಲಿ ಅವರು ಕೂಡ ನೋಡಲಿ ಎಂದು ಬಯಸುತ್ತೇನೆ ಎಂದಿದ್ದಾರೆ.