ಸುಳ್ಳ ಎಂದು ಜಗತ್ತಿಗೇ ಪ್ರಸಿದ್ಧಿಯಾಗಿರೋದು ಸಿದ್ದರಾಮಯ್ಯ: ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

| Updated By: ಗಣಪತಿ ಶರ್ಮ

Updated on: Oct 19, 2023 | 4:01 PM

ಸಚಿವ ರಾಮಲಿಂಗಾರೆಡ್ಡಿ ಅವರೇ ಮಳ್ಳ ಯಾರು ಎಂದು ಹೇಳಿ? ಎಲ್ಲರೂ ನಿಮ್ಮನ್ನೇ ಮಳ್ಳ ಅಂತ ಹೇಳುತ್ತಿದ್ದಾರೆ. ಸುಳ್ಳ ಅಂದರೆ ಜಗತ್ತಿಗೇ ಪ್ರಸಿದ್ಧಿಯಾಗಿರೋದು ಸಿದ್ದರಾಮಯ್ಯ. ನಿಮ್ಮ ವಿಚಾರ ತಂದು ನಮಗೆ ಅಂಟಿಸಬೇಡಿ, ನಿಮ್ಮ ಪಟ್ಟ ನೀವೇ ಇಟ್ಕೊಳ್ಳಿ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಾ ಪ್ರಹಾರ ನಡೆಸಿದ್ದಾರೆ.

ಸುಳ್ಳ ಎಂದು ಜಗತ್ತಿಗೇ ಪ್ರಸಿದ್ಧಿಯಾಗಿರೋದು ಸಿದ್ದರಾಮಯ್ಯ: ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ
ಛಲವಾದಿ ನಾರಾಯಣಸ್ವಾಮಿ
Follow us on

ಬೆಂಗಳೂರು, ಅಕ್ಟೋಬರ್ 19: ಬಿಜೆಪಿಯವರು ಸುಳ್ಳ ಮಳ್ಳ ನಾಯಕರು ಎಂಬ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿಕೆಗೆ ಬಿಜೆಪಿ ಎಂಎಲ್​ಸಿ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಜನರಿಗೆ ಸುಳ್ಳ ಯಾರು ಮಳ್ಳ ಯಾರು ಎಂಬುದು ಗೊತ್ತಿದೆ. ಮೆತ್ತಮೆತ್ತಗೆ ಏನೇನೋ ಮಾಡುವವರನ್ನು ಮಳ್ಳ ಎಂದು ಕರೆಯುತ್ತಾರೆ. ಸಚಿವ ರಾಮಲಿಂಗಾರೆಡ್ಡಿ ಅವರೇ ಮಳ್ಳ ಯಾರು ಎಂದು ಹೇಳಿ? ಎಲ್ಲರೂ ನಿಮ್ಮನ್ನೇ ಮಳ್ಳ ಅಂತ ಹೇಳುತ್ತಿದ್ದಾರೆ. ಸುಳ್ಳ ಅಂದರೆ ಜಗತ್ತಿಗೇ ಪ್ರಸಿದ್ಧಿಯಾಗಿರೋದು ಸಿದ್ದರಾಮಯ್ಯ. ನಿಮ್ಮ ವಿಚಾರ ತಂದು ನಮಗೆ ಅಂಟಿಸಬೇಡಿ, ನಿಮ್ಮ ಪಟ್ಟ ನೀವೇ ಇಟ್ಕೊಳ್ಳಿ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ಅರಿಶಿನ ಕುಂಕುಮ ಇಲ್ಲದೆ ಯಾವುದಾದರೂ ಪೂಜೆ ನೋಡಿದ್ದೀರಾ? ಸಿಎಂ ಸಿದ್ದರಾಮಯ್ಯಗೆ ಅರಿಶಿನ ಕುಂಕುಮ ಕಂಡರೆ ಆಗದೇ ಇರಬಹುದು. ಅರಿಶಿನ ಕುಂಕುಮ ಹಿಂದುತ್ವದ ಅವಿಭಾಜ್ಯ ಅಂಗವಾಗಿದೆ ಎಂದು ವಿಧಾನಸೌಧದಲ್ಲಿ ಅವರು ಹೇಳಿದ್ದಾರೆ.

ಸಿಬಿಐ ತನಿಖೆ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ರಾಜೀನಾಮೆಗೆ ಬಿಜೆಪಿ ನಾಯಕರು ಆಗ್ರಹಿಸಿದ್ದಕ್ಕೆ ರಾಜ್ಯ ಬಿಜೆಪಿ ನಾಯಕರಿಗೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದರು. ರಾಜ್ಯ ಬಿಜೆಪಿಯವರು ಸುಳ್ಳ ಮಳ್ಳ ನಾಯಕರು ಎಂದಿದ್ದರು. ಅಲ್ಲದೆ, ಈ ಹಿಂದೆ ಬಿಎಸ್ ಯಡಿಯೂರಪ್ಪ ಮೇಲೆ ಸಿಬಿಐ ತನಿಖೆಗೆ ಸೂಚಿಸಲಾಗಿತ್ತು. ಬೇರೆ ಬೇರೆಯವರ ಮೇಲೂ ಸಿಬಿಐ ತನಿಖೆ ನಡೆದಿತ್ತು. ಅವರೆಲ್ಲಾ ರಾಜೀನಾಮೆ ಕೊಟ್ಟಿದ್ರಾ ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದರು. ಇದಕ್ಕೆ ಛಲವಾದಿ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಕುಮಾರಸ್ವಾಮಿಗೆ ಬುದ್ಧಿ ಸ್ವಲ್ಪ ಹೆಚ್ಚು ಕಡಿಮೆಯಾಗಿದೆ ಎಂದಿದ್ದೇಕೆ ಡಿಕೆ ಶಿವಕುಮಾರ್?

ಈ ಮಧ್ಯೆ, ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್​ ಅಸ್ತು ವಿಚಾರವಾಗಿ ಪ್ರತಿಕ್ರಿಯಿಸಿದ ರಾಜ್ಯ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್, ರಾಜೀನಾಮೆಗೆ ಆಗ್ರಹಿಸಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತ ಕೊಡುತ್ತೇನೆ ಎಂದು ನೀವೇ ಹೇಳ್ತಾ ಇದ್ರಿ. ಹೀಗಾಗಿ ಈಗ ನೈತಿಕ ಹೊಣೆ ಹೊತ್ತು ಡಿಕೆ ರಾಜೀನಾಮೆ ನೀಡಬೇಕು. ನಿಮಗೆ ನೈತಿಕತೆ, ಪ್ರಾಮಾಣಿಕತೆ ಅನ್ನೋದು ಇದ್ದರೆ ರಾಜೀನಾಮೆ ನೀಡಿ. ನೀವು ದೋಷಮುಕ್ತ ಎಂದು ಸಾಬೀತು ಆದರೆ ಡಿಸಿಎಂ ಆಗಿ ಮುಂದುವರಿಯಲು ತಕರಾರಿಲ್ಲ ಎಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಎಂಎಲ್​ಸಿ ರವಿಕುಮಾರ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ