ಲೋಕಸಭೆ ಚುನಾವಣಾ ಅಖಾಡಕ್ಕೆ ಕಾಂಗ್ರೆಸ್ ಸಜ್ಜು: ಜಗದೀಶ್ ಶೆಟ್ಟರ್​ಗೆ ಹೈಕಮಾಂಡ್ ಬುಲಾವ್, ಕುತೂಹಲ ಮೂಡಿಸಿದ ಕೈ ನಡೆ

|

Updated on: Aug 01, 2023 | 3:22 PM

ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್​ ಸಕಲ ಸಿದ್ಧತೆ ಮಾಡಿಕೊಳ್ಳಲುತ್ತಿದೆ. ಇದಕ್ಕೆ ಪೂರಕವೆಂಬಂತೆ ಹೈಕಮಾಂಡ್​ ನಾಳೆ(ಆಗಸ್ಟ್ 2)ಕರ್ನಾಟಕ ಕಾಂಗ್ರೆಸ್ ನಾಯಕರ ಜೊತೆ ಮಹತ್ವದ ಸಭೆ ನಡೆಸಲಿದೆ. ಇನ್ನು ಈ ಸಭೆಗೆ ಜಗದೀಶ್ ಶೆಟ್ಟರ್​ಗೆ ಆಹ್ವಾನ ನೀಡಿದ್ದು ಕುತೂಹಲ ಮೂಡಿಸಿದೆ.

ಲೋಕಸಭೆ ಚುನಾವಣಾ ಅಖಾಡಕ್ಕೆ ಕಾಂಗ್ರೆಸ್ ಸಜ್ಜು: ಜಗದೀಶ್ ಶೆಟ್ಟರ್​ಗೆ ಹೈಕಮಾಂಡ್ ಬುಲಾವ್, ಕುತೂಹಲ ಮೂಡಿಸಿದ ಕೈ ನಡೆ
ಜಗದೀಶ್ ಶೆಟ್ಟರ್ ಕಾಂಗ್ರೆಸ್​ ಸೇರ್ಪಡೆ ಫೋಟೋ
Follow us on

ಬೆಂಗಳೂರು, (ಆಗಸ್ಟ್ 01): ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) 135 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅಧಿಕಾರಕ್ಕೇರಿರುವ ಕಾಂಗ್ರೆಸ್ (Congress), ಇದೀಗ ಮುಂಬರುವ ಲೋಕಸಭಾ ಚುನಾವಣಾ (Loksabha Elections 2024) ಅಖಾಡಕ್ಕೆ ಸಜ್ಜಾಗುತ್ತಿದೆ. ಕರ್ನಾಟಕದ ಒಟ್ಟು 28 ಲೋಕಸಭಾ ಕ್ಷೇತ್ರಗಳಲ್ಲಿ ಈ ಬಾರಿ 10ರಿಂದ 15 ಸ್ಥಾನಗಳಲ್ಲಿ ಗೆಲ್ಲುವ ಗುರಿ ಹೊಂದಿದೆ. ಹೀಗಾಗಿ ಈಗಿನಿಂದಲೇ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇನ್ನು ಹೈಕಮಾಂಡ್​ ಸಹ ರಾಜ್ಯ ನಾಯಕರನ್ನು ಚುನಾವಣೆಗೆ ಸಜ್ಜುಗೊಳಿಸುತ್ತಿದೆ. ಈ ಬಗ್ಗೆ ತಂತ್ರಗಾರಿಕೆ ಕುರಿತು ಚರ್ಚಿಸಲು ಹೈಕಮಾಂಡ್, ರಾಜ್ಯ ಕಾಂಗ್ರೆಸ್​ನ ಪ್ರಮುಖ ನಾಯರಕರನ್ನು ನಾಳೆ ದೆಹಲಿಗೆ ಬರುವಂತೆ ಹೇಳಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ಸೇರಿದಂತೆ ಹಲವು ನಾಯಕರು ದೆಹಲಿ ತೆರಳಲಿದ್ದು, ನಾಳೆ (ಆಗಸ್ಟ್ 02) ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಯಲಿದೆ. ಇನ್ನು ಈ ಸಭೆಗೆ ಮಾಜಿ ಸಿಎಂ, ಜಗದಿಶ್ ಶೆಟ್ಟರ್ (Jagadish Shettar)​ ಅವರನ್ನು ಆಹ್ವಾನ ಕೊಟ್ಟಿರುವುದು ತೀವ್ರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಕಾಂಗ್ರೆಸ್ ಅಸಮಾಧಾನ ಕಿಚ್ಚು ದಿಲ್ಲಿಗೆ ಶಿಫ್ಟ್, ಆ.2ಕ್ಕೆ ಮೀಟಿಂಗ್.. ‘ಸಮನ್ವಯ’ಕ್ಕೆ ‘ಹೈ’ ಪ್ಲ್ಯಾನ್

ಮಾಜಿ ಸಿಎಂ ಜಗದೀಶ್​ ಶೆಟ್ಟರ್​ಗೂ ಹೈಕಮಾಂಡ್​ ಬುಲಾವ್​ ನೀಡಿದ್ದರಿಂದ ಅವರು ಇಂದು ಹುಬ್ಬಳ್ಳಿಯಿಂದ ನವದೆಹಲಿಗೆ ತೆರಳಲಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕಳೆದ ಮೂರ್ನಾಲ್ಕು ದಿನಗಳ ಹಿಂದೆ AICC ಕಚೇರಿಯಿಂದ ಕರೆ ಬಂದಿತ್ತು. ಹಾಗಾಗಿ ಇವತ್ತು ದೆಹಲಿಗೆ ಹೊರಟಿದ್ದೇನೆ. ಸುಮ್ನೆ ಅಸಮಾಧಾನಕ್ಕೆ ಟ್ಯಾಗ್ ಮಾಡುತ್ತಿದ್ದಾರೆ. ಶಾಸಕಾಂಗ ಸಭೆಗೂ ಮುನ್ನವೇ ದೆಹಲಿಗೆ ಬರುವಂತೆ ಮಾಹಿತಿ ಬಂದಿತ್ತು. ಆದ್ರೆ, ಅದು ಆಗಿರಲಿಲ್ಲ. ಇದು ಪೂರ್ವ ನಿಯೋಜಿತ ಸಭೆ ಎಂದು ಸ್ಪಷ್ಟಪಡಿಸಿದರು.

ಕೇಂದ್ರದ ವರಿಷ್ಠರು ಸಭೆ ನಿಯೋಜನೆ ಮಾಡಿದ್ದು, ರಾಜ್ಯದ ಪರಿಸ್ಥಿತಿ ಕುರಿತು ಚರ್ಚೆ ಆಗಲಿದೆ. ಒಂದು ಕ್ಷೇತ್ರದ ಬಗ್ಗೆ ಅಲ್ಲ,ರಾಜ್ಯದ ಬಗ್ಗೆ ನಾಯಕರು ಚರ್ಚೆ ಮಾಡಲಿದ್ದಾರೆ. ಮುಂದಿನ ಲೋಕಸಭೆ ಚುನಾವಣೆ, ಸಂಘಟನೆ ದೃಷ್ಟಿಯಿಂದ ಸಭೆ ಕರೆದಿದ್ದಾರೆ. ಸರ್ಕಾರ ಬಂದ ಮೇಲೆ ಸಂಘಟನೆ, ಪಕ್ಷದ ಬೆಳವಣಿಗೆ ಬಗ್ಗೆ ಚರ್ಚೆಯಾಗಲಿದೆ. ಭೆಗೆ ನಾನು ಹೋಗಲಿದ್ದೇನೆ ಎಂದು ಮಾಹಿತಿ ನೀಡಿದರು.

ಲೋಕಸಭಾ ಚುನಾವಣೆಗೆ ನಿಲ್ಲಿಸಲು ಹೈಕಮಾಂಡ್​ ಪ್ಲ್ಯಾನ್?

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿತರುವ ವೀರಶೈವ ಲಿಂಗಾಯತ ಸಮುದಾಯದ ಪ್ರಮುಖ ನಾಯಕ ಜಗದೀಶ್ ಶೆಟ್ಟರ್​ ಅವರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್​ ಮುಂದಾಗಿದೆ. ಹೀಗಾಗಿ ಅವರು ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಸಹ ವಿಧಾನಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಇದರೊಂದಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಶೆಟ್ಟರ್ ಅವರ ವರ್ಚಸ್​ ಬಳಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಪ್ಲ್ಯಾನ್ ಮಾಡಿದೆ. ಹೀಗಾಗಿ ಈ ಮಹತ್ವದ ಸಭೆಗೆ ಆಹ್ವಾನ ನೀಡಿದೆ ಎಂದು ತಿಳಿದುಬಂದಿದೆ. ಇನ್ನು ಜಗದೀಶ್ ಶೆಟ್ಟರ್​ ಅವರನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಳಿಸಲು ಚಿಂತನೆ ನಡೆಸಿದೆ. ಬೆಳಗಾವಿ ಕ್ಷೇತ್ರದಿಂದ ಕಣಕ್ಕಳಿಸಬೇಕೋ ಅಥವಾ ಹುಬ್ಬಳ್ಳಿ-ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ನಿಲ್ಲಿಸಬೇಕೋ ಎನ್ನುವ ಬಗ್ಗೆ ಚರ್ಚೆ ನಡೆಸಿದೆ ಎನ್ನಲಾಗಿದೆ.

ಒಟ್ಟಿನಲ್ಲಿ ಮೂಲ ಕಾಂಗ್ರೆಸ್ಸಿಗರಿಗಿಂತ ಬಿಜೆಪಿಯಿಂದ ವಲಸೆ ಬಂದ ಜಗದಿಶ್ ಶೆಟ್ಟರ್​ಗೆ ಕಾಂಗ್ರೆಸ್ ಹೈಕಮಾಂಡ್​ ಹೆಚ್ಚಿನ ಮಹತ್ವದ ನೀಡುತ್ತಿರುವುದು ಕುತೂಹಲ ಹಾಗೂ ಚರ್ಚೆ ಹುಟ್ಟುಹಾಕಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ