ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಶುರುವಾಯ್ತು ಪ್ಲ್ಯಾನ್; ಹೆಚ್ಚುವರಿ ಡಿಸಿಎಂ ಆಗ್ರಹದ ಹಿಂದಿದೆ ಭರ್ಜರಿ ತಂತ್ರ!

ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ಡಿಸಿಎಂ ಹುದ್ದೆ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗು ಶುರುವಾಗಿದೆ. ಒಂದು ವರ್ಗ ಡಿಸಿಎಂ ಹುದ್ದೆಗೆ ಬೇಡಿಕೆ ಇಡುತ್ತಿದ್ದರೆ, ಕೆಪಿಸಿಸಿ ಅಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿರುವುದೇ ಅದಕ್ಕೆ ಕಾರಣ ಎಂಬ ಊಹಾಪೋಹಗಳೂ ಇವೆ. ರಾಜ್ಯ ಕಾಂಗ್ರೆಸ್ ರಾಜಕೀಯ ಬೆಳವಣಿಗೆಗಳ ಮಾಹಿತಿ ಇಲ್ಲಿದೆ.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಶುರುವಾಯ್ತು ಪ್ಲ್ಯಾನ್; ಹೆಚ್ಚುವರಿ ಡಿಸಿಎಂ ಆಗ್ರಹದ ಹಿಂದಿದೆ ಭರ್ಜರಿ ತಂತ್ರ!
ಡಿಕೆ ಶಿವಕುಮಾರ್ & ಸಿದ್ದರಾಮಯ್ಯ
Edited By:

Updated on: Jun 26, 2024 | 7:04 AM

ಬೆಂಗಳೂರು, ಜೂನ್ 26: ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಯ (DCM Post) ಆಗ್ರಹ ಕಾಂಗ್ರೆಸ್​​​​ನಲ್ಲಿ (Congress) ಸದ್ದು ಗದ್ದಲ ಗೊಂದಲ ಎಲ್ಲವನ್ನೂ ಎಬ್ಬಿಸುತ್ತಿದೆ. ಒಂದು ವರ್ಗ ಡಿಸಿಎಂ ಸ್ಥಾನಕ್ಕೆ ಆಗ್ರಹಿಸುತ್ತಿದ್ದರೆ ಮತ್ತೊಂದು ವರ್ಗ ಡಿಸಿಎಂ ಸ್ಥಾನಕ್ಕೆ ಯಾವುದೇ ಕಂಟಕ ಬಾರದಂತೆ ತಂತ್ರಗಾರಿಕೆ ಮಾಡುತ್ತಿದೆ. ಲೋಕಸಭೆ ಚುನಾವಣೆಗೆ ಮೊದಲು ಹೆಚ್ಚುವರಿ ಡಿಸಿಎಂ ಬೇಕೇಬೇಕು ಎಂಬ ಆಗ್ರಹದ ಹಿಂದೆ ಸಮುದಾಯಗಳನ್ನು ಸೆಳೆಯುವ ಲೆಕ್ಕಾಚಾರಗಳಿತ್ತು. ಆದರೆ ಚುನಾವಣೆ ಮುಗಿದ ಮೇಲೂ ಹೀಗೆ ಧ್ವನಿ ಎತ್ತಿದವರ ಹಿಂದೆ ಬೇರೆಯದೇ ಲೆಕ್ಕಾಚಾರಗಳಿವೆ. ಹೀಗಾಗಿ ಹೆಚ್ಚುವರಿ ಡಿಸಿಎಂ ಬಗ್ಗೆ ಹೈಕಮಾಂಡ್ ಮುಂದೆ ಪ್ರಸ್ತಾಪಿಸಲು ರಾಜ್ಯದ ನಾಯಕರ ಸಿದ್ಧತೆ ನಡೆಯುತ್ತಿದೆ.

ಅಧ್ಯಕ್ಷರ ಬದಲಾವಣೆಗೆ ಸೂಕ್ತ ಸಮಯ ಎನ್ನುತ್ತಿರುವ ನಾಯಕರು, ಹೆಚ್ಚುವರಿ ಡಿಸಿಎಂ ಬೇಡಿಕೆ ಹಿಂದಿನ ಅಸಲಿಯತ್ತೇ ಅಧ್ಯಕ್ಷಗಿರಿ ಬದಲಾವಣೆ ಎನ್ನುತ್ತಿದ್ದಾರೆ.‌ ಸಮುದಾಯವಾರು ಡಿಸಿಎಂ ಹುದ್ದೆ ಸೃಷ್ಟಿಸಿ ಎನ್ನುತ್ತಿರುವ ನಾಯಕರು, ಹೆಚ್ಚು ಡಿಸಿಎಂ ಕೇಳಿದರೆ, ಅಧ್ಯಕ್ಷ ಸ್ಥಾನ ಸಿಗಲಿದೆ ಎಂಬ ಲೆಕ್ಕಾಚಾರ ಇಟ್ಟುಕೊಂಡಿದ್ದಾರೆ.

ಈ ವರ್ಷದ ಅಂತ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ. ಅಷ್ಟರಲ್ಲಿ ಅಧ್ಯಕ್ಷರ ಬದಲಾವಣೆ ಆಗಬೇಕು ಎಂದು ನಾಯಕರು ಪಟ್ಟು ಹಿಡಿದಿದ್ದಾರೆ. ಒನ್ ಮ್ಯಾನ್ ಒನ್ ಪೋಸ್ಟ್ ಎಂಬ ಅಜೆಂಡಾ ಮೂಲಕ ಡಿಸಿಎಂ ಡಿಕೆ ಶಿವಕುಮಾರ್​ರನ್ನು ಕಟ್ಟಿ ಹಾಕಬೇಕು ಎಂಬುದು ತೆರೆಮರೆಯ ಕಸರತ್ತು. ಕಾಂಗ್ರೆಸ್​​ಗೆ ವೋಟು ಹಾಕಿದ ಸಮುದಾಯಕ್ಕೆ ಅಧಿಕಾರ ನೀಡಿ, ವೋಟು ಕೊಡದ ಸಮುದಾಯದ ನಾಯಕರಿಗೆ ಪಕ್ಷದಲ್ಲಿ ಮಣೆ ಯಾಕೆ? ಲೋಕಸಭೆ ಚುನಾವಣೆಯಲ್ಲಿ ಒಕ್ಕಲಿಗ, ಲಿಂಗಾಯತ ಮತಗಳು ಕೈಹಿಡಿದಿಲ್ಲ, ದಲಿತ, ಮುಸ್ಲಿಂ, ಹಿಂದುಳಿದ ಮತಗಳು ಹೆಚ್ಚು ಕಾಂಗ್ರೆಸ್​ಗೆ ಬಂದಿವೆ. ಈ ಸಮುದಾಯದ ನಾಯಕರಿಗೆ ಹೆಚ್ಚು ಅಧಿಕಾರ ನೀಡಬೇಕೆಂಬ ಕೂಗು ಇವರದ್ದು. ಈ ಸಮುದಾಯದವರಿಗೆ ಡಿಸಿಎಂ, ಅಧ್ಯಕ್ಷ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿರುವ ನಾಯಕರು, ಶೀಘ್ರ ಹೈಕಮಾಂಡ್ ನಾಯಕರನ್ನು ಭೇಟಿಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಬೆಲೆ ಏರಿಕೆ ವಿರುದ್ಧ ಭುಗಿಲೆದ್ದ ಆಕ್ರೋಶ: ನಿವಾಸಕ್ಕೆ ಮುತ್ತಿಗೆ ಹಾಕಲು ಕರ್ನಾಟಕ ಬಿಜೆಪಿ ತೀರ್ಮಾನ

ಹೀಗೆ ಒಂದು ವರ್ಗ ಅಧ್ಯಕ್ಷಗಿರಿಯ ಮೇಲೆ ದೃಷ್ಟಿ ನೆಟ್ಟಿದ್ದರೆ ಅತ್ತ ವಿನಯ್ ಕುಲಕರ್ಣಿ ನೇತೃತ್ವದ ಶಾಸಕರ ನಿಯೋಗ ಮತ್ತೊಂದು ಆಗ್ರಹ ಮಾಡುತ್ತಿದೆ. ಅಧ್ಯಕ್ಷರ ಬದಲಾವಣೆ ಮಾಡುವುದೇ ಆದರೆ ಲಿಂಗಾಯತ ಸಮುದಾಯಕ್ಕೆ ಅವಕಾಶ ನೀಡಿ ಎಂಬ ದಾಳ ಉರುಳಿಸಿದೆ. ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿರುವ ವಿನಯ್ ಕುಲಕರ್ಣಿ ಆ್ಯಂಡ್ ಟೀಂ ಲಿಂಗಾಯತ ನಾಯಕರಿಗೇ ಮಣೆ ಹಾಕಿ ಎಂಬ ದಾಳ ಹಾಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ