‘ಅಲಿಂಗ ಚಳುವಳಿ’ ಘೋಷಿಸಿದ ಸಿಎಂ ಇಬ್ರಾಹಿಂ; ಜೆಡಿಎಸ್ ಸೇರುವ ಬಗ್ಗೆಯೂ ಮಾಹಿತಿ ನೀಡಿದ ನಾಯಕ

ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಅಲಿಂಗ ಚಳುವಳಿಯನ್ನು ಘೋಷಿಸಿದ್ದಾರೆ. ಜೆಡಿಎಸ್ ಸೇರುವ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ. ಏನಿದು ‘ಅಲಿಂಗ ಚಳುವಳಿ’? ಇಬ್ರಾಹಿಂ ಹೇಳಿದ್ದೇನು? ಇಲ್ಲಿದೆ ಮಾಹಿತಿ.

ಅಲಿಂಗ ಚಳುವಳಿ ಘೋಷಿಸಿದ ಸಿಎಂ ಇಬ್ರಾಹಿಂ; ಜೆಡಿಎಸ್ ಸೇರುವ ಬಗ್ಗೆಯೂ ಮಾಹಿತಿ ನೀಡಿದ ನಾಯಕ
ಸಿಎಂ ಇಬ್ರಾಹಿಂ
Edited By:

Updated on: Feb 05, 2022 | 12:24 PM

ಬಹುಸಂಖ್ಯಾತರು ಹಿಂದುಳಿದವರನ್ನು ಅಪ್ಪಿಕೊಳ್ಳುವ ‘ಅಲಿಂಗ ಚಳುವಳಿ’ಯನ್ನು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ (CM Ibrahim) ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ಅವರು ಮಾತನಾಡಿದರು. ಮನೆಯಲ್ಲಿ ಧಾರ್ಮಿಕ ಮುಖಂಡರ ಸಭೆ ನಡೆಸಿದ್ದೇನೆ ಎಂದು ಹೇಳಿರುವ ಇಬ್ರಾಹಿಂ, ‘ಅಲಿಂಗ ಚಳುವಳಿ’ (Alinga Movement) ಮಾಡುತ್ತೇವೆ.  ಅಲ್ಪಸಂಖ್ಯಾತರು, ಲಿಂಗಾಯತರು, ಗೌಡರನ್ನು (ಅಲಿಂಗೌ) ಒಂದಾಗಿಸಬೇಕು. ಬಹುಸಂಖ್ಯಾತರು ದಲಿತರನ್ನು, ಹಿಂದುಳಿದವರನ್ನು ಆಲಿಂಗನ ಮಾಡಿಕೊಳ್ಳಬೇಕು. ಇದೇ ‘ಅಲಿಂಗ ಚಳುವಳಿ’. ಇದೊಂದು ಸಾಮಾಜಿಕ ಚಳುವಳಿ. ಬಿರುಕುಗಳು ಹೋಗಬೇಕು, ದಲಿತರಲ್ಲಿ ಒಳ್ಳೆಯ ಭಾವನೆಗಳು ಬರಬೇಕು. ಅಂದು ಬಸವಣ್ಣ ಮಾಡಿದ ಕೆಲಸವನ್ನು ಈಗ ಕರ್ನಾಟಕದಲ್ಲಿ ಮತ್ತೆ ಮಾಡಬೇಕು ಎಂದು ಹೊರಟಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ ಇಬ್ರಾಹಿಂ. ಅಲ್ಲದೇ ಇದಕ್ಕಾಗಿ ಬಿಜಾಪುರದಿಂದ ಸಮಾವೇಶ ಮಾಡುತ್ತೇವೆ ಎಂದು ಹೇಳಿರುವ ಅವರು, ಇದು ರಾಜಕೀಯೇತರ ಕಾರ್ಯಕ್ರಮ. ನಾನೇ ಅದರ ಅಧ್ಯಕ್ಷ ಆಗಬೇಕು ಅಂತೇನಿಲ್ಲ. ಸ್ವಾಮಿಜಿಗಳೇ ಅದನ್ನು ನಡೆಸಿಕೊಂಡು ಹೋಗುತ್ತಾರೆ ಎಂದು ಹೇಳಿದ್ದಾರೆ. ಈ ಚಳುವಳಿಗೆ ಎಲ್ಲಾ ಮಠಾಧೀಶರು ಬೆಂಬಲ ನೀಡಿದ್ದಾರೆ ಎಂದು ಇಬ್ರಾಹಿಂ ಮಾಹಿತಿ ನೀಡಿದ್ದಾರೆ.

ಅಹಿಂದ ಹಾಗೂ ಅಲಿಂಗ ಚಳುವಳಿಗಳು ಬೇರೆ. ಅಲಿಂಗ ಒಂದು ಸಾಮಾಜಿಕ ಚಳುವಳಿ. ಮಠದ ಸ್ವಾಮಿಗಳು ಈ ಚಳುವಳಿಯನ್ನು ನಡೆಸುತ್ತಾರೆ. ಇದು ರಾಜಕೀಯದಿಂದ ಹೊರತಾಗಿದ್ದು, ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ನಡೆಯಲಿದೆ ಎಂದು ಮತ್ತಷ್ಟು ಮಾಹಿತಿ ನೀಡಿದ್ದಾರೆ ಇಬ್ರಾಹಿಂ.

ಜೆಡಿಎಸ್ ಸೇರುವ ಬಗ್ಗೆ ಮಾಹಿತಿ ನೀಡಿದ ಇಬ್ರಾಹಿಂ:

ಫೆಬ್ರವರಿ 14ರಂದು ಹುಬ್ಬಳ್ಳಿ ಸಭೆ ನಂತರ ಜೆಡಿಎಸ್​ ಸೇರುವೆ ಎಂದು ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಹೇಳಿದ್ದಾರೆ. ಬೆಂಗಳೂರಿನಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ತೊರೆದು ಜೆಡಿಎಸ್​ ಸೇರಲು ದಿನಾಂಕ ಪ್ರಕಟಿಸುವೆ. ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಡಲು ತೀರ್ಮಾನಿಸಿದ್ದೇ‌ನೆ. ಮತಾಂತರ ನಿಷೇಧ ಬಿಲ್​ಗೆ ನನ್ನಿಂದಾಗಿ ಹಿನ್ನಡೆ ಆಗಬಾರದು ಅಂತ ಸದ್ಯಕ್ಕೆ ರಾಜೀನಾಮೆ ಕೊಟ್ಡಿಲ್ಲ ಎಂದು ಅವರು ಹೇಳಿದ್ದಾರೆ. ನಾನು ಅಲ್ಲಾಡಿದ್ದಕ್ಕೆ ನಳಪಡ್​ಗೆ ಅಧ್ಯಕ್ಷ ಸ್ಥಾನ, ಖಾದರ್​​ಗೆ ಉಪನಾಯಕ ಸ್ಥಾನ ಸಿಕ್ಕಿದೆ. ನಾನು ಬಿಟ್ಟರೆ ಇನ್ನು ಕೆಲವರಿಗೆ ಅವಕಾಶ ಸಿಗುತ್ತದೆ. ಇಬ್ರಾಹಿಂಗೆ ಖಾದರ್ ಸರಿಸಮಾನ ಅನ್ನೋದಾದರೆ, ಸಿದ್ದರಾಮಯ್ಯಗೆ ವಿಶ್ವನಾಥ್ ಸಮ; ಅವರನ್ನ ಸಿಎಂ ಮಾಡ್ತಾರಾ? ಎಂದು ಇಬ್ರಾಹಿಂ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಕೃಷ್ಣ ಬೈರೇಗೌಡ ಪರ್ಯಾಯ ನಾಯಕರಲ್ವಾ? ಹಾಗಾದರೆ ಅವರು ಒಕ್ಕಲಿಗರೆ ಅಲ್ವಾ? ಎಂದು ಕೇಳಿರುವ ಇಬ್ರಾಹಿಂ, ಅವರಿಗೊಂದು ನಮಗೊಂದು ನ್ಯಾಯವೇ ಎಂದು ಪ್ರಶ್ನಿಸಿದ್ದಾರೆ. ನಾನು ಸೆಂಟ್ರಲ್ ಮಿನಿಸ್ಟರ್ ಆಗಿದ್ದಾಗ ಟಿಕೆಟ್ ಕೇಳೋಕೆ ನನ್ನ ಹತ್ತಿರ ಬಂದಿದ್ದರು‌. ನಾನು ಭಾಷಣ ಮಾಡುತ್ತಿದ್ದರೆ ಸಿದ್ದರಾಮಯ್ಯನವರು ಮೋಟರ್ ಸೈಕಲ್ ನಲ್ಲಿ ಬಂದು ನನ್ನ ಭಾಷಣ ಕೇಳಿ ಹೋಗ್ತಿದ್ದರು ಎಂದಿದ್ದಾರೆ ಇಬ್ರಾಹಿಂ.

ಹಿಜಾಬ್ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಇಬ್ರಾಹಿಂ:

ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ವಿವಾದಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಸಿಎಂ ಇಬ್ರಾಹಿಂ, ವಿವಾದ ಸೃಷ್ಟಿಸುವಲ್ಲಿ ರಾಜ್ಯ ಸರ್ಕಾರ ಮುಂಚೂಣಿಯಲ್ಲಿದೆ ಎಂದು ಹೇಳಿದ್ದಾರೆ. ಯಾವುದೇ ವಿವಾದದಲ್ಲಿ ಸರ್ಕಾರಕ್ಕೆ ಯಶಸ್ಸು ಸಿಗುತ್ತಿಲ್ಲ. ಈಗ ಹಿಜಾಬ್ ವಿವಾದ ಶುರು ಆಗಿದೆ ಎಂದಿರುವ ಇಬ್ರಾಹಿಂ ವಿವಾದವನ್ನು ಅಸಮರ್ಪಕವಾಗಿ ನಿರ್ವಹಿಸುತ್ತಿರುವುದರ ಬಗ್ಗೆ ಕಿಡಿಕಾರಿದ್ದಾರೆ. ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಕರ್ನಾಟಕದ ವಿವಾದ ಗಂಭೀರವಾಗಿ ಪ್ರಸ್ತಾಪವಾಗುತ್ತಿದೆ. ದೇಶದ ಮಾನವನ್ನು ಎಲ್ಲಿ ತೆಗೆದುಕೊಂಡು ಹೋಗುತ್ತಿದ್ದೀರಿ? ಎಂದು ಅವರು ಖಾರವಾಗಿ ನುಡಿದಿದ್ದಾರೆ. ಇದನ್ನು ಅಂತ್ಯಗೊಳಿಸಬೇಕು ಎಂದು ಸರ್ಕಾರಕ್ಕೆ ಇಬ್ರಾಹಿಂ ಮನವಿ ಮಾಡಿದ್ದಾರೆ.

YouTube video player

ಇದನ್ನೂ ಓದಿ:

ಹೃದಯಾಘಾತದಿಂದ ಪದ್ಮಶ್ರೀ ಪುರಸ್ಕೃತ ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ್ ನಿಧನ; ಸರ್ಕಾರಿ ಗೌರವಗಳೊಂದಿಗೆ ಇಂದು ಸಂಜೆ 5 ಗಂಟೆಗೆ ಅಂತ್ಯಕ್ರಿಯೆ

ಮುಸ್ಲಿಮರಿಗೂ ಸತ್ಯ ಗೊತ್ತಾಗಿ ಕಾಂಗ್ರೆಸ್​ನಿಂದ ದೂರವಾಗಿದ್ದಾರೆ: ಇಬ್ರಾಹಿಂ ಹೆಸರು ಪ್ರಸ್ತಾಪಿಸಿ ಟೀಕಿಸಿದ ಈಶ್ವರಪ್ಪ

Published On - 12:13 pm, Sat, 5 February 22

Loading...
Unable to load recommendations.
Follow Us