ನಾಡಹಬ್ಬ ದಸರಾ ಸಿದ್ಧತೆ ಕಳೆಗಟ್ಟಿದ್ದು, ಇಷ್ಟು ದಿನ ಕಾಡಿನಲ್ಲಿದ್ದ ದಸರಾ ಆನೆಗಳಿಗೆ ನಾಡಿನ ಜೊತೆ ಹೊಂದಾಣಿಕೆ ಮಾಡಿಸುವುದರಲ್ಲಿ ಮಾವುತರು ತೊಡಗಿದ್ದಾರೆ. ಜೊತೆಗೆ ಈ ಆನೆಗಳಿಗೆ ವಿಶೇಷ ಆಹಾರ ನೀಡಲಾಗುತ್ತಿದೆ.
ಕಾಡಿನಲ್ಲಿ ಬಿದಿರು, ಸೊಪ್ಪು ಹಾಗೂ ಆನೆ ಶಿಬಿರಗಳಲ್ಲಿ ರಾಗಿ, ಹುರುಳಿ, ಭತ್ತ, ಭತ್ತದ ಹುಲ್ಲನ್ನು ಕೊಡಲಾಗುತಿತ್ತು. ಇದೀಗ ನಾಡಹಬ್ಬ ದಸರಾಗೆ ಬಂದಿರುವ ಈ ಆನೆಗಳಿಗೆ ವಿಶೇಷ ಆಹಾರ ನೀಡಲಾಗುತ್ತಿದೆ.
ಇದು ದಸರಾ ಗಜಪಡೆಗೆ ನೀಡುತ್ತಿರುವ ಅದ್ಧೂರಿ ಭೋಜನ. ಹಲವು ಬಗೆ ಕಾಳುಗಳನ್ನು ಬೇಯಿಸಿ ಬೆಣ್ಣೆ, ತರಕಾರಿ ಜೊತೆ ಮುದ್ದೆ ಮಾಡಿ ಆನೆಗಳಿಗೆ ಕೊಡಲಾಗುತ್ತಿದೆ. ಇದರ ರುಚಿಗೆ ಈ ಆನೆಗಳು ಸಖತ್ ಖುಷಿಯಾಗಿವೆ.
ಉದ್ದಿನ ಕಾಳು, ಹೆಸರು ಕಾಳು, ಗೋದಿ, ಕುಸುಬಲಕ್ಕಿಯನ್ನು ಸುಮಾರು ಮೂರ್ನಾಲ್ಕು ತಾಸು ಚೆನ್ನಾಗಿ ಬೇಯಿಸಲಾಗುತ್ತದೆ. ಇದನ್ನು ಉಂಡೆ ಮಾಡಿ ಪ್ರತಿದಿನ ಬೆಳಿಗ್ಗೆ, ಸಂಜೆ ನೀಡಲಾಗುತ್ತಿದೆ.
ಇದರ ಜೊತೆ ಸೌತೆಕಾಯಿ, ಬೀಟ್ರೋಟ್, ಕ್ಯಾರೇಟ್, ಕೋಸು, ಮೂಲಂಗಿ ಮೊದಲಾದ ತರಕಾರಿಗಳನ್ನು ಕೊಡಲಾಗುತ್ತದೆ. ಇದೆಲ್ಲವನ್ನೂ ಭತ್ತದ ಹುಲ್ಲಿನಲ್ಲಿ ಕಟ್ಟಿ ಆನೆಗಳ ತೂಕಕ್ಕೆ ತಕ್ಕಂತೆ ನೀಡಬೇಕಾಗಿದ್ದಕ್ಕಿಂತ ಕೊಂಚ ಹೆಚ್ಚೇ ತಿನ್ನಿಸಲಾಗುತ್ತಿದೆ. ಇದು ಆನೆಗಳ ಆರೋಗ್ಯ ಹಾಗೂ ತೂಕ ಹೆಚ್ಚಿಸಲು ಸಹಕಾರಿಯಾಗಲಿದೆ.
ಈ ಮೂಲಕ ದಸರಾ ಗಜಪಡೆಗಳನ್ನು ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಸಿದ್ದಪಡಿಸಲಾಗುತ್ತಿದೆ. ನಾಡಿನ ರಾಜಾತಿಥ್ಯ ಪಡೆದು ಜಂಬೂಸವಾರಿ ಗಜಪಡೆ ಪುಲ್ ಖುಷಿಯಾಗಿವೆ.
Published On - 5:35 pm, Fri, 30 August 24