ಕಾಂಗ್ರೆಸ್​ನವರಿಗೆ ಕರ್ನಾಟಕದ ಬಗ್ಗೆ ಚಿಂತೆಯಿಲ್ಲ, ಜೋಕರ್​​ನನ್ನು ಪ್ರಧಾನಿ ಮಾಡುವುದಷ್ಟೇ ಯತ್ನ; ಬಸನಗೌಡ ಪಾಟೀಲ್ ವಾಗ್ದಾಳಿ

| Updated By: ಗಣಪತಿ ಶರ್ಮ

Updated on: Sep 25, 2023 | 2:55 PM

ರಾಹುಲ್‌ ಗಾಂಧಿ ಅಂದರೆ ಇಂಟರ್​​ನ್ಯಾಶನಲ್‌ ಜೋಕರ್‌ ಇದ್ದಂತೆ. ಅಂಥವರನ್ನು ಪ್ರಧಾನಮಂತ್ರಿ ಮಾಡಲು ಇಂದು ನಮ್ಮ ರಾಜ್ಯವನ್ನು ಬಲಿ ಕೊಡುತ್ತಿದ್ದಾರೆ. ಬರಗಾಲ ಘೋಷಣೆ ಮಾಡಬೇಕಲ್ಲಾ? ನಾನು ಮೊನ್ನೆ ರಾಯಚೂರು ಜಿಲ್ಲೆಗೆ ಹೋಗಿದ್ದೆ. ತಿಂಥಣಿ ಬ್ರಿಜ್‌ನಲ್ಲಿ ಪಕ್ಷಿಗಳಿಗೂ ಸಹ ಕುಡಿಯಲು ನೀರಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್​ನವರಿಗೆ ಕರ್ನಾಟಕದ ಬಗ್ಗೆ ಚಿಂತೆಯಿಲ್ಲ, ಜೋಕರ್​​ನನ್ನು ಪ್ರಧಾನಿ ಮಾಡುವುದಷ್ಟೇ ಯತ್ನ; ಬಸನಗೌಡ ಪಾಟೀಲ್ ವಾಗ್ದಾಳಿ
ಬಸನಗೌಡ ಪಾಟೀಲ್ ಯತ್ನಾಳ್
Follow us on

ವಿಜಯಪುರ, ಸೆಪ್ಟೆಂಬರ್ 25: ಕರ್ನಾಟಕ ಕಾಂಗ್ರೆಸ್ ಸರ್ಕಾರದ (Congress Government) ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal), ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹೇಳಿದ್ದಾರೆ. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬರಗಾಲ ಘೋಷಣೆ ಮಾಡಲು ತಯಾರಿಲ್ಲ. ಕಾವೇರಿ ನೀರನ್ನು ಅವ್ಯಾಹತವಾಗಿ ಬಿಡುತ್ತಿದ್ದಾರೆ. ಅವರಿಗೆ ಕರ್ನಾಟಕದ ಬಗ್ಗೆ ಚಿಂತನೆಯೇ ಇಲ್ಲ. ಅವರು ಕೇವಲ ಒಬ್ಬ ಜೋಕರ್​​​ನನ್ನು ಪ್ರಧಾನಮಂತ್ರಿ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಜೋಕರ್​​ಗೆ ಹೋಲಿಸಿದ್ದಾರೆ.

ರಾಹುಲ್‌ ಗಾಂಧಿ ಅಂದರೆ ಇಂಟರ್​​ನ್ಯಾಶನಲ್‌ ಜೋಕರ್‌ ಇದ್ದಂತೆ. ಅಂಥವರನ್ನು ಪ್ರಧಾನಮಂತ್ರಿ ಮಾಡಲು ಇಂದು ನಮ್ಮ ರಾಜ್ಯವನ್ನು ಬಲಿ ಕೊಡುತ್ತಿದ್ದಾರೆ. ಬರಗಾಲ ಘೋಷಣೆ ಮಾಡಬೇಕಲ್ಲಾ? ನಾನು ಮೊನ್ನೆ ರಾಯಚೂರು ಜಿಲ್ಲೆಗೆ ಹೋಗಿದ್ದೆ. ತಿಂಥಣಿ ಬ್ರಿಜ್‌ನಲ್ಲಿ ಪಕ್ಷಿಗಳಿಗೂ ಸಹ ಕುಡಿಯಲು ನೀರಿಲ್ಲ. ಅಷ್ಟು ಭಯಾನಕ ಬರಗಾಲವಿದೆ. ರೈತರಿಗೆ ಸರಿಯಾದ ರೀತಿಯಲ್ಲಿ ವಿದ್ಯುತ್‌ ಸಿಗುತ್ತಿಲ್ಲ. ರೈತರ ಪಂಪ್‌ಸೆಟ್‌ಗಳು ಬಂದ್‌ ಆಗಿವೆ. ಮೂರು ತಾಸು, ಎರಡೂವರೆ ತಾಸು ವಿದ್ಯುತ್, ಅದೂ ರಾತ್ರಿ ಕೊಡುತ್ತಾರೆ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಲ್ಲಾ ರಂಗದಲ್ಲಿ ವಿಫಲವಾಗಿದೆ. ಕೇವಲ ಮೂರು ನಾಲ್ಕು ತಿಂಗಳುಗಳಲ್ಲಿಯೇ ವಿಫಲವಾಗಿದೆ ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.

ಇಡೀ ರಾಜ್ಯದ ಜನರನ್ನ ಮೋಸ ಮಾಡಿರುವ ಡಿಕೆಶಿ, ಕಾಂಗ್ರೆಸ್; ಯತ್ನಾಳ್ ಕಿಡಿ

ಇವತ್ತು ಕರ್ನಾಟಕದಲ್ಲಿ ಅರಾಜಕತೆ ನಿರ್ಮಾಣ ಆಗುತ್ತಿದೆ. ಇವರ ಒಂದು ತಪ್ಪು ನೀತಿಯಿಂದಾಗಿ, ದುರಹಂಕಾರ, ಭ್ರಷ್ಟಾಚಾರ ಹೆಚ್ಚಾಗಿದೆ. ಬಹಳ ಸಾತ್ವಿಕರಂತೆ ನಮ್ಮ ಉಪಮುಖ್ಯಮಂತ್ರಿಗಳು ಬಹಳ ಮಾಣಿಕರಾಗಿರಬೇಕೆಂದು ಅಧಿಕಾರಿಗಳಿಗೆ ಹೇಳುತ್ತಾರೆ. ಹದಿನೈದು ಪರ್ಸೆಂಟಿಗಿಂತ ಕಡಿಮೆ ಕಮೀಷನ್‌ ಅದೇ ಉಪಮುಖ್ಯಮಂತ್ರಿ ತಗೊಳ್ಳೋದಿಲ್ಲ. ಎಲ್ಲಾ ಕಂಟ್ರಾಕ್ಟರ್ಸ್‌ ಅದನ್ನೇ ಹೇಳುತ್ತಿದ್ದಾರೆ. ಬಿಜೆಪಿಯವರ ಮೇಲೆ ನಲವತ್ತು ಪರ್ಸೆಂಟ್‌ ಹೇಳಿದ್ದರ ಬಗ್ಗೆ ಸುಳ್ಳು ಹೇಳಿದ್ದೆ ಎಂದು ಅವರೇ ಒಪ್ಕೊಂಡಿದ್ದಾರೆ. ಒಂದು ಇಂಟರ್‌ವ್ಯೂನಲ್ಲಿ, ಬಿಜೆಪಿಯವರಿಗೆ ಸುಳ್ಳು ಹೇಳಲು ಬಂದಿಲ್ಲ, ನಾವು ಟೊಪ್ಪಿಗೆ ಹಾಕಿ ಆರಿಸಿ ಬಂದಿದ್ದೇವೆ ಅಂತ ಅವರೇ ಒಪ್ಪಿಕೊಂಡಿದ್ದಾರೆ. ಅಂದರೆ ಇವರು ಇಡೀ ರಾಜ್ಯದ ಜನರನ್ನ ಮೋಸ ಮಾಡಿದ್ದಾರೆ. ಅದಕ್ಕೆ ಇವರಿಗೆ ಯಾವುದೇ ರೀತಿಯಲ್ಲಿ ಅಧಿಕಾರದಲ್ಲಿ ಮುಂದುವರೆಯುವ ನೈತಿಕ ಹಕ್ಕು ಕಾಂಗ್ರೆಸ್ಸಿಗಿಲ್ಲ ಎಂದು ಯತ್ನಾಳ್ ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ತಮಿಳುನಾಡಿಗೆ ಹರಿದ ಕಾವೇರಿ: ರಾಜ್ಯ ಸರ್ಕಾರ ಕೈಗೊಂಡ ನಿರ್ಧಾರ ದುರಂತ ಎಂದ ಹೆಚ್​ಡಿ ದೇವೇಗೌಡ

ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಜನತಾ ದರ್ಶನ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಅದರಿಂದ ಏನಾಗುವುದಿದೆ? ಈ ಗ್ಯಾರಂಟಿ ಬಿಟ್ಟರೆ ಸರಕಾರದ ಬಳಿ ಹಣವೇ ಇಲ್ಲ ಏನ್ಮಾಡೋದು? ಅಭಿವೃದ್ದಿ ಎಲ್ಲಿ ಆಗುತ್ತಿದೆ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಒಂದು ರೂಪಾಯಿ ಕೊಟ್ಟಿಲ್ಲ. ಅಭಿವೃದ್ದಿನೇ ಇಲ್ಲ, ಯಾವುದೇ ಬಿಲ್‌ಗಳು ಸಹಿತ ಪಾಸ್ ಆಗುತ್ತಿಲ್ಲ. ಕಾಂಟ್ರಾಕ್ಟರುಗಳ ಬಿಲ್‌ ಕೊಡುತ್ತಿಲ್ಲ. ಜನತಾ ದರ್ಶನವೆಂಬ ಶೋ ಮಾಡುತ್ತಾರೆ, ಮನವಿ ಪತ್ರ ತಗೋಳ್ಳುತ್ತಾರೆ. ಪರಿಶೀಲಿಸಿ, ಪರಿಶೀಲಿಸಿ, ಕ್ರಮ ಕೈಗೊಳ್ಳಿ ಎಂದು ಇಷ್ಟು ಬರೆಯುತ್ತಾರೆ. ಡಿಸಿ ಏನು ಮಾಡಬೇಕು? ಎಸ್ಪಿ ಏನು ಮಾಡಬೇಕು. ಹಣವಿದ್ದರೆ ಮಾತ್ರ ಏನಾದರೂ ಮಾಡುತ್ತಾರೆ ಎಂದು ಹೇಳಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ