Congress CLP Meeting: ಬಸವರಾಜ ರಾಯರೆಡ್ಡಿಯ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ

ಪತ್ರ ಬರೆದ ಗುಂಪಿನಲ್ಲಿದ್ದ ಶಾಸಕರು ಮುಖ್ಯಮಂತ್ರಿಗಳ ಎದುರು ಮಾತನಾಡಲು ರಾಯರೆಡ್ಡಿಗೆ ಪಟ್ಟ ಕಟ್ಟಿದ್ದರು ಎನ್ನಲಾಗಿದೆ. ಆದರೆ, ಸಿದ್ದರಾಮಯ್ಯ ಅವರು ಭಾರಿ ಸಿಟ್ಟಾಗಿದ್ದು ಕಂಡ ಬಸವರಾಜ ರಾಯರೆಡ್ಡಿ ಮೌನವಾಗಿದ್ದರು.

Congress CLP Meeting: ಬಸವರಾಜ ರಾಯರೆಡ್ಡಿಯ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ
ಬಸವರಾಜ ರಾಯರೆಡ್ಡಿ & ಸಿದ್ದರಾಮಯ್ಯ
Updated By: Ganapathi Sharma

Updated on: Jul 27, 2023 | 10:22 PM

ಬೆಂಗಳೂರು: ಕೆಲವು ಮಂದಿ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕಾಂಗ್ರೆಸ್​ನ (Congress) ಕೆಲವು ಶಾಸಕರು ಮುಖ್ಯಮಂತ್ರಿಗಳಿಗೆ ಪತ್ರ ಬರೆದ ವಿಚಾರ ಗುರುವಾರ ರಾತ್ರಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅಸಮಾಧಾನಿತ ಶಾಸಕರ ವಿರುದ್ಧ ಕೆಂಡಾಮಂಡಲವಾದರು. ಬಹಿರಂಗ ಪತ್ರ ಬರೆದಿರುವುದಕ್ಕೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಅವರು, ಬಸವರಾಜ ರಾಯರೆಡ್ಡಿ (Basvaraj Rayareddi) ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಈ ವೇಳೆ ಮುಖ್ಯಮಂತ್ರಿಗಳ ಕೋಪಕ್ಕೆ ತೇಪೆ ಹಚ್ಚಲು ಮುಂದಾದ ಬಸವರಾಜ ರಾಯರೆಡ್ಡಿ, ‘ಸರ್ ನಾನಲ್ಲ ಪತ್ರ ಬರೆದಿದ್ದು. ಅವರು ಬರೆದಿರುವ ಪತ್ರಕ್ಕೆ ನಾನು ಸಹಿ ಹಾಕಿದ್ದೇನೆ ಅಷ್ಟೆ. ನಿಮ್ಮ ಗಮನ ಸೆಳೆಯಲು ಈ ರೀತಿ ಮಾಡಿದ್ದು ಅಷ್ಟೇ ಸರ್’ ಎಂದರು. ಆಗ ಮತ್ತಷ್ಟು ಗರಂ ಆದ ಸಿದ್ದರಾಮಯ್ಯ, ‘ನನ್ನ ಗಮನ ಸೆಳೆಯುವುದಕ್ಕಾದರೆ ನೇರವಾಗಿ ಬಂದು ಮಾತನಾಡಬೇಕಿತ್ತು. ಅದು ಬಿಟ್ಟು ಈ ರೀತಿಯೆಲ್ಲ ಏಕೆ ಮಾಡುತ್ತೀರಿ’ ಎಂದು ಕಿಡಿಕಾರಿದರು.

ಪತ್ರ ಬರೆದ ಗುಂಪಿನಲ್ಲಿದ್ದ ಶಾಸಕರು ಮುಖ್ಯಮಂತ್ರಿಗಳ ಎದುರು ಮಾತನಾಡಲು ರಾಯರೆಡ್ಡಿಗೆ ಪಟ್ಟ ಕಟ್ಟಿದ್ದರು ಎನ್ನಲಾಗಿದೆ. ಆದರೆ, ಸಿದ್ದರಾಮಯ್ಯ ಅವರು ಭಾರಿ ಸಿಟ್ಟಾಗಿದ್ದು ಕಂಡ ಬಸವರಾಜ ರಾಯರೆಡ್ಡಿ ಮೌನವಾಗಿದ್ದರು. ಇದರಿಂದಾಗಿ, ರಾಯರೆಡ್ಡಿ ಅವರನ್ನು ನಂಬಿ ವಿಷಯ ಪ್ರಸ್ತಾಪಿಸಲು ಮುಂದಾಗಿದ್ದ ಶಾಸಕರಿಗೆ ನಿರಾಶೆಯಾಯಿತು.

ಇದನ್ನೂ ಓದಿ: Congress CLP Meeting: ಸುಳ್ಳುಗಳಿಗೆ ದಾಳವಾಗಬೇಡಿ; ಶಾಸಕಾಂಗ ಸಭೆಯಲ್ಲಿ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

‘ಏಯ್, ಇಂತಹವರನ್ನು ನಂಬಿ ರಾಜಕೀಯ ಮಾಡಿದರೆ ಅಷ್ಟೇ, ಎಂದು ಗೊಣಗುತ್ತಲೇ ಕೆಲವು ಮಂದಿ ಕಾಂಗ್ರೆಸ್‌ ಶಾಸಕರು ಸಭೆಯಿಂದ ಹೊರಹೋದರು. ಇವರನ್ನು ನಂಬಿಕೊಂಡರೆ ಏನೂ ಮಾಡೋಕೆ ಆಗಲ್ಲ, ಎಲ್ಲಾ ವೇಸ್ಟ್ ಎಂದು ಕೆಲವು ಮಂದಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದು ಕಂಡುಬಂತು.

ಇದಕ್ಕೂ ಮುನ್ನ, ಶಾಸಕರನ್ನು ಉದ್ದೇಶಿಸಿ ಮಾತನಾಡಿದ್ದ ಸಿದ್ದರಾಮಯ್ಯ, ಪ್ರತಿಪಕ್ಷಗಳ ಸುಳ್ಳುಗಳಿಗೆ ದಾಳವಾಗಬೇಡಿ ಎಂದು ಹೇಳಿದ್ದು, ಏನೇ ಅಸಮಾಧಾನ ಇದ್ದರೂ ತಮ್ಮ ಬಳಿ ಖುದ್ದು ಚರ್ಚಿಸುವಂತೆ ಸೂಚಿಸಿದ್ದಾರೆ. ಎಷ್ಟು ಒತ್ತಡಗಳಿದ್ದರೂ ತಿಂಗಳಿಗೊಮ್ಮೆ ಶಾಸಕರ ಸಭೆ ಕರೆಯುತ್ತೇನೆ ಎಂದೂ ಭರವಸೆ ನೀಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ